Site icon Vistara News

MyBharat | ಸ್ವಾತಂತ್ರ್ಯೋತ್ಸವ ಸರ್ಕಾರಿ ಕಾರ್ಯಕ್ರಮವಾಗದೆ ಜನೋತ್ಸವವಾಗಲಿ: ಹರಿಪ್ರಕಾಶ್

ಬೆಂಗಳೂರು: 75ನೇ ಸ್ವಾತಂತ್ರ್ಯೋತ್ಸವ ವರ್ಷಾಚರಣೆಯ ಪ್ರಯುಕ್ತ ದೇಶ ಭಕ್ತಿ ಮೂಡಿಸುವ ಯುವ ಅಭಿಯಾನವನ್ನು ದಿಶಾ ಭಾರತ್ ಫೌಂಡೇಶನ್ ಆರಂಭಿಸಿದೆ. #MyBharat ಅಭಿಯಾನದ ಭಾಗವಾಗಿ ನಗರದ ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನದ ಮುಂದೆ ಸ್ವರಾಜ್ಯ ರಥಕ್ಕೆ ವಿಸ್ತಾರ ನ್ಯೂಸ್‌ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ ಕೋಣೆಮನೆ ಮತ್ತು ನಟಿ ಮಾಳವಿಕಾ ಅವಿನಾಶ್ ಸೋಮವಾರ ಚಾಲನೆ ನೀಡಿದರು.

ಹರಿಪ್ರಕಾಶ್ ಕೋಣೆಮನೆ ಅವರು ಮಾತನಾಡಿ “”ನಮ್ಮ ದೇಶಕ್ಕೆ ಸ್ಯಾತಂತ್ರ್ಯ ದೊರೆತು 75 ವರ್ಷ ತುಂಬಿರುವುದು ರೋಮಾಂಚನದ ಸಂಗತಿ. ಸ್ವಾತಂತ್ರ್ಯೋತ್ಸವ ಸರ್ಕಾರಿ ಕಾರ್ಯಕ್ರಮವಾಗಬಾರದು. ಇದು ಜನೋತ್ಸವ ಕಾರ್ಯಕ್ರಮವಾಗಬೇಕು. ಈ ಸಂದರ್ಭದಲ್ಲಿ ದಿಶಾ ಭಾರತ್ ಸಂಸ್ಥೆ ಮೌಲಿಕ ಶಿಕ್ಷಣದ ಮೂಲಕ ಹಾಗೂ ಭಾರತದ ಪುನರುಜ್ಜೀವನವನ್ನು ಮಾಡಲು ಸಂಕಲ್ಪ ಮಾಡಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸ್ವಾತಂತ್ರ್ಯ ರಥ ಸಂಚರಿಸಲಿದೆʼʼ ಎಂದರು.

ನಟಿ ಮಾಳವಿಕಾ ಅವಿನಾಶ್ ಮಾತನಾಡಿ “”75ನೇ ಸ್ವಾತಂತ್ರ್ಯ ಉತ್ಸವವನ್ನು ಭಾರತ ಸಂಭ್ರಮದಿಂದ ಆಚರಣೆ ಮಾಡಲಿದೆ. ಇದರ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿಕೊಂಡಿರುವುದು ಹೆಮ್ಮೆಯ ವಿಷಯ. ರಾಷ್ಟ್ರವಾದಿ ಸಂಸ್ಥೆಯಾದ ದಿಶಾ ಭಾರತ್ ಫೌಂಡೇಶನ್ ಸ್ವರಾಜ್ಯ ರಥವನ್ನು ಸಿದ್ಧಪಡಿಸಿದೆ. ಇದು ದೇಶದ ವೈಶಿಷ್ಟ್ಯ ಹಾಗೂ ಸ್ವಾತಂತ್ರ್ಯಕ್ಕೆ ಹೋರಾಡಿದ ವ್ಯಕ್ತಿಗಳ ಬಗ್ಗೆ ಜನರಿಗೆ ಪರಿಚಯ ಮಾಡುತ್ತಿರುವುದು ಮೆಚ್ಚುಗೆಯ ವಿಷಯ. ನಾನು ಸ್ವರಾಜ್ಯ ರಥಕ್ಕೆ ಚಾಲನೆ ಕೊಟ್ಟಿದ್ದು ನನ್ಮ ಸೌಭಾಗ್ಯವಾಗಿದೆ. ಈ ಬಾರಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಅತ್ಯಂತ ಗೌರವದಿಂದ, ಹೆಮ್ಮೆಯಿಂದ ಆಚರಣೆ ಮಾಡೋಣʼʼ ಎಂದು ಹೇಳಿದರು.

