Site icon Vistara News

Karnataka Election: ಭ್ರಷ್ಟ ಬಿಜೆಪಿ ಸರ್ಕಾರವನ್ನು ಬೇರು ಸಮೇತ ಕಿತ್ತೊಗೆಯಲು ಇದು ಸಕಾಲ: ಶಿವಾನಂದ ಕುಗ್ವೆ

ರೈತ ಸಂಘದಿಂದ ಸುದ್ದಿಗೋಷ್ಟಿ

ಹೊಸನಗರ: “ರೈತ ವಿರೋಧಿ ನೀತಿಯೊಂದಿಗೆ ಮಲೆನಾಡಿನ ಶರಾವತಿ ಮುಳುಗಡೆ ಸಂತ್ರಸ್ತರ ಹಿತ ಕಾಯುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಭ್ರಷ್ಟ ಸರ್ಕಾರವನ್ನು ಬೇರು ಸಮೇತ ಕಿತ್ತೊಗೆಯಲು ಈ ಬಾರಿಯ ವಿಧಾನಸಭಾ ಚುನಾವಣೆ (Karnataka Election) ಸಕಾಲವಾಗಿದೆ” ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಹೇಳಿದರು.

ಶುಕ್ರವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಹೊಸನಗರ -ಸಾಗರ ಭಾಗದ ರೈತರ ಬಹುದೊಡ್ಡ ಸಮಸ್ಯೆ ಶರಾವತಿ ಮುಳುಗಡೆ ಪ್ರದೇಶವಾಗಿದೆ. ಸಾವಿರಾರು ಮುಳುಗಡೆ ಸಂತ್ರಸ್ತ ಕುಟುಂಬಗಳು ಕಾನೂನು ಹೋರಾಟದಲ್ಲಿ ಸೋಲು ಕಂಡಿವೆ. ಇದಕ್ಕೆ ಬಿಜೆಪಿ ಸರ್ಕಾರವೇ ನೇರ ಕಾರಣವಾಗಿದ್ದು, ಈ ರೈತ ವಿರೋಧಿ ಸರ್ಕಾರ ಕಿತ್ತೊಗೆಯಲು ಇದು ಸಕಾಲ” ಎಂದರು.

ಇದನ್ನೂ ಓದಿ: Karnataka Election 2023: ಈ ಜನಸಾಗರ ನೋಡಿದ್ರೆ ಬಿಜೆಪಿಯದ್ದೇ ಗೆಲುವು ಖಚಿತ; ಸಮೀಕ್ಷೆಗಳಿಗೆ ಪಿಎಂ ಮೋದಿ ಟಾಂಗ್

“ರಾಜ್ಯದಲ್ಲಷ್ಟೇ ಅಲ್ಲದೆ ದೇಶದಲ್ಲೂ ರೈತ ವಿರೋಧಿ ಕಾನೂನುಗಳೇ ವಿಜೃಂಭಿಸುತ್ತಿರುವುದು ವಿಷಾದನೀಯ. ಬಂಡವಾಳ ಶಾಹಿಗಳ ಸರ್ಕಾರ ಎಂದೇ ಬಿಂಬಿಸಿಕೊಂಡಿರುವ ಬಿಜೆಪಿ, ರೈತ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಇಂತಹ ಜನವಿರೋಧಿ ಸರ್ಕಾರವನ್ನು ರಾಜ್ಯದಲ್ಲಿ ಬೇರು ಸಮೇತ ಕಿತ್ತೆಸೆಯಬೇಕು. ಹೀಗಾಗಿ ರಾಜ್ಯ ರೈತ ಸಂಘ ಬಿಜೆಪಿಯೇತರ ಪಕ್ಷಗಳನ್ನು ಬೆಂಬಲಿಸುತ್ತಿದ್ದು, ರಾಜ್ಯದ ರೈತರು, ಕೂಲಿ ಕಾರ್ಮಿಕರು, ನಿರುದ್ಯೋಗಿ ಯುವ ಜನತೆ ಬಿಜೆಪಿ ಹೊರತುಪಡಿಸಿದ ಪಕ್ಷಗಳ ಗೆಲುವಿನ ಮೂಲಕ ರೈತ ಹಿತವನ್ನು ಕಾಯುವವರನ್ನು ಬೆಂಬಲಿಸಬೇಕು” ಎಂದು ಶಿವಾನಂದ್ ಕುಗ್ವೆ ಮನವಿ ಮಾಡಿದರು.

