Site icon Vistara News

Karwar News: 30 ವರ್ಷಗಳ ಹಿಂದೆ ಪಾಠ ಮಾಡಿದ್ದ ನಿವೃತ್ತ ಉಪನ್ಯಾಸಕ ದಂಪತಿ ಸನ್ಮಾನಕ್ಕಾಗಿ ಶಿವಮೊಗ್ಗದಿಂದ ಕಾರವಾರಕ್ಕೆ ಬಂದ ವಿದ್ಯಾರ್ಥಿಗಳು

Retired Lecturer Sahyadri Science College shivamogga karwar

#image_title

ಕಾರವಾರ: 30 ವರ್ಷಗಳ ಹಿಂದೆ ಕಾಲೇಜಿನಲ್ಲಿ ಪಾಠ ಮಾಡಿದ್ದ ನಿವೃತ್ತ ಉಪನ್ಯಾಸಕ (retired lecturer) ದಂಪತಿಯ ಸನ್ಮಾನಕ್ಕಾಗಿ ಶಿವಮೊಗ್ಗದಿಂದ ಕಾರವಾರಕ್ಕೆ ಹುಡುಕಿಕೊಂಡು ಬಂದು, ಅವರನ್ನು ಗೌರವಿಸುವ ಮೂಲಕ ಗುರು-ಶಿಷ್ಯರ ಸಮಾಗಮದ ಭಾವುಕ ಕ್ಷಣಕ್ಕೆ ಕಾರವಾರ ಸಾಕ್ಷಿಯಾಯಿತು.

ಕಾರವಾರ ತಾಲೂಕಿನ ಸದಾಶಿವಗಡ ಮೂಲದ ಪುಷ್ಟಾ ಸುಖಟನಕರ್ ಹಾಗೂ ಅವರ ಪತಿ ರಮೇಶ್ ಸುಖಟನಕ‌ರ್ ಶಿವಮೊಗ್ಗ ನಗರದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಪುಷ್ಟಾ ಅವರು ಗಣಿತ ಹಾಗೂ ರಮೇಶ್ ಅವರು ಭೌತಶಾಸ್ತ್ರ ವಿಷಯದಲ್ಲಿ ಉಪನ್ಯಾಸಕರಾಗಿದ್ದರು. ಇದೇ ಕಾಲೇಜಿನಲ್ಲಿ 1993ರಲ್ಲಿ ಪದವಿ ಕಲಿತ ವಿದ್ಯಾರ್ಥಿಗಳು ಹಳೆಯ ವಿದ್ಯಾರ್ಥಿ ಸಂಘವನ್ನು ಪ್ರಾರಂಭಿಸಿದ್ದರು. ಅಂದು ಬೋಧಿಸಿ ತಮ್ಮನ್ನು ಉತ್ತಮ ಹಂತಕ್ಕೆ ತಲುಪುವಂತೆ ಮಾಡಿದ್ದ ಉಪನ್ಯಾಸಕರನ್ನು ಸನ್ಮಾನಿಸಲು ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು.

ಇದನ್ನೂ ಓದಿ: CCL 2023 : ಕರ್ನಾಟಕ ಬಲ್ಡೋಜರ್ಸ್​ ತಂಡಕ್ಕೆ ಸತತ 2ನೇ ಗೆಲುವು, ಕೇರಳ ಸ್ಟ್ರೈಕರ್​ ವಿರುದ್