ಇದನ್ನೂ ಓದಿ | ಸ್ವಾತಂತ್ರ್ಯದ ಅಮೃತ ಮಹೋತ್ಸವ | ಎಲ್ಲ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಾಟ: ಎನ್. ರವಿಕುಮಾರ್

ದಿಶಾ ಭಾರತ್ ಸಂಸ್ಥೆ ಕಳೆದ 17 ವರ್ಷಗಳಿಂದ ಶಾಲೆ ಹಾಗೂ ಕಾಲೇಜುಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ ದೇಶ ಮೊದಲು ಎಂಬ ಸಂಕಲ್ಪವನ್ನು ಈ ಫೌಂಡೇಶನ್‌ ಹೊಂದಿದ್ದು, ಕಳೆದ ಮೂರು ವರ್ಷಗಳಿಂದ “ನನ್ನ ಭಾರತʼ ಎಂಬ ಅಭಿಯಾನ ನಡೆಸುತ್ತಿದೆ. ಸ್ವರಾಜ್ಯ ರಥಯಾತ್ರೆ ಆ.೧ ರಿಂದ ಆರಂಭಗೊಂಡು ಬೆಂಗಳೂರಿನಿಂದ ಒಟ್ಟು 30 ಜಿಲ್ಲೆಗಳಲ್ಲಿ ಸಂಚಾರ ಮಾಡಲಿದೆ. ನಮ್ಮ ದೇಶದ ವಿಶೇಷತೆ ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿರುವ ವ್ಯಕ್ತಿಗಳ ಕುರಿತು LED ಮೂಲಕ ಜಿಲ್ಲೆಯ ಪ್ರತಿ ಶಾಲೆ-ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತಿಳಿಸಲಿದೆ.

ಸ್ವರಾಜ್ಯ ರಥ ಎಲ್ಲೆಲ್ಲಿ ಸಂಚರಿಸಲಿದೆ?
ಆ.೧ ರಂದು ಬೆಂಗಳೂರು, ಬಿಡದಿ, ರಾಮನಗರ,‌ ಚನ್ನಪಟ್ಟಣ, ಮದ್ದೂರು, ಮಂಡ್ಯದಲ್ಲಿ ಒಟ್ಟು 100 ಕಿ.ಮೀ; ಆ. 2ರಂದು ಚಾಮರಾಜನಗರ, ಮೈಸೂರಿನಲ್ಲಿ 80 ಕಿ.ಮೀ; ಆ.3ರಂದು ಕೊಡಗಿನಲ್ಲಿ 100 ಕಿ.ಮೀ; ಆ.4ರಂದು ಮಂಗಳೂರು, ಉಡುಪಿಯಲ್ಲಿ 100 ಕಿ.ಮೀ; ಆ. 5ರಂದು ಧಾರವಾಡ, ಬೆಳಗಾವಿಯಲ್ಲಿ 150 ಕಿ.ಮೀ; ಆ.6ರಂದು ಬಾಗಲಕೋಟೆ, ಬಿಜಾಪುರ; ಆ.7ರಂದು ಗುಲ್ಬರ್ಗ, ಬೀದರ್; ಆ. 8ರಂದು ಯಾದಗಿರಿ, ರಾಯಚೂರು; ಆ.೯ರಂದು ಕೊಪ್ಪಳ, ಗದಗ; ಆ.10ರಂದು ಹುಬ್ಬಳ್ಳಿ, ಹಾವೇರಿ; ಆ.11ರಂದು ಬಳ್ಳಾರಿ, ದಾವಣಗೆರೆ; ಆ.12ರಂದು ಚಿತ್ರದುರ್ಗ, ಶಿವಮೊಗ್ಗ; ಆ.13ರಂದು ಚಿಕ್ಕಮಗಳೂರು, ಹಾಸನ; ಆ.14ರಂದು ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ; ಆ.15ರಂದು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಯಲ್ಲಿ ಸ್ವರಾಜ್ಯ ರಥ ಸಂಚರಿಸಲಿದೆ.

ಸ್ವಾಂತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ದಿಶಾ ಭಾರತ್‌ ಫೌಂಡೇಶನ್‌ನಿಂದ ನನ್ನ ಭಾರತ ಅಭಿಯಾನದ ಭಾಗವಾಗಿ ಆಗಸ್ಟ್ 15ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಭಿಯಾನದಲ್ಲಿ 20 ರೀತಿಯ ಕಾರ್ಯಕ್ರಮಗಳು ನಡೆಯಲಿವೆ. ಇವು ದಿಶಾ ಭಾರತ್ ಫೇಸ್‌ಬುಕ್ ಪೇಜ್: www.facebook.com/DishaBharat ಮೂಲಕ ಪ್ರಸಾರವಾಗಲಿದೆ.

ಅಭಿಯಾನದಲ್ಲಿ 20 ರೀತಿಯ ಕಾರ್ಯಕ್ರಮಗಳು:

ವಿದ್ಯಾರ್ಥಿಗಳಿಂದ ದೇಶಭಕ್ತಿ ಕಾರ್ಯಕ್ರಮ

  1. ನಿತ್ಯ ಸಂಜೆ 4ರಿಂದ ನಾನಾ ರಾಜ್ಯಗಳ ಕಾಲೇಜುಗಳ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಕಥಾಮಾಲಿಕೆ, ರಾಷ್ಟ್ರೀಯ ವಿಚಾರಗಳ ಕುರಿತು ಭಾಷಣ, ದೇಶಭಕ್ತಿಗೀತೆಗಳ ಗಾಯನ, ಸಾಮಾಜಿಕ ವಿಷಯಗಳ ಕುರಿತು ವಿಶ್ಲೇಷಣೆ, ರಾಷ್ಟ್ರಭಾವ ಜಾಗರಣದ ನೃತ್ಯಗಳು ಸೇರಿದಂತೆ ವಿವಿಧ ಚಟುವಟಿಕೆ.
  2. ತಜ್ಞರಿಂದ ಉಪನ್ಯಾಸ ಸರಣಿ: ಭಾರತದ ಸ್ವಾತಂತ್ರ್ಯ ಸಂಗ್ರಾಮ, ಸ್ವಾತಂತ್ರೋತ್ತರ ಭಾರತ, ಭವಿಷ್ಯದ ಭಾರತ ಇತ್ಯಾದಿ ವಿಷಯಗಳ ಕುರಿತು ಆಗಸ್ಟ್ 1 ರಿಂದ 15ರ ತನಕ ನಿತ್ಯ ಸಂಜೆ 7ಕ್ಕೆ ಆನ್‌ಲೈನ್‌ ಉಪನ್ಯಾಸ ಸರಣಿ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಷಯ ತಜ್ಞರು ಉಪನ್ಯಾಸ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
  3. ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ: ‘ಸ್ವರಾಜ್ಯ ಸಂಗ್ರಾಮ ಮತ್ತು ರಾಷ್ಟ್ರ ಭಾವ ಜಾಗರಣ’ “Swarajya Movement and Rise of Nationalism” ಎಂಬ ವಿಷಯದ ಕುರಿತು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ.
