ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ದರ ಪರಿಷ್ಕರಣೆಗೆ (Electricity Price Hike) ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ಮುಂದಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ. ಈ ಮೂಲಕ ರಾಜ್ಯದ ಜನರಿಗೆ ಕರೆಂಟ್ ಶಾಕ್ ಕೊಡಲಿದೆ.
ವಿದ್ಯುತ್ ವಿತರಣಾ ಕಂಪನಿಗಳಿಂದ ದರ ಪರಿಷ್ಕರಣೆಗೆ ಪ್ರಸ್ತಾವನೆ ಹಿನ್ನೆಲೆ ಕೆಇಆರ್ಸಿ (Karnataka Electricity Regulatory Commission) ಇದೇ 13ರಿಂದ ಸಾರ್ವಜನಿಕ ಅದಾಲತ್ ಕರೆದಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಿಂದ ರಾಜ್ಯದ ಬೇರೆ ಬೇರೆ ನಗರಗಳಲ್ಲಿ ಸಾರ್ವಜನಿಕ ಅದಾಲತ್ ನಡೆಯಲಿದೆ.
ಸಾರ್ವಜನಿಕ ಅದಾಲತ್ನಲ್ಲಿನ ಆಕ್ಷೇಪ, ಸಲಹೆ, ಸೂಚನೆಗಳ ಪರಿಶೀಲನೆ ಬಳಿಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನಿರ್ಧಾರ ಪ್ರಕಟಿಸಲಿದೆ. ಈಗಾಗಲೇ ಯುನಿಟ್ಗೆ 1.50 ರೂ.ನಿಂದ 2 ರೂಪಾಯಿವರೆಗೆ ದರ ಏರಿಕೆಗೆ ಪ್ರಸ್ತಾವನೆಯನ್ನು ವಿದ್ಯುತ್ ವಿತರಣ ಕಂಪನಿಗಳು ಸಲ್ಲಿಸಿವೆ. ಕಳೆದ 2022ರ ಏಪ್ರಿಲ್ನಲ್ಲಿ ಯೂನಿಟ್ಗೆ 35 ಪೈಸೆ ಹೆಚ್ಚಳ ಮಾಡಿತ್ತು. ಕಳೆದ ಸೆಪ್ಟಂಬರ್ನಲ್ಲಿ ಇಂಧನ ಹೊಂದಾಣಿಕೆ ಹಿನ್ನೆಲೆ ಪ್ರತಿ ಯುನಿಟ್ಗೆ 24 ಪೈಸೆಯಿಂದ 43 ಪೈಸೆಗೆ ಏರಿಕೆ ಮಾಡಲಾಗಿತ್ತು.
ಇದನ್ನೂ ಓದಿ: Money Heist: ಎಟಿಎಂಗೆ ತುಂಬಬೇಕಿದ್ದ ಒಂದು ಕೋಟಿ ರೂ. ಹಣದ ಜೊತೆ ವ್ಯಕ್ತಿ ಪರಾರಿ!
ಈಗ ಮತ್ತೆ ದರ ಪರಿಷ್ಕರಣೆ ಚರ್ಚೆಗೆ ಬಂದಿದ್ದು, ದರ ಏರಿಕೆಯ ಬರೆ ಜನರಿಗೆ ಎದುರಾಗಿದೆ. ಇದರ ಮಧ್ಯೆ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಸರ್ಕಾರ ದರ ಪರಿಷ್ಕರಣೆಯನ್ನು ಮುಂದೂಡಬಹುದು ಎಂಬ ಲೆಕ್ಕಾಚಾರವೂ ಇದೆ. ಚುನಾವಣೆ ಮುಗಿದ ಬಳಿಕ ದರ ಪರಿಷ್ಕರಣೆ ಆಗಬಹುದು.