Site icon Vistara News

Road Accident: ಟಯರ್‌ ಸ್ಫೋಟಗೊಂಡು ಕಾರು ಪಲ್ಟಿ, ಕಾನ್‌ಸ್ಟೇಬಲ್‌ ಸಾವು; ಮರಕ್ಕೆ ಡಿಕ್ಕಿಯಾಗಿ ಬೈಕ್‌ ಸವಾರ ಸಾವು

bike hit to tree

ಕಲಬುರಗಿ: ಚಲಿಸುತ್ತಿದ್ದ ಕಾರಿನ ಟಯರ್ ಸ್ಫೋಟಗೊಂಡು (road accident) ಕಾರು ಪಲ್ಟಿಯಾಗಿದ್ದು, ಹೆಡ್‌ಕಾನ್‌ಸ್ಟೇಬಲ್‌ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಪೆಟ್ರೋಲ್ ಬಂಕ್ ಬಳಿ ಘಟನೆ ನಡೆದಿದೆ.

ಕಲಬುರಗಿ ನಗರದ ಅಶೋಕ್ ನಗರ ಪೋಲಿಸ್ ಠಾಣೆಯಲ್ಲಿ ಹೆಡ್‌ಕಾನ್‌ಸ್ಟೇಬಲ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಮೋಯಿಜುದ್ದಿನ್ (52) ಮೃತಪಟ್ಟ ವ್ಯಕ್ತಿ. ಅವರ ಸಹೋದರ ನಜುಮೊದ್ದಿನ್ ಮತ್ತು ಇನ್ನೊಬ್ಬರು ಕೂಡ ಕಾರಿನಲ್ಲಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಲಬುರಗಿಯಿಂದ ಕಾರಿನಲ್ಲಿ ಮಳಖೇಡಕ್ಕೆ ಹೋಗುವಾಗ ಕಾರಿನ ಟಯರ್ ಬ್ಲಾಸ್ಟ್ ಆಗಿ ಕಾರು ಪಲ್ಟಿಯಾಗಿದೆ. ಮಳಖೇಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರಕ್ಕೆ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸಾವು

ಬೆಂಗಳೂರು: ವೇಗವಾಗಿ ಬಂದು ಮರಕ್ಕೆ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ ಸವಾರ ಸಾವಿಗೀಡಾಗಿದ್ದಾರೆ. ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯರ್ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ತ್ರಿಪುರ ಮೂಲದ ವ್ಯಕ್ತಿ ಮೃತಪಟ್ಟವರು.

ತ್ರಿಪುರ ಮೂಲದ ಬಿಜ್ಜು ಈ ಅಪಘಾತದಲ್ಲಿ ಸಾವನ್ನಪ್ಪಿದ್ದು, ಯಶವಂತಪುರದಿಂದ ಮಲ್ಲೇಶ್ವರಂ ಮೂಲಕ ಅನೂಪ್ ಅಯ್ಯರ್ ಮನೆಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಸಂಬಂಧಿ‌ಯೊಬ್ಬನನ್ನು ಡ್ರಾಪ್ ಮಾಡಿ ಬರುತ್ತಿದ್ದ ಬಿಜ್ಜು ವೇಗವಾಗಿ ಬಂದು ರಸ್ತೆ ಬದಿಯಲ್ಲಿ ಇದ್ದ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ. ಮೃತ ದೇಹವನ್ನು ಪೊಲೀಸರು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಿದ್ದಾರೆ. ಯಶವಂತಪುರ ಸಾಂಚರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Yadgir News: ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

Exit mobile version