  4. ಭಗತ್ ಸಿಂಗ್ ಕುರಿತ ನಾಟಕ: ಅಪ್ರತಿಮ ಕ್ರಾಂತಿಕಾರಿ ಭಗತ್‌ ಸಿಂಗ್ ಜೀವನ ಆಧಾರಿತ ‘ಭಗತ್‌ ಸಿಂಗ್’ ಕಿರು ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ. ವಿವಿಧ ಕಾಲೇಜುಗಳಲ್ಲಿ, ಆಯ್ದ ಸಂಘ ಸಂಸ್ಥೆಗಳಲ್ಲಿ, ಸಾಂಸ್ಕೃತಿಕ ವೇದಿಕೆಗಳಲ್ಲಿ ಈ ನಾಟಕ ಪ್ರದರ್ಶನಗೊಳ್ಳಲಿದೆ.
  5. ವಾಕಥಾನ್: ಯುವಕರಲ್ಲಿ ಪ್ರೇರಣೆ, ಕ್ರಾಂತಿಕಾರಿಗಳ ಕುರಿತು ಆದರ್ಶ, ದೇಶದ ಬಗ್ಗೆ ಸ್ವಾಭಿಮಾನ ಮೂಡಿಸುವ ಉತ್ಸಾಹದಾಯಕ ಕಾಲ್ನಡಿಗೆ ಕಾರ್ಯಕ್ರಮ ‘ಸ್ವರಾಜ್ಯ ವಾಕಥಾನ್’ ಅನೇಕ ಕಡೆಗಳಲ್ಲಿ ನಡೆಯಲಿದೆ.
  6. ಯುವ ಸಂವಾದ: ಭಾರತದ ಪ್ರಾಚೀನ ಹಿರಿಮೆ ಗರಿಮೆಗಳು, ವರ್ತಮಾನದ ತಲ್ಲಣಗಳು ಹಾಗೂ ಭವಿಷ್ಯದ ಭಾರತ ಎಂಬ ಮೂರು ವಿಷಯಗಳ ಕುರಿತು ಯುವ ಚಿಂತಕರಿಂದ ಸಂವಾದ ಕಾಠ್ಯಕ್ರಮಗಳು ಮೂಡಿಬರಲಿವೆ.
  7. ನನ್ನ ರಾಜ್ಯ – ನಮ್ಮ ಸ್ವಾತಂತ್ರ್ಯ ಹೋರಾಟಗಾರರು: ಭಾರತದ ಎಲ್ಲ ರಾಜ್ಯಗಳ ವಿಶೇಷತೆಗಳನ್ನು ಬಿಂಬಿಸುವ ಹಾಗೂ ಆಯಾ ರಾಜ್ಯಗಳ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಮಾಹಿತಿ ನೀಡುವ ‘ನನ್ನ ರಾಜ್ಯ – ನಮ್ಮ ಸ್ವಾತಂತ್ರ್ಯ ಹೋರಾಟಗಾರರು’ ಎಂಬ ವಿಡಿಯೋ ಆಧಾರಿತ ವಿಶಿಷ್ಟ ಕಾರ್ಯಕ್ರಮವು ಪ್ರತಿನಿತ್ಯ ಪ್ರಸಾರಗೊಳ್ಳಲಿದೆ.
  8. ಸ್ವರಾಜ್ಯ- 75 ವಿಶೇಷ ಸಂಚಿಕೆ: ಯುವ ಬರಹಗಾರರಿಂದ ಆಹ್ವಾನಿತ ಬರಹಗಳ ಸಂಗ್ರಹದ ಸಂಚಿಕೆ ‘ಮೈ ಭಾರತ್: ಸ್ವರಾಜ್ಯ -75’ ಪ್ರಕಟವಾಗಲಿದೆ.
  9. ಸ್ವರಾಜ್ಯ -75 ಉಪನ್ಯಾಸ: ವಿವಿಧ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯ ಕ್ಯಾಂಪಸ್‌ಗಳಲ್ಲಿ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ‘ಸ್ವರಾಜ್ಯ -75 ವಿಶೇಷ ಉಪನ್ಯಾಸ’ ಕಾರಕ್ರಮಗಳನ್ನು ಆಯೋಜಿಸಲಾಗಿದೆ.
