Site icon Vistara News

Fertilizer problem | ಶಿವಮೊಗ್ಗದ ರೈತರಿಗೆ ಕಲ್ಲು, ಜೇಡಿಮಣ್ಣು ಮಿಶ್ರಿತ ರಸಗೊಬ್ಬರ ಪೂರೈಕೆ; ರೈತರ ಆಕ್ರೋಶ

Fertilizer problem in shimogga ಭೂಮಿಪುತ್ರ ರಸಗೊಬ್ಬರ ಕಳಪೆ ನಕಲಿ

ಶಿವಮೊಗ್ಗ: ಪ್ರತಿ ವರ್ಷ ಕೃಷಿ ಚಟುವಟಿಕೆ ವೇಳೆ ರಾಜ್ಯದ ಒಂದಲ್ಲಾ ಒಂದು ಕಡೆ ಕಳಪೆ ಗುಣಮಟ್ಟದ ಇಲ್ಲವೇ ನಕಲಿ ರಸಗೊಬ್ಬರಗಳ ಮಾರಾಟದಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಈಗ ಶಿವಮೊಗ್ಗದಲ್ಲಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಜೇಡಿಮಣ್ಣು, ಕಲ್ಲು ಮಿಶ್ರಣದ ರಸಗೊಬ್ಬರವನ್ನು (Fertilizer problem) ನೀಡಲಾಗಿದೆ.

ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದ ರೈತ ರಾಜಪ್ಪ ಎಂಬುವವರು ಖರೀದಿ ಮಾಡಿದ ರಸಗೊಬ್ಬರದಲ್ಲಿ ಕಲಬೆರಕೆ ಪತ್ತೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಬೆಳಗಾವಿ ಮೂಲದ ಮಲಪ್ರಭಾ ಫರ್ಟಿಲೈಜರ್ ಲಿ. ಕಂಪನಿಯ ರಸಗೊಬ್ಬರವನ್ನು ಖರೀದಿ ಮಾಡಿದ್ದು, ಅದರಲ್ಲಿ ಈ ಮೋಸವಾಗಿದೆ ಎಂದು ಆರೋಪಿಸಿದ್ದಾರೆ.

ಅಡಿಕೆ ಬೆಳೆಗೆ ಗೊಬ್ಬರ ಹಾಕುವ ಸಂಬಂಧ ಭೂಮಿಪುತ್ರ ಎಂಬ ಹೆಸರಿನ ರಸಗೊಬ್ಬರವಾದ 17-17-17 ಹಾಗೂ 14-06-20 ಚೀಲವನ್ನು ಖರೀದಿಸಿದ್ದೆ. ಇದನ್ನು ತೋಟಕ್ಕೆ ಹಾಕಲು ತೆರೆದಾಗ ನಕಲಿ ಎಂಬ ಅಸಲಿ ಸಂಗತಿ ಬೆಳಕಿಗೆ ಬಂದಿದೆ. ಇದರಿಂದ ತಮಗೆ ತೀವ್ರ ನಷ್ಟವಾಗಿದೆ. ಗೊಬ್ಬರ ಹಾಕುವ ಸಂಬಂಧ ಕಾರ್ಮಿಕರನ್ನೂ ಕರೆಸಿದ್ದು, ಅವರಿಗೆ ನೀಡುವ ಹಣವೂ ಈಗ ನಷ್ಟವಾದಂತೆ ಆಗಿದೆ.

ಗೊಬ್ಬರದಲ್ಲಿ ಜೇಡಿಮಣ್ಣು, ಕಲ್ಲು ಮಿಶ್ರಣವಿರುವುದರಿಂದ ರಸಗೊಬ್ಬರವನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಈ ಸಂಬಂಧ ಕೂಡಲೇ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಪ್ರತಿಕ್ರಿಯೆ ನೀಡಿರುವ ರೈತ ರಾಜಪ್ಪ, ಇದೇ ರೀತಿ ಗ್ರಾಮದಲ್ಲಿ ಮತ್ತೂ ಹಲವರಿಗೆ ವಂಚನೆಯಾಗಿದೆ. ಈಗ ಎಲ್ಲರಿಗೆ ನ್ಯಾಯ ಬೇಕಿದೆ. ಅಲ್ಲದೆ, ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ | Shahrukh Khan | ಶುರುವಾಯ್ತು ಬಾಯ್ಕಾಟ್‌ ಅಭಿಯಾನ: ʻಪಠಾಣ್‌ʼ ಸಿನಿಮಾ ವಿರುದ್ಧ ನೆಟ್ಟಿಗರ ಆಕ್ರೋಶ, ಏನಿದು ವಿವಾದ?

Exit mobile version