ಚಿತ್ತಾಪುರ: ಪಟ್ಟಣದ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ (Morarji Desai Residential School) ವಿದ್ಯಾರ್ಥಿಗಳಿಗಾಗಿ ಮಾಡಿರುವ ಊಟದಲ್ಲಿ ಹಲ್ಲಿ (Lizard) ಬಿದ್ದ ಪರಿಣಾಮ ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಊಟದಲ್ಲಿ ಹಲ್ಲಿ ಬಿದ್ದಿಲ್ಲ ಚಿಕ್ಕ ಹುಳು ಕಾಣಿಸಿಕೊಂಡಿದೆ ಎಂದು ಪ್ರಾಚಾರ್ಯರು ವಾದ ಮಾಡುತ್ತಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವಿಷಾಹಾರ (Food Poisoning) ಆಗಲು ಕಾರಣ ಏನು ಎಂಬ ಬಗ್ಗೆ ತನಿಖೆ ಮಾಡಬೇಕೆಂಬ ಆಗ್ರಹ ಕೇಳಿಬಂದಿದೆ.
ಊಟ ಮಾಡಿದ ಶಾಲೆಯ ಸುಮಾರು 13 ವಿದ್ಯಾರ್ಥಿನಿಯರಲ್ಲಿ ವಾಂತಿ ಪ್ರಾರಂಭವಾಗಿ ಅಸ್ವಸ್ಥರಾಗಿದ್ದು, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಇನ್ನು ಈ ವಿಷಯದ ಬಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿಗಳಿಗೆ ಮಾಹಿತಿ ಕೇಳಿದರೆ ಊಟ ಮಾಡುತ್ತಿರುವಾಗ ಸಾರಿನಲ್ಲಿ ಸತ್ತ ಹಲ್ಲಿ ಬಂದಿದ್ದು, ಅರ್ಧಕ್ಕೆ ಊಟ ಮಾಡುವುದನ್ನು ನಿಲ್ಲಿಸಿದ್ದೇವೆ. ನಂತರ ವಾಂತಿ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Rain News : ತುಂಡಾಗಿ ಬಿದ್ದಿದ್ದ ತಂತಿ ತಗುಲಿ ವೃದ್ಧೆ ಸಾವು; ನ್ಯಾಯಕ್ಕಾಗಿ ಶವ ಎತ್ತಲು ಬಿಡದ ರೈತರು
ಸಾರಿನಲ್ಲಿ ಸತ್ತ ಹಲ್ಲಿ ಕಾಣಿಸಿಕೊಂಡ ವಿಷಯವಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಶರಣಪ್ಪ ಕವಡೆ ಅವರಿಗೆ ಕರೆ ಮೂಲಕ ಮಾಹಿತಿ ಕೇಳಿದರೆ, ಸಾರಿನಲ್ಲಿ ಚಿಕ್ಕ ಹುಳು ಕಾಣಿಸಿಕೊಂಡಿದ್ದು, ಬಾಲಕಿಯರು ಸಿಡಿಮಿಡಿಗೊಂಡು ವಾಂತಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.