  10. ‘ನನ್ನ ಭಾರತ’ ಕುರಿತು ಗಣ್ಯರ ಅನಿಸಿಕೆ ವಿಡಿಯೋ: ಭಾರತದ ಹಿರಿಮೆ ಗರಿಮೆಗಳು, ದೇಶದ ಸ್ಥಿತಿ-ಗತಿಗಳು, ಭವಿಷ್ಯದ ಭಾರತದ ಯುವಕರ ಕನಸುಗಳು ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಗಣ್ಯರು, ಶಿಕ್ಷಣ ತಜ್ಞರು ನೀಡಿರುವ ವಿಶೇಷ ವಿಡಿಯೋ ಸಂದೇಶಗಳು ಪ್ರತಿನಿತ್ಯ ದಿಶಾ ಭಾರತ್ ಫೇಸ್‌ಬುಕ್ ಪೇಜ್‌ನಲ್ಲಿ ಪ್ರಸಾರವಾಗುತ್ತದೆ.
  11. ಸ್ವರಾಜ್ಯ ಸಿನಿಮಾ ಪ್ರದರ್ಶನ: ರಾಷ್ಟ್ರಭಕ್ತಿ, ದೇಶದ ಅಸ್ಮಿತೆ, ಸಾಮಾಜಿಕ ಆಗುಹೋಗುಗಳ ಕುರಿತು ಬೆಳಕು ಚೆಲ್ಲುವ ಆಯ್ದ ಸಿನಿಮಾಗಳ ಪ್ರದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
  12. ಸ್ವರಾಜ್ಯ ರಥ: ಸ್ವಾತಂತ್ರ್ಯ ಸಂಗ್ರಾಮದ ಅಜ್ಞಾತ ಬಲಿದಾನಿಗಳ, ನೇಪಥ್ಯದಲ್ಲಿ ಉಳಿದ ಹೋರಾಟಗಾರರ ಕುರಿತು ಹಾಗೂ ಕನ್ನಡ ನಾಡಿನಲ್ಲಿ ಸ್ವಾತಂತ್ರ್ಯ ಸಂಗ್ರಾಮ ಎಂಬ ಆಶಯದೊಂದಿಗೆ ‘ಸ್ವರಾಜ್ಯ ರಥ’ವು ರಾಜ್ಯಾದ್ಯಂತ ಸಂಚರಿಸಲಿದೆ.
  13. ಸ್ವರಾಜ್ಯ ಸೈಕ್ಲಾಥಾನ್: ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಉತ್ಸಾಹ ಪ್ರೇರಣೆ ತುಂಬಲು ‘ಸ್ವರಾಜ್ಯ ಸೈಕ್ಲಾಥಾನ್’ (ಸೈಕಲ್ ಜಾಥಾ) ವನ್ನು ಆಯೋಜಿಸಲಾಗಿದೆ.
  14. ಸ್ವರಾಜ್ಯ ಬೈಕ್‌ ರ‍್ಯಾಲಿ : ಯುವಕರಲ್ಲಿ ದೇಶಭಕ್ತಿಯನ್ನು ಉದ್ದೀಪಿಸುವ ಹಾಗೂ ಏಕತೆಯನ್ನು ಪೋಷಿಸುವ ಸ್ವರಾಜ್ಯ ಬೈಕ್ ರ‍್ಯಾಲಿ ನಡೆಯಲಿದೆ.
  15. ಸ್ವರಾಜ್ಯ ಯಾತ್ರಾ: ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿ ಐತಿಹಾಸಿಕ ಮಹತ್ವವಿರುವ ಸ್ಥಳಗಳಿಗೆ ಸಾರ್ವಜನಿಕರು ಭೇಟಿ ನೀಡುವ ವಿಶಿಷ್ಟ ಬಸ್ ಯಾತ್ರೆ ‘ಸ್ವರಾಜ್ಯ ಯಾತ್ರೆ’ ಯನ್ನು ರಾಜ್ಯದ ವಿವಿಧ ಸ್ಥಳಗಳಿಗೆ ಆಯೋಜಿಸಲಾಗಿದೆ.
