Site icon Vistara News

Football Tournament | ಗುಂಡೂರಾವ್ ಸ್ಮರಣಾರ್ಥ; ನಾಳೆಯಿಂದ ಮೂರು ದಿನ ಗುಂಡೂರಾವ್ ಕಪ್ ಫುಟ್ಬಾಲ್‌ ಟೂರ್ನಿ

Footballers

ಬೆಂಗಳೂರು: ಗುಂಡೂರಾವ್ ಫೌಂಡೇಶನ್ ವತಿಯಿಂದ ಕಳೆದ ನಾಲ್ಕು ವರ್ಷಗಳಿಂದ ಗುಂಡೂರಾವ್ ಸ್ಮರಣಾರ್ಥ ಆರ್.ಗುಂಡೂರಾವ್ ಕಪ್ ಟೂರ್ನಮೆಂಟ್ (Football Tournament ) ನಡೆಸುತ್ತಾ ಬಂದಿದ್ದು, ಜನವರಿ 6 ರಿಂದ 8ರ ವರೆಗೆ ಮೂರು ದಿನಗಳ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಟೂರ್ನಿಯನ್ನು ಶ್ರೀರಾಮಪುರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಫುಟ್‌ಬಾಲ್‌ ಪ್ರಿಯ ಗುಂಡೂರಾವ್‌
ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಆರ್. ಗುಂಡೂರಾವ್‌ರವರು ಕ್ರೀಡೆ ಬಗ್ಗೆ ಅಪಾರ ಆಸಕ್ತಿಯುಳ್ಳವರಾಗಿದ್ದರು. ವಿಶೇಷವಾಗಿ ಪುಟ್ಬಾಲ್ ಪ್ರಿಯರಾಗಿದ್ದರು. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕ್ರೀಡೆಗೆ ಉತ್ತೇಜನ ನೀಡುವುದರ ಮೂಲಕ ತಮ್ಮ ಕ್ರೀಡಾಪ್ರೇಮ ಮೆರೆದಿದ್ದರು. ಪುಟ್ಬಾಲ್ ಮೇಲಿನ ಪ್ರೀತಿಯ ದ್ಯೋತಕವಾಗಿ ಅವರ ಒಡನಾಡಿಗಳು ಹಾಗೂ ಅವರ ಸಮಕಾಲೀನರು ಗುಂಡೂರಾವ್ ಸ್ಮರಣಾರ್ಥ ವಿವಿಧೆಡೆ ಪುಟ್ಬಾಲ್ ಟೂರ್ನಮೆಂಟ್ ಅನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ.

ನಗದು ಬಹುಮಾನ
ಈ ಪಂದ್ಯಾವಳಿಯಲ್ಲಿ‌ ನಗರದ 16 ತಂಡಗಳು ಭಾಗಿಯಾಗಲಿದ್ದು, ವಿಜೇತ ತಂಡಕ್ಕೆ ‘ಆರ್.ಗುಂಡೂರಾವ್ ಫೌಂಡೇಶನ್’ ವತಿಯಿಂದ ಪ್ರಥಮ ಬಹುಮಾನದ ರೂಪದಲ್ಲಿ ₹1,11,111 ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುತ್ತಿದೆ. ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ₹55,555 ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುತ್ತಿದೆ. ಜತೆಗೆ ಉತ್ತಮ ಪ್ರದರ್ಶನ ತೋರಿದ ಆಟಗಾರರಿಗೆ ವೈಯುಕ್ತಿಕ ಬಹುಮಾನ ನೀಡಲಾಗುತ್ತಿದೆ.

ಅತ್ಯಂತ ರೋಚಕ ಹಣಾಹಣಿಯಲ್ಲಿ ನಡೆಯಲಿರುವ ಫುಟ್ಬಾಲ್ ಪಂದ್ಯಾವಳಿಯನ್ನು ಕ್ರೀಡಾಪ್ರೇಮಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದರ ಜತೆಗೆ ಪಂದ್ಯಾವಳಿಯನ್ನು ಯಶಸ್ವಿಗೊಳಿಸಿಕೊಡಬೇಕೆಂದು ಶಾಸಕ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ | Shikshan Habba | ಶಿಕ್ಷಣ ಹಬ್ಬಕ್ಕೆ ಮರು ಚಾಲನೆ; ಜನವರಿ 7ರಂದು ಅಭಿನಂದನಾ ಸಮಾರಂಭ

Exit mobile version