Site icon Vistara News

ಶಿಕ್ಷಣ ಇಲಾಖೆಯ ಹೊಸ ವೆಬ್‌ ಶುರು; ಶಿಕ್ಷಣ ಸಚಿವರಿಗೆ ನೇರವಾಗಿ ಪತ್ರ ಬರೆಯಲು ಅವಕಾಶ

education department

ಬೆಂಗಳೂರು: “ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆʼʼ ಎಂದು ಈಗ ಹೆಸರು ಪಡೆದಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೊಸ ವೆಬ್‌ಸೈಟ್‌ ಅನ್ನು ಲಾಂಚ್‌ ಮಾಡಲಾಗಿದೆ. ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ ‘ಶಾಲಾ ಶಿಕ್ಷಣ ಮತ್ತು ಸಾಕ್ಷರತೆ’ ಇಲಾಖೆಯ ವೆಬ್ ಪೋರ್ಟಲ್ (EM Portal) ಲೋಕಾರ್ಪಣೆಗೊಳಿಸಿದರು.

ಇದೇ ವೇಳೆ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಸೇವೆಗಳನ್ನು ಆನ್‌ಲೈನ್ ಮೂಲಕ ಒದಗಿಸುವ ವ್ಯವಸ್ಥೆಯನ್ನು ಸಮರ್ಪಿಸಲಾಗಿದೆ.

ಇಲಾಖೆಯ ಎಲ್ಲಾ ಯೋಜನೆಗಳು ಮತ್ತು ಕಾರ್ಯಕ್ರಮಗಳ ಪ್ರಗತಿ ಮತ್ತು ಇಲಾಖೆಯ ಕಾರ್ಯಕ್ಷಮತೆಯ ಸಂಪೂರ್ಣ ಚಿತ್ರಣವನ್ನು ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ನೀಡಲು “ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರ ವೆಬ್ ಪೋರ್ಟಲ್” ನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಸಚಿವರು ತಿಳಿಸಿದಾರೆ.
ಈ ಪೋರ್ಟಲ್ ನ ವೆಬ್ ವಿಳಾಸ ಇಂತಿದೆ: https://schooleducationminister.karnataka.gov.in

ಈ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಸಾರ್ವಜನಿಕರು, ಸಂಘ-ಸಂಸ್ಥೆಗಳು, ಶಿಕ್ಷಣ ಇಲಾಖೆಯ ನೌಕರರು ಇಲಾಖೆಗೆ ಸಂಬಂಧಿಸಿದ ಕುಂದು-ಕೊರತೆಗಳು, ದೂರುಗಳು, ಸಲಹೆಗಳು, ಅಭಿಪ್ರಾಯಗಳನ್ನು ನೀಡಬಹುದಾಗಿದೆ. ಪೋರ್ಟಲ್ ಮೂಲಕ ಸಲ್ಲಿಕೆಯಾಗುವ ದೂರುಗಳನ್ನು ಪರಿಹರಿಸುವುದು ಮತ್ತು ದೂರಿನ ಸ್ಥಿತಿ-ಗತಿಯನ್ನು ಆನ್‌ಲೈನ್ ಮೂಲಕವೇ ಟ್ರ್ಯಾಕ್ ಮಾಡುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವ ನಾಗೇಶ್ ಮಾಹಿತಿ ನೀಡಿದರು.

ಏನೇನಿದೆ ಈ ವೆಬ್‌ನಲ್ಲಿ?
ಸರ್ಕಾರಿ ಶಾಲೆಗಳ ಮಾಹಿತಿ (ಎಷ್ಟು ಶಾಲೆಗಳಿವೆ, ಎಷ್ಟು ವಿದ್ಯಾರ್ಥಿಗಳಿದ್ದಾರೆ, ಬಿಸಿಯೂಟ ಇತ್ಯಾದಿ) ಇದೆ. “ಮಾಧ್ಯಮ ಗ್ರಂಥಾಲಯʼʼ ಎಂಬ ವಿಭಾಗದಲ್ಲಿ ಶಿಕ್ಷಣ ಇಲಾಖೆಯು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪ್ರಕಟಣೆಗಳು ಲಭ್ಯವಾಗಲಿವೆ. “ಶಿಕ್ಷಣ ಸಚಿವರಿಗೆ ಪತ್ರ ಬರೆಯಿರಿʼʼ ಎಂಬ ವಿಭಾಗವಿದ್ದು, ಇಲ್ಲಿ ಯಾರು ಬೇಕಾದರೂ ಶಿಕ್ಷಣ ಸಚಿವರಿಗೆ ನೇರವಾಗಿ ಪತ್ರ ಬರೆಯಬಹುದಾಗಿದೆ. ಶಾಲೆಗಳ ಕುರಿತು, ಇಲಾಖೆಯ ಕಾರ್ಯವೈಖರಿಯ ಕುರಿತು ದೂರು ನೀಡಲೂ ಅವಕಾಶ ನೀಡಲಾಗಿದೆ.

“ವೆಬ್ ಪೋರ್ಟಲ್‌ನಲ್ಲಿ ರಾಜ್ಯದಲ್ಲಿರುವ ಶಾಲೆಗಳ ಸಂಖ್ಯೆ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಂಖ್ಯೆ, ಮಧ್ಯಾಹ್ನದ ಬಿಸಿಯೂಟ ಯೋಜನೆ ಸೇರಿದಂತೆ ಇನ್ನಿತರ ವಿವರಗಳನ್ನು ಒದಗಿಸಲಾಗಿದೆ. ಶಾಲಾ ಶಿಕ್ಷಣ ಇಲಾಖೆಯ ಅಧೀನದ ವಿವಿಧ ಇಲಾಖೆಗಳು, ವೆಬ್‌ಸೈಟ್ ಲಿಂಕ್ ಲಭ್ಯವಿದೆ’ʼ ಎಂದು ಸಚಿವರು ತಿಳಿಸಿದ್ದಾರೆ.