  16. ರಾಜ್ಯ ಮಟ್ಟದ ‘ಸ್ವರಾಜ್ಯ ವಿಚಾರ ಸಂಕಿರಣ’: ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ, ಶಿಕ್ಷಣ ವಲಯದ ವಿವಿಧ ಶ್ರೇಣಿಯ ಅಧ್ಯಾಪಕರಿಗೆ, ಸ್ನಾತಕೋತ್ತರ ತರಗತಿಗಳ ಆಯ್ದ ವಿದ್ಯಾರ್ಥಿಗಳಿಗೆ ಒಂದು ದಿನದ ‘ಸ್ವರಾಜ್ಯ ವಿಚಾರ ಸಂಕಿರಣ’ವನ್ನು ಆಯೋಜಿಸಲಾಗಿದೆ.
  17. ರಾಜ್ಯ ಮಟ್ಟದ ಸ್ವರಾಜ್ಯ ಕ್ವಿಜ್: ಸ್ವರಾಜ್ಯ 75ರ ಹಿನ್ನೆಲೆಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಕಾಲೇಜು ವಿದ್ಯಾರ್ಥಿಗಳಿಗಾಗಿ ವಿಶೇಷ ರಸಪ್ರಶ್ನೆ ಕಾರ್ಯಕ್ರಮ ‘ಸ್ವರಾಜ್ಯ ಕ್ವಿಜ್’ 2022ರ ಆಗಸ್ಟ್ 7ರಂದು ಬೆಂಗಳೂರಿನಲ್ಲಿ ನಡೆಯಲಿದೆ.
  18. ಸ್ವರಾಜ್ಯ ಪ್ರದರ್ಶಿನಿ: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಅಸಂಖ್ಯ ಅಜ್ಞಾತ ವೀರರ ಜೀವನಗಾಥೆಯ ಮಾಹಿತಿ ನಿರೂಪಕ ‘ಸ್ವರಾಜ್ಯ ಪ್ರದರ್ಶಿನಿ’ ಪ್ರದರ್ಶನಗೊಳ್ಳಲಿದೆ.
  19. ಸ್ವರಾಜ್ಯ 75 ಸಾಂಸ್ಕೃತಿಕ ಕಾರ್ಯಕ್ರಮ: ಕಾಲೇಜು ಕ್ಯಾಂಪಸ್‌ಗಳಲ್ಲಿ ಸ್ವರಾಜ್ಯ 75 ವಿಷಯದ ಕುರಿತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯಾ ಕಾಲೇಜುಗಳ ವತಿಯಿಂದ ಆಯೋಜಿಸಲಾಗುತ್ತಿದೆ.
  20. ಸ್ವರಾಜ್ಯ ಉತ್ಸವ: ಯುವಕರಲ್ಲಿ ಉತ್ಸಾಹ ತುಂಬುವ ಸಾರ್ವಜನಿಕ ಕಾರ್ಯಕ್ರಮವಾದ ‘ಸ್ವರಾಜ್ಯ ಉತ್ಸವ್’ ಮೂಲಕ ರಾಷ್ಟ್ರೀಯ ಹಾಗೂ ವೈಚಾರಿಕ ಜಾಗೃತಿಯನ್ನು ಮೂಡಿಸಲಾಗುತ್ತದೆ.

ಇದನ್ನೂ ಓದಿ | My Bharat | ದಿಶಾ ಭಾರತ್‌ ಸಂಸ್ಥೆಯಿಂದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ

Exit mobile version