Site icon Vistara News

Yadgiri News: ಜಿಲ್ಲೆಯು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ಹೆಮ್ಮೆಯ ಸಂಗತಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್

District In charge Secretary Manoj Jain visited and inspected Yadgiri District Hospital Medical College and Hostel

ಯಾದಗಿರಿ: ವಸತಿ ನಿಲಯವನ್ನು (Hostel) ನಿಮ್ಮ ಮನೆ (Home) ಎಂದು ಪರಿಗಣಿಸಿ ಶ್ರಮದಾನ ಮಾಡಿ ಸ್ವಚ್ಛವಾಗಿಟ್ಟುಕೊಳ್ಳಬೇಕು (Clean) ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್‌ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಯಾದಗಿರಿ ನಗರದಲ್ಲಿನ ಹಳೆ ಆಸ್ಪತ್ರೆ, ಜಿಲ್ಲಾಸ್ಪತ್ರೆ, ವೈದ್ಯಕೀಯ ಕಾಲೇಜು, ಅಲ್ಲಿಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ, ಬಂದಳ್ಳಿ ಗ್ರಾಮದ ಹತ್ತಿರವಿರುವ ಮೆಟ್ರಿಕ್ ನಂತರದ ಅಲ್ಪಸಂಖ್ಯಾತ ವಸತಿ ನಿಲಯಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಕುಡಿಯುವ ನೀರು, ಶೌಚಾಲಯ, ಊಟದ ಮನೆ, ಅಡುಗೆ ಕೋಣೆ, ಸುತ್ತಲಿನ ಪರಿಸರ ಅಚ್ಚುಕಟ್ಟಾಗಿ ಇಟ್ಟುಕೊಳ್ಳುವಲ್ಲಿ ಸಿಬ್ಬಂದಿ ವರ್ಗದವರ ಜತೆಗೆ ವಿದ್ಯಾರ್ಥಿಗಳ ಪಾತ್ರವು ಬಹಳ ಮುಖ್ಯವಾಗಿದೆ. ಮುಂದಿನ ವಿದ್ಯಾರ್ಥಿಗಳಿಗೆ ನೀವು ಮಾದರಿಯಾಗಿರಬೇಕು ಎಂದು ಅವರು ತಿಳಿಸಿದರು.

ಇದನ್ನೂ ಓದಿ: Vijayanagara News: ಹೊಸಪೇಟೆಯಲ್ಲಿ ಮನೆ ಕಳವು ಪ್ರಕರಣದ ಇಬ್ಬರು ಆರೋಪಿಗಳ ಬಂಧನ

ವಸತಿ ನಿಲಯದ ಊಟ, ಉಪಹಾರ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿ, ಗುಣಮಟ್ಟದ ಊಟ ನೀಡಿ, ಸರ್ಕಾರದ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಲೋಪವಾಗದಂತೆ ಒದಗಿಸಬೇಕು ಎಂದು ಮೇಲ್ವಿಚಾರಕರಿಗೆ ಕಟ್ಟುನಿಟ್ಟಿನ ಸೂಚಿಸಿದರು. ನಿಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಕುಂದುಕೊರತೆ ವಿಚಾರಿಸಿ, ಸಮಯ ವ್ಯರ್ಥ ಮಾಡದೆ ಉತ್ತಮವಾಗಿ ವ್ಯಾಸಂಗ ಮಾಡಬೇಕೆಂದು ಕಿವಿಮಾತು ಹೇಳಿದರು.

ಮೆಡಿಕಲ್ ಕಾಲೇಜು, ಜಿಲ್ಲಾಸ್ಪತ್ರೆ, ಹಳೆ ಆಸ್ಪತ್ರೆಗೆ ಭೇಟಿ

ಜಿಲ್ಲೆಯಲ್ಲಿ ಒಳ್ಳೆಯ ಸುಸಜ್ಜಿತ ಕಟ್ಟಡಗಳು ತಲೆಯೆತ್ತಿ ನಿಲ್ಲುತ್ತಿವೆ. ಮೂಲ ಸೌಕರ್ಯಗಳ ಜತೆಗೆ ಜಿಲ್ಲೆಯು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ತಿಳಿಸಿದರು.

ಯಾದಗಿರಿ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿದ್ದು, ಜಿಲ್ಲೆಯ ಬಹುದಿನಗಳ ಕನಸು ನನಸಾಗಿದೆ. ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಈ ಸೌಭಾಗ್ಯವನ್ನು ಸದುಪಯೋಗ ಪಡೆದು ಒಳ್ಳೆಯ ಡಾಕ್ಟರ್ ಗಳಾಗಿ ಹೊರಹೊಮ್ಮಬೇಕು ಎಂದ ಅವರು, ನೀವು ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳಾಗಿದ್ದೀರಿ ನಿಮ್ಮ ಮುಂದಿನ ಭವಿಷ್ಯಕ್ಕೆ ಶುಭವಾಗಲಿ ಎಂದು ಅಭಿನಂದಿಸಿದರು.

ಇದನ್ನೂ ಓದಿ: Vijayanagara News: ಮೊರಬ, ಬಾಚಿಗೊಂಡನಹಳ್ಳಿ, ಮಾಲವಿ ಗ್ರಾ.ಪಂಗಳಿಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಜಿಲ್ಲಾಸ್ಪತ್ರೆ, ನಗರದ ಹಳೆ ಆಸ್ಪತ್ರೆ , ಅಲ್ಲಿಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅವರು, ಆಸ್ಪತ್ರೆಗೆ ಬರುವ ಜಿಲ್ಲೆಯ ಜನರ ವೈದ್ಯಕೀಯ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸಿ ಎಂದು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಆಸ್ಪತ್ರೆಯ ಎಲ್ಲಾ ವಾರ್ಡ್‌ಗಳು, ಚುಚ್ಚು ಮದ್ದು ಕೊಠಡಿ, ಔಷಧಿ ವಿತರಣಾ ಕೊಠಡಿ, ಅಪರೇಷನ್‌ ಕೊಠಡಿ ಸೇರಿದಂತೆ ಎಲ್ಲಾ ವಿಭಾಗಳಿಗೂ ಸಂಚರಿಸಿ ಅಸ್ಪತ್ರೆಯ ಬಗ್ಗೆ ಮಾಹಿತಿ ಪಡೆದು, ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಕಲೆಹಾಕಿ ವೈದ್ಯಕೀಯ ಸೇವೆಯ ಗುಣಮಟ್ಟವನ್ನು ಪರಿಶೀಲನೆ ನಡೆಸಿದರು.

ಯಾವುದೇ ಕಾರಣಕ್ಕೂ ರೋಗಿಗಳಿಗೆ ಔಷಧಿಯ ಕೊರತೆಯಾಗಬಾರದು. ಆಸ್ಪತ್ರೆಗಳಲ್ಲಿ ಶುದ್ದ ಕುಡಿಯುವ ನೀರು ಮತ್ತು ಬಾಣಂತಿಯರಿಗೆ ಬಿಸಿ ನೀರು ಒದಗಿಸಲು ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು. ಕರ್ತವ್ಯಕ್ಕೆ ಹಾಜರಾಗುವಾಗ ವೈದ್ಯರು, ಸಿಬ್ಬಂದಿಗಳು ಸಮಯಪಾಲನೆ ಮಾಡಬೇಕು ಎಂದರು.

ಇದನ್ನೂ ಓದಿ: Road Accident : ರಸ್ತೆ ದಾಟುತ್ತಿದ್ದಾಗ ಬಡಿದ ಲಾರಿ; ಸ್ಕ್ಯಾನಿಂಗ್‌ಗೆ ಹೋಗುತ್ತಿದ್ದ ಗರ್ಭಿಣಿ ರೋಡಲ್ಲೇ ಬಿದ್ದು ಸಾವು

ಈ ಸಂದರ್ಭದಲ್ಲಿ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ, ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ, ಜಿಲ್ಲಾ ಪಂಚಾಯಿತಿ ಸಿಇಒ ಗರಿಮಾ ಪನ್ವಾರ, ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಪ್ರವೀಣಕುಮಾರ, ಡಿಎಚ್ಓ ಡಾ. ಗುರುರಾಜ ಹಿರೇಗೌಡ, ವೈದ್ಯಕೀಯ ಕಾಲೇಜು ಡೀನ್ ಹನುಮಂತ ಪ್ರಸಾದ್, ಮೆಡಿಕಲ್ ಕಾಲೇಜಿನ ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ ಚಟ್ನಳ್ಳಿ, ಆರ್‌ಸಿಎಚ್ಒ ಡಾ. ಮಲ್ಲಪ್ಪ, ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ, ಯಾದಗಿರಿ ತಾಪಂ ಇಒ ಬಸವರಾಜ ಸೇರಿದಂತೆ ಇತರರು ಇದ್ದರು.

Exit mobile version