ಶಿಕ್ಷಣ ಸಚಿವರ ಸೂಚನೆಗಳು, ಸರ್ಕಾರ ಹೊರಡಿಸಿದ ಆದೇಶಗಳು ಕೂಡ ಇಲಾಖೆಯ ಈ ವೆಬ್‌ಸೈಟ್‌ನಲ್ಲಿ ಅಧಿಕಾರಿಗಳಿಗೆ ಲಭ್ಯವಾಗಲಿದೆ. ಶಿಕ್ಷಕರಿಗೆ ಸಂಬಂಧಿಸಿದ ವಿವರಗಳನ್ನು, ಮಾಹಿತಿಯನ್ನು “ಶಿಕ್ಷಕರುʼʼ ಎಂಬ ವಿಭಾಗದಲ್ಲಿ ನೀಡಲಾಗಿದೆ. ಇಲಾಖೆಯ ಯೋಜನೆಗಳ, ಆಯವ್ಯಯದ ಮಾಹಿತಿಯೂ ಇಲ್ಲಿ ಲಭ್ಯವಾಗಲಿದೆ. ಇಲಾಖೆಯ ಸಮಗ್ರ ಮಾಹಿತಿಯನ್ನು ಈ ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲ್ಯಾಣ ನಿಧಿ ಸೇವೆಗಳು ಆನ್‌ಲೈನ್

ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಸದಸ್ಯತ್ವ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ವೈದ್ಯಕೀಯ ಪರಿಹಾರ ಧನಸಹಾಯ, ಶಿಕ್ಷಕರ ಮಕ್ಕಳಿಗೆ ಉನ್ನತ ವ್ಯಾಸಂಗ ಧನ ಸಹಾಯ ಸೇರಿದಂತೆ ಇನ್ನಿತರ ಸೇವೆಗಳನ್ನು ಪಡೆದುಕೊಳ್ಳಲು ಶಿಕ್ಷಕರು ತಾವು ಕುಳಿತ ಸ್ಥಳದಿಂದಲೇ ಅರ್ಜಿ ಸಲ್ಲಿಸುವ ಮೂಲಕ ಸೇವೆ ಪಡೆದುಕೊಳ್ಳಬಹುದಾಗಿದೆ. ಶಿಕ್ಷಕರು ಈ ಸೇವೆಗಳಿಗಾಗಿ ಬೆಂಗಳೂರಿಗೆ ಬರುವುದು ಇನ್ನು ತಪ್ಪಲಿದೆ. ಇದಕ್ಕಾಗಿ ಹೊಸ ವೆಬ್‌ ಆರಂಭಿಸಲಾಗಿದೆ.

ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಸದಸ್ಯತ್ವ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ವೈದ್ಯಕೀಯ ಪರಿಹಾರ ಧನಸಹಾಯ, ಶಿಕ್ಷಕರ ಮಕ್ಕಳಿಗೆ ಉನ್ನತ ವ್ಯಾಸಂಗ ಧನ ಸಹಾಯ ಸೇರಿದಂತೆ ಇನ್ನಿತರ ಸೇವೆಗಳನ್ನು ಪಡೆದುಕೊಳ್ಳಲು ಶಿಕ್ಷಕರು ತಾವು ಕುಳಿತ ಸ್ಥಳದಿಂದಲೇ ಅರ್ಜಿ ಸಲ್ಲಿಸುವ ಮೂಲಕ ಸೇವೆ ಪಡೆದುಕೊಳ್ಳಬಹುದಾಗಿದೆ. ಶಿಕ್ಷಕರು ಈ ಸೇವೆಗಳಿಗಾಗಿ ಬೆಂಗಳೂರಿಗೆ ಬರುವುದು ತಪ್ಪಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ ಈ ಸೇವೆಗಳನ್ನು ಆನ್‌ಲೈನ್‌ಗೊಳಿಸಲಾಗಿದೆ. ಎಲ್ಲ ಸೇವೆಗಳು ಸುಲಭವಾಗಿ ಲಭ್ಯವಾಗುವ ಜೊತೆಗೆ ಅನಗತ್ಯ ಅಲೆದಾಟ ಮತ್ತು ವಿಳಂಬ ತಪ್ಪಲಿದೆ ಎನ್ನುವ ವಿಶ್ವಾಸವಿದೆ ಎಂದು ಸಚಿವ ಬಿ ಸಿ ನಾಗೇಶ್‌ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ , ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ಆರ್. ವಿಶಾಲ್, ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರಾದ ಬಿ.ಬಿ ಕಾವೇರಿ ಸೇರಿದಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವೆಬ್‌ ವಿಳಾಸ ಇಂತಿದೆ: https://kstbfonline.karnataka.gov.in/

ಇದನ್ನೂ ಓದಿ| 2,500 ಪ್ರೌಢಶಾಲಾ ಶಿಕ್ಷಕರ ನೇಮಕ | ಸದ್ಯವೇ ಅಧಿಸೂಚನೆ; ಡಿಸೆಂಬರ್‌ನಲ್ಲಿ ಪರೀಕ್ಷೆ

Exit mobile version