Site icon Vistara News

Odisha Train Accident: ಹೌರಾದಿಂದ ವಿಮಾನದಲ್ಲಿ ಬಂದ ವಾಲಿಬಾಲ್ ಆಟಗಾರರು; ಊಟ-ತಿಂಡಿಗೂ ಕಷ್ಟವಾಗಿತ್ತು

Karnataka Volleyball Players

#image_title

ಒಡಿಶಾದಲ್ಲಿ ಮೂರು ರೈಲುಗಳ ನಡುವೆ ಅಪಘಾತವಾಗಿದ್ದ (Odisha Train Accident) ಕಾರಣ ಪೂರ್ವ ಕರಾವಳಿ ರೈಲ್ವೆ ವಲಯದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಹೀಗಾಗಿ ಅನೇಕ ಪ್ರಯಾಣಿಕರು ಪರದಾಡುವಂತೆ ಆಗಿತ್ತು. ಹೀಗೆ ಕೋಲ್ಕತ್ತದ ಹೌರಾದಲ್ಲಿ ಸಿಲುಕಿದ್ದ ಕರ್ನಾಟಕದ ವಾಲಿಬಾಲ್​ ಆಟಗಾರರು ಇದೀಗ ಸುರಕ್ಷಿತವಾಗಿ ಬಂದಿದ್ದಾರೆ. ಒಡಿಶಾದಲ್ಲಿ ರೈಲು ದುರಂತವಾಗಿದ್ದರಿಂದ ಇವರಿಗೆಲ್ಲ ವಾಪಸ್​ ಬರಲು ರೈಲು ಇರಲಿಲ್ಲ. ಒಟ್ಟು ಯುವಕರು/ಯುವತಿಯರು ಎಲ್ಲ ಸೇರಿ 32 ಆಟಗಾರರು ಇದ್ದರು. ಇಂದು ಬೆಳಗ್ಗೆ ಇಂಡಿಗೊ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದು, ತಮ್ಮ ಮನೆಗಳಿಗೆ ಹೋಗಿದ್ದಾರೆ.

ಒಡಿಶಾದ ಬಾಲಾಸೋರ್‌ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಕೋರಮಂಡಲ ಎಕ್ಸ್​ಪ್ರೆಸ್, ಬೆಂಗಳೂರು ಹೌರಾ ಮತ್ತು ಗೂಡ್ಸ್ ರೈಲುಗಳ ಮಧ್ಯೆ ಅಪಘಾತವಾಗಿತ್ತು. ಹೀಗಾಗಿ ಆ ಮಾರ್ಗದ ಸುಮಾರು 49 ರೈಲುಗಳ ಸಂಚಾರ ರದ್ದಾಗಿತ್ತು. ಈ ವಾಲಿಬಾಲ್ ಆಟಗಾರರು, ಕೋಚ್​ಗಳೆಲ್ಲ ರಾಜ್ಯಕ್ಕೆ ತಲುಪಲು ರೈಲು ಇಲ್ಲದೆ ಪರದಾಡುತ್ತಿದ್ದರು. ಅಲ್ಲಿಂದಲೇ ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಲಾಡ್​ಗೆ ಮನವಿಯನ್ನೂ ಮಾಡಿದ್ದರು. ಅದಾದ ಬಳಿಕ ಸಂತೋಷ್ ಲಾಡ್​ ಅವರು ವಿಮಾನಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದರು. ಇಂದು ಮುಂಜಾನೆ 4.15ಕ್ಕೆ ಕೋಲ್ಕತ್ತ ವಿಮಾನ ನಿಲ್ದಾಣದಿಂದ ಹೊರಟು, ಬೆಂಗಳೂರಿಗೆ ತಲುಪಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು ‘ನಾವೆಲ್ಲ ಸಬ್​ ಜ್ಯೂನಿಯರ್ ನ್ಯಾಶನಲ್​ ಟೂರ್ನಿಯಲ್ಲಿ ಪಾಲ್ಗೊಳ್ಳಲು ಹೋಗಿದ್ದೆವು. ಶುಕ್ರವಾರ ರಾತ್ರಿ 11ಗಂಟಗೆ ವಾಪಸ್​ ಕರ್ನಾಟಕಕ್ಕೆ ಬರಲು ರೈಲು ಇತ್ತು. ಆದರೆ ಅದೇ ಮಾರ್ಗದಲ್ಲಿ ಅಪಘಾತವಾಗಿದ್ದರಿಂದ ಬರಬೇಕಾದ ರೈಲು ರದ್ದಾಯಿತು. ನಮಗೆ ಅಲ್ಲೇ ಉಳಿಯಬೇಕಾಯಿತು. ಊಟ-ತಿಂಡಿ ಸರಿಯಾಗಲಿಲ್ಲ, ಉರಿಬಿಸಿಲಿಗೆ ಆರೋಗ್ಯ ಸಮಸ್ಯೆ ಆಗುತ್ತಿತ್ತು. ಕೆಮ್ಮು ಶುರುವಾಗಿತ್ತು. ನಮ್ಮೊಂದಿಗೆ ಇದ್ದ ಕೋಚ್​ವೊಬ್ಬರ ಪರಿಚಯದ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಆಗಿತ್ತು’ ಎಂದು ಆಟಗಾರ್ತಿಯೊಬ್ಬಳು ವಿಸ್ತಾರನ್ಯೂಸ್​ಗೆ ತಿಳಿಸಿದ್ದಾರೆ. ಇನ್ನು ಇವರೆಲ್ಲ ಮೇ 27ರಂದು ಕೋಲ್ಕತ್ತಕ್ಕೆ ತೆರಳಿದ್ದರು. ವಾಪಸ್ ಬರಲು ವಿಮಾನ ವ್ಯವಸ್ಥೆ ಮಾಡಿಕೊಟ್ಟ ಸಚಿವರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿದ್ದಾರೆ.

Exit mobile version