ರೈತ ಸಂಘದ ಜಿಲ್ಲಾ ಸಂಚಾಲಕ ಎನ್. ಡಿ. ವಸಂತ್ ಕುಮಾರ್ ಮಾತನಾಡಿ, “ಬಿಜೆಪಿ ಸರ್ಕಾರ ರೈತ ವಿರೋಧಿ ಕಾನೂನುಗಳ ಮೂಲಕ ನಿರಂತರ ದ್ರೋಹ ಎಸೆಗುತ್ತಲೇ ಬರುತ್ತಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಎಲ್ಲ ದಿನಬಳಕೆ ವಸ್ತುಗಳ ಬೆಲೆ ಏರಿಸುವ ಮೂಲಕ ಲೂಟಿಕೋರ ಸರ್ಕಾರವಾಗಿದೆ. ಇಂತಹ ಬಂಡವಾಳ ಶಾಹಿ ಸರ್ಕಾರವನ್ನು ರಾಜ್ಯದ ಜನತೆ ಕಿತ್ತೊಗೆಯಬೇಕು” ಎಂದು ಮನವಿ ಮಾಡಿದರು.

ಇದನ್ನೂ ಓದಿ: Karnataka Election: ಆಶೀರ್ವಾದ ಮಾಡಿ, ಐದು ವರ್ಷದಲ್ಲಿ ಋಣ ತೀರಿಸುತ್ತೇನೆ: ಎಚ್.ಡಿ. ಕುಮಾರಸ್ವಾಮಿ

“ರೈತ ಸಹಕಾರಿಯಾದ ಯಾವುದೇ ಯೋಜನೆಗಳನ್ನು ಜಾರಿಗೆ ತರುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿದೆ. ರೈತ ವಿರೋಧಿ ಕಾಯ್ದೆಗಳಿಂದ ಅದಾನಿ, ಅಂಬಾನಿ ತಿಜೋರಿ ತುಂಬುತ್ತಿದೆ. ಇಂತಹ ಅನಿಷ್ಠ ಸರ್ಕಾರ ಯಾವುದೇ ಕಾರಣಕ್ಕೂ ರಾಜ್ಯಕ್ಕೆ ಯೋಗ್ಯವಲ್ಲ. ಇದನ್ನು ಮುಂಬರುವ ಮೇ 10ರ ಚುನಾವಣೆಯಲ್ಲಿ ತೊಲಗಿಸೋಣ. ಬಿಜೆಪಿ ಹೊರತುಪಡಿಸಿದ ಯಾವುದೇ ಗೆಲ್ಲುವ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸೋಣ” ಎಂದು ಎನ್.ಡಿ. ವಸಂತ್ ಕುಮಾರ್ ಮನವಿ ಮಾಡಿದರು.

“ಈ ಸಂಬಂಧ ರಾಜ್ಯ ರೈತ ಸಂಘ ಬೆಂಗಳೂರಲ್ಲಿ ಕರೆದ ಸಭೆಯಲ್ಲಿ ಬಿಜೆಪಿಯನ್ನು ಹೊರತುಪಡಿಸಿ ಎಲ್ಲ ರಾಜಕೀಯ ಪಕ್ಷಗಳು ಪಾಲ್ಗೊಂಡಿದ್ದು, ರೈತರ ಹಿತ ಕಾಯುವ ಭರವಸೆ ನೀಡಿವೆ. ಹೀಗಾಗಿ ಆಯಾ ಕ್ಷೇತ್ರವಾರು ಬಿಜೆಪಿ ಹೊರತುಪಡಿಸಿದ ಪ್ರಬಲ ಗೆಲ್ಲುವ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ರಾಜ್ಯದ ಎಲ್ಲೆಡೆ ರೈತ ಸಂಘ ಪ್ರಚಾರ ನಡೆಸುತ್ತಿದೆ” ಎಂದು ರೈತ ಮುಖಂಡ ರಮೇಶ್ ಐಗಿನಬೈಲು ತಿಳಿಸಿದರು.

ಇದನ್ನೂ ಓದಿ: Karnataka Election: 60 ಸಾವಿರ ಮತಗಳ ಅಂತರದಿಂದ ಶಾಸಕ ಚಂದ್ರಪ್ಪರನ್ನು ಗೆಲ್ಲಿಸಿ: ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ

“ರಾಜ್ಯದಲ್ಲಿ ರೈತನಿಗೆ ಅಗತ್ಯವಾದ ಗೊಬ್ಬರ, ಔಷಧಿ ಬೆಲೆಯನ್ನು ಗಗನಕ್ಕೆ ಏರಿಸಿರುವ ಬಿಜೆಪಿ ಸರ್ಕಾರ, ರೈತನಿಂದಲೂ ಪರೋಕ್ಷವಾಗಿ ತೆರಿಗೆಯ ಹೆಸರಲ್ಲಿ ಲೂಟಿ ಮಾಡುತ್ತಿದೆ” ಎಂದು ಸಾಮಾಜಿಕ ಹೋರಾಟಗಾರ ಮಂಜುನಾಥ್ ಬ್ಯಾಣದ ಆರೋಪಿಸಿದರು.

“ಐದು ವರ್ಷಗಳ ಹಿಂದೆ ಏಳುನೂರು, ಎಂಟು ನೂರು ಇದ್ದ ಗೊಬ್ಬರದ ಬೆಲೆ ಇಂದು ಎರಡು ಸಾವಿರ ದಾಟಿದೆ. ಆದರೆ, ಒಂದು ಕ್ವಿಂಟಾಲ್ ಭತ್ತದ ಬೆಲೆ ಈಗಲೂ ಒಂದೂವರೆ ಸಾವಿರ ರೂಪಾಯಿ ದಾಟುತ್ತಿಲ್ಲ. ಹಾಗಾದರೆ ಬಿಜೆಪಿ ಸರ್ಕಾರ ರೈತ ಪರ ಆಗುವುದು ಹೇಗೆ?” ಎಂದು ಅವರು ಪ್ರಶ್ನಿಸಿದರು.

“ರೈತ ವಿರೋಧಿ ಕಾಯ್ದೆಗಳ ಮೂಲಕ ಕೃಷಿ ಭೂಮಿಯನ್ನು ಬಂಡವಾಳಶಾಹಿಗಳಿಗೆ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ನೇರವಾಗಿ ಮಾರುಕಟ್ಟೆ ಮಾಡಿಕೊಟ್ಟಿರುವ ಬಿಜೆಪಿ ಸರ್ಕಾರ ಇಲ್ಲಿಯೂ ಪರ್ಸೆಂಟೇಜ್ ವ್ಯವಹಾರ ನಡೆಸುವ ಮೂಲಕ ಬಂಡವಾಳಶಾಹಿಗಳ ಬಿಜೆಪಿ ಆಗಿದೆ. ಕೆಲವೇ ದಿನದಲ್ಲಿ ಉಣ್ಣುವ ಅನ್ನಕ್ಕೂ ಹಾಹಕಾರ ಬರಲಿದೆ. ಹೀಗಾಗಿ ಇಂತಹ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೆಸೆದು ಹೊಸ ಸರ್ಕಾರಕ್ಕೆ ಮತದಾರರು ಅವಕಾಶ ಮಾಡಿಕೊಡಬೇಕು” ಎಂದು ಮಂಜುನಾಥ್ ಬ್ಯಾಣದ ಮನವಿ ಮಾಡಿದರು.

ಇದನ್ನೂ ಓದಿ: Karnataka Election: ಬಿಜೆಪಿ ಭ್ರಷ್ಟಾಚಾರದ ರೇಟ್‌ ಕಾರ್ಡ್‌ ಬಿಟ್ಟ ಕಾಂಗ್ರೆಸ್‌, ಮೊಕದ್ದಮೆ ದಾಖಲಿಸುವೆ ಎಂದ ಲೆಹರ್‌ ಸಿಂಗ್

ರೈತ ಮುಖಂಡ ಗಣಪತಿ ಮಾಕನ ಕಟ್ಟೆ ಮಾತನಾಡಿ, “ಬಗರ್ ಹುಕುಂ ರೈತರಿಗೆ ಹಕ್ಕು ಪತ್ರ ನೀಡುವುದು ಸೇರಿದಂತೆ, ರೈತ ಪರವಾದ ಯಾವುದೇ ಯೋಜನೆ ರೂಪಿಸಲು ವಿಫಲವಾದ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗೆ ಇಳಿಸೋಣ” ಎಂದು ಮನವಿ ಮಾಡಿದರು. ಸುದ್ದಿಗೊಷ್ಠಿಯಲ್ಲಿ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹುಚ್ಚಪ್ಪ ಕೆಳದಿ ಮೊದಲಾದವರು ಉಪಸ್ಥಿತರಿದ್ದರು.

Exit mobile version