Site icon Vistara News

ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ದಿಗ್ಭ್ರಮೆ ಮೂಡಿಸಿದ ಸುದ್ದಿ

HD Kumaraswamy

ಬೆಂಗಳೂರು: ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಈ ಸುದ್ದಿ ದಿಗ್ಭಮೆ ಮೂಡಿಸಿದೆ. ಅದೆಂದರೆ ರಾಜ್ಯದಲ್ಲಿ ಎರಡು ದಿನದ ಹಿಂದೆ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದ ನಂತರ ಸಾಲುಸಾಲಾಗಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು.

ಈ ಬಗ್ಗೆ ಸರಣಿ ಟ್ವೀಟ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ಎಚ್‌.ಡಿ. ಕುಮಾರಸ್ವಾಮಿ ಧೈರ್ಯ ತುಂಬಿದ್ದಾರೆ. “ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಬರಲಿಲ್ಲ ಅಥವಾ ಫೇಲಾದೆವು ಎನ್ನುವ ಕಾರಣಕ್ಕೆ ರಾಜ್ಯದಲ್ಲಿ 8 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಸುದ್ದಿ ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ” ಎಂದಿದ್ದಾರೆ.

ಅಂಕವೇ ಎಲ್ಲವೂ ಅಲ್ಲ. ಪಾಸು-ಫೇಲು ಸಾಮಾನ್ಯ, ಜೀವನದಲ್ಲೂ ಏಳುಬೀಳು ಇದ್ದೇ ಇರುತ್ತದೆ. ಕಡಿಮೆ ಅಂಕ ಬಂದವರು ಮುಂದಿನ ತರಗತಿಯಲ್ಲಿ ಉತ್ತಮ ಅಂಕ ಪಡೆಯಲು ಯತ್ನಿಸಬೇಕು. ಫೇಲಾದವರು ಪಾಸಾಗಲು ಶ್ರಮಿಸಬೇಕು. ಅದನ್ನು ಬಿಟ್ಟು ಅಂಕಕ್ಕಾಗಿ ಜೀವವನ್ನೇ ಅಂತ್ಯ ಮಾಡಿಕೊಳ್ಳುವುದು ಹೆತ್ತವರಿಗೆ ಮಾಡುವ ಅನ್ಯಾಯ.

ಶೈಕ್ಷಣಿಕ ವ್ಯವಸ್ಥೆಯಲ್ಲಿ ಪರೀಕ್ಷಾ ಹಂತಗಳು ಇರುವಂತೆಯೇ ಬದುಕಿನುದ್ದಕ್ಕೂ ಅಗ್ನಿಪರೀಕ್ಷೆಗಳೇ ಇರುತ್ತವೆ. ಅವನ್ನು ಧೈರ್ಯ, ಛಲದಿಂದ ಎದುರಿಸಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ಪೋಷಕರು, ಬೋಧಕರು, ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಣ ಇಲಾಖೆ ಮನದಟ್ಟು ಮಾಡಿಸಬೇಕು.

ವಿದ್ಯಾಭ್ಯಾಸದಲ್ಲಿ ಹಿಂದುಳಿದ ಅನೇಕರು ಉನ್ನತ ಸ್ಥಾನಗಳಿಗೆ ಹೋಗಿರುವ ಉದಾಹರಣೆಗಳು ನಮ್ಮ ಮುಂದೆ ಇವೆ. ಹೀಗಾಗಿ ಧೃತಿಗೆಡಬೇಕಿಲ್ಲ. ಪೋಷಕರು ಕೂಡ ಮಕ್ಕಳಿಗೆ ಧೈರ್ಯ ತುಂಬಬೇಕು, ಸೂಕ್ಷ್ಮ ಮನಸ್ಸಿನ ಅವರಿಗೆ ಅಕ್ಕರೆಯಿಂದ ಆತ್ಮಸ್ಥೈರ್ಯ ಮೂಡಿಸಬೇಕು ಎಂದು ಕುಮಾರಸ್ವಾಮಿ ಧೈರ್ಯ ತುಂಬಿದ್ದಾರೆ.
ಇದನ್ನೂ ಓದಿ | ಮೂರನೇ ಬಾರಿಯೂ ಪಿಯು ಪರೀಕ್ಷೆಯಲ್ಲಿ ಫೇಲ್‌; ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

Exit mobile version