Site icon Vistara News

ಮೃತ ಸರ್ಕಾರಿ ನೌಕರರ ಪಿಂಚಣಿ ಗೊಂದಲ ಬಗೆಹರಿಸಿದ ಸರ್ಕಾರ

Vidhana soudha

ಬೆಂಗಳೂರು: ಮೃತ ಸರ್ಕಾರಿ ನೌಕರರ ಕುಟುಂಬಸ್ಧರ ನೆರವಿಗೆ ರಾಜ್ಯ ಸರ್ಕಾರ ಬಂದಿದೆ. ರಾಷ್ಟ್ರೀಯ ಪಿ೦ಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರನ ಇಡುಗಂಟು ಪಡೆಯುವ ವಿಷಯದಲ್ಲಿದ್ದ ಗೊಂದಲವನ್ನು ಇತ್ಯರ್ಥಪಡಿಸಿ, ಮೇ 30 ರಂದು ಆದೇಶ ಹೊರಡಿಸಿದೆ.

ಪ್ರಸ್ತುತ ರಾಷ್ಟ್ರೀಯ ಪಿ೦ಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರು ಸೇವೆಯಲ್ಲಿರುವಾಗಲೇ ಮೃತರಾದ ಸಂದರ್ಭದಲ್ಲಿ ನೌಕರರ ನಾಮನಿರ್ದೇಶಿತರು ಕುಟು೦ಬ ಪಿ೦ಚಣಿಯನ್ನು ಆಯ್ಕೆ ಮಾಡಿಕೊಂಡಲ್ಲಿ ಪ್ರಾನ್‌ ಖಾತೆಯಲ್ಲಿರುವ ಮೊತ್ತದಲ್ಲಿ, ಮೃತ ನೌಕರರ ವಂತಿಗೆ ಮತ್ತು ಅದರ ಮೇಲಿನ ಆದಾಯವನ್ನು ಮೃತರ ನಾಮನಿರ್ದೇಶಿತರಿಗೆ ನೀಡಲು ಸರ್ಕಾರ ಸೂಚಿಸಿದೆ. ಅಲ್ಲದೆ, ಸರ್ಕಾರದ ವಂತಿಗೆ ಮತ್ತು ಅದರ ಮೇಲಿನ ಆದಾಯವನ್ನು ಸರ್ಕಾರದ ಖಜಾನೆ-2 ಚಲನ್‌ ಮೂಲಕ ಜಮೆ ಮಾಡಲೂ ಆದೇಶಿಸಿದೆ.

ಸರ್ಕಾರ ಹೊರಡಿಸಿದ ಆದೇಶ

2018ರಲ್ಲಿ ಹೊರಡಿಸಿದ್ದ ಈ ಹಿಂದಿನ ಆದೇಶದಲ್ಲಿ ಸೇವೆಯಲ್ಲಿರುವಾಗಲೇ ಮೃತರಾದ ಎನ್‌.ಪಿ.ಎಸ್‌. ನೌಕರರ ನಾಮನಿರ್ದೇಶಿತರಿಗೆ ಕುಟುಂಬ ಪಿ೦ಚಣಿಯನ್ನು ಮೃತರ ನಾಮನಿರ್ದೇಶಿತರು ಆಯ್ಕೆ ಮಾಡಿಕೊಂಡಲ್ಲಿ ಮೃತ ನೌಕರರ ಪ್ರಾನ್‌ ಖಾತೆಯಲ್ಲಿರುವ ಸ೦ಪೂರ್ಣ ಮೊತ್ತವನ್ನು ಸರ್ಕಾರವು ಹಿಂಪಡೆಯುವ ಷರತ್ತಿಗೊಳಪಟ್ಟು, ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ಪಿಂಚಣಿ) ನಿಯಮಗಳು, 2002ರನ್ವಯ ಕುಟು೦ಬ ಪಿ೦ಚಣಿ ಸೌಲಭ್ಯವನ್ನು ವಿಸ್ತರಿಸಲಾಗಿತ್ತು.

ಈಗ ರಾಷ್ಟ್ರೀಯ ಪಿ೦ಚಣಿ ಯೋಜನೆಗೆ ಒಳಪಡುವ ನೌಕರರು ವಂತಿಗೆ ಭಾಗವಷ್ಟೇ ನೀಡಿ ಕುಟುಂಬ ಪಿಂಚಣಿಗೆ ಒಳಪಡಬಹುದು. ಈ ಮೊದಲು ಸರಕಾರದ ವಂತಿಗೆ ಮತ್ತು ನೌಕರನ ವಂತಿಗೆ ಎರಡೂ ಭಾಗವನ್ನು ಸರಕಾರಕ್ಕೆ ನೀಡಬೇಕಿತ್ತು. ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾಗಿರುವ ಕ್ರಮಗಳನ್ನು ಆದೇಶದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ | ಸರ್ಕಾರದ ಹೊರಗುತ್ತಿಗೆ ಹುದ್ದೆಗಳಲ್ಲಿಯೂ ಮಹಿಳೆಯರಿಗೆ ಶೇ.33 ಮೀಸಲು ಜಾರಿ

Exit mobile version