ಬೆಂಗಳೂರು: ಶಾಲೆಗಳು ತಮ್ಮ ಪುರಾತನ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು. ಮಕ್ಕಳ ಜೀವಹರಣವಾಗುವುದನ್ನು ತಪ್ಪಿಸಬೇಕು. ಶಿಸ್ತು ಕ್ರಮ ತೆಗೆದುಕೊಳ್ಳುವ ಭರದಲ್ಲಿ ಮಕ್ಕಳ ಮೇಲಾಗುವ ಪರಿಣಾಮವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹೀಗಾಗಿ ವಿದ್ಯಾರ್ಥಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಶಾಲೆ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ನ ನ್ಯಾ.ಎಂ. ನಾಗಪ್ರಸನ್ನ ಅವರ ಏಕ ಸದಸ್ಯ ಪೀಠವು, ಶಾಲೆಯ ಶಿಸ್ತು ಕ್ರಮದಿಂದಾಗಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಾಲೆಗಳು ವಿದ್ಯಾರ್ಥಿಗಳ ಮೇಲೆ ಕಠಿಣ ಶಿಸ್ತು ಕ್ರಮ ಕೈಗೊಳ್ಳುವ ನೀತಿಯನ್ನು ಮರು ಪರಿಶೀಲಿಸಬೇಕು ಎಂದು ಶಾಲೆಗಳಿಗೆ ಸಲಹೆ ನೀಡಿದೆ.
ಏನಿದು ಪ್ರಕರಣ?
ಕೊಡಗಿನ ಶಾಲೆಯೊಂದಕ್ಕೆ ಮದ್ಯ ತಂದಿದ್ದ ಆರೋಪದ ಹಿನ್ನೆಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಯನ್ನು ಅಮಾನತು ಮಾಡಿ ಶಾಲೆ (Education News) ಆದೇಶಿಸಿತ್ತು. ಕೊನೆಗೆ ಪರೀಕ್ಷಾ ಸಮಯದಲ್ಲಿ ಅವಕಾಶ ಕೋರಿದಾಗ ಶಾಲೆಯಲ್ಲಿ ಪರೀಕ್ಷೆಗೆ ಕೂರಿಸದೇ, ಮನೆಯಿಂದಲೇ ಬರೆಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಆನ್ಲೈನ್ ಲಿಂಕ್ ಕಳುಹಿಸದ ಹಿನ್ನೆಲೆಯಲ್ಲಿ ವಿದ್ಯಾರ್ಥಿಯು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಶಾಲಾ ಸಿಬ್ಬಂದಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಕೇಸ್ ಅನ್ನು ದಾಖಲು ಮಾಡಲಾಗಿತ್ತು.
ಇದನ್ನೂ ಓದಿ: ಹಲೋ ಸಚಿವರೇ: 1978ಕ್ಕಿಂತ ಹಿಂದಿನ ಅರಣ್ಯ ಒತ್ತುವರಿದಾರರಿಗೆ ಈಶ್ವರ ಖಂಡ್ರೆ ಅಭಯ, ಕಸ್ತೂರಿ ರಂಗನ್ ವರದಿ ಆತಂಕ ಬೇಡ
ಆದರೆ, ಈ ಪ್ರಕರಣಕ್ಕೆ ಪೊಲೀಸರು ಬಿ ರಿಪೋರ್ಟ್ ಅನ್ನು ಸಲ್ಲಿಸಿದ್ದರು. ಇದನ್ನು ವಿಚಾರಣಾ ನ್ಯಾಯಾಲಯವು ತಿರಸ್ಕರಿಸಿತ್ತು. ಈ ಸಂಬಂಧ ಶಾಲೆಯ ನಿರ್ದೇಶಕ, ಪ್ರಿನ್ಸಿಪಾಲ್, ವಾರ್ಡನ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಕಠಿಣ ಶಿಸ್ತು ಕ್ರಮದಿಂದ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಪರಿಣಾಮವಾಗಲಿದೆ. ಶಾಲೆಗಳು ತಮ್ಮ ಪುರಾತನ ಮನಸ್ಥಿತಿಯನ್ನು (education news) ಬದಲಿಸಿಕೊಳ್ಳಬೇಕು. ಮಕ್ಕಳ ಜೀವಹರಣವಾಗುವುದನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದೆ.