Site icon Vistara News

Video: ಬೆಳಗಾವಿಯಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ; ಮುರಿದು ಬಿದ್ದ ಚಕ್ರ

Emergency plane landing In Belagavi

#image_title

ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ಹೊರಟಿದ್ದ ತರಬೇತಿ ವಿಮಾನವೊಂದು ತುರ್ತುಭೂಸ್ಪರ್ಶವಾಗಿದೆ (Plane Emergency Landing). ಈ ವಿಮಾನದಲ್ಲಿ ಇಬ್ಬರು ಪೈಲೆಟ್​ಗಳಿದ್ದರು. ಅದೃಷ್ಟವಶಾತ್​ ಯಾರಿಗೂ ಅಪಾಯವಾಗಲಿಲ್ಲ. ಆದರೆ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ತರಬೇತುದಾರನಿಗೆ ಕಾಲಿಗೆ ಗಾಯವಾಗಿದೆ. ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಿಮಾನಯಾನ ತರಬೇತಿ ಸಂಸ್ಥೆ ರೆಡ್​ಬರ್ಡ್​ಗೆ ಸೇರಿದ ವಿಮಾನ ಇದಾಗಿದ್ದು, ಸಾಂಬ್ರಾದಿಂದ ಟೇಕ್ ಆಫ್​ ಕೆಲವೇ ಹೊತ್ತಲ್ಲಿ ಹೊನ್ನಿಹಾಳದ ಹೊರವಲಯದಲ್ಲಿ ಭೂಸ್ಪರ್ಶವಾಗಿದೆ. ಬಲವಂತವಾಗಿ ನೆಲದ ಮೇಲೆ ನಿಂತ ಪರಿಣಾಮ ಅದರ ಚಕ್ರಗಳೇ ಮುರಿದು ಹೋಗಿವೆ. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಮಾರಿಹಾಳ ಠಾಣೆ ಪೊಲೀಸ್​, ವಾಯುಪಡೆ ಸಿಬ್ಬಂದಿ, ವೈದ್ಯರು ತೆರಳಿದ್ದರು. ತಾಂತ್ರಿಕ ದೋಷದಿಂದ ಹೀಗೆ ಭೂಸ್ಪರ್ಶವಾಗಿದ್ದು, ಭಾರಿ ದುರಂತವೊಂದು ಸ್ವಲ್ಪದರಲ್ಲಿ ತಪ್ಪಿದೆ.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಗೂ ಪೂರ್ವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್​ಡಿ ದೇವೇಗೌಡರು ಪ್ರಯಾಣ ಮಾಡುತ್ತಿದ್ದ ಹೆಲಿಕಾಪ್ಟರ್​ ಅರಕಲುಗೂಡಲ್ಲಿ ತುರ್ತು ಭೂಸ್ಪರ್ಶಗೊಂಡಿತ್ತು. ಅಂದೂ ಕೂಡ ಹೆಲಿಕಾಪ್ಟರ್​​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಅದನ್ನು ಎಮರ್ಜೆನ್ಸಿ ಲ್ಯಾಂಡ್ ಮಾಡಿಸಲಾಗಿತ್ತು. ಡಿಕೆ ಶಿವಕುಮಾರ್​ ಇದ್ದ ವಿಮಾನಕ್ಕೆ ರಣಹದ್ದು ಬಡಿದು, ಅದನ್ನು ಪೈಲೆಟ್​ ಎಚ್​ಎಎಲ್​ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಭೂಸ್ಪರ್ಶ ಮಾಡಿಸಿದ್ದ ಘಟನೆಯೂ ನಡೆದಿತ್ತು. ಇನ್ನು ಇದೇ ವರ್ಷ ಏಪ್ರಿಲ್​ನಲ್ಲಿ ಬೆಂಗಳೂರಿನಿಂದ ಅಭುದಾಬಿಗೆ ಹೊರಟಿದ್ದ, 200 ಪ್ರಯಾಣಿಕರನ್ನು ಒಳಗೊಂಡ ವಿಮಾನವೊಂದು ವಾಪಸ್​ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೇ ಬಂದು ಲ್ಯಾಂಡ್ ಆಗಿತ್ತು. ಟೇಕ್​ ಆಫ್​ ಆದ ಕೆಲವೇ ಹೊತ್ತಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಇದಕ್ಕೆ ಕಾರಣವಾಗಿತ್ತು.

Exit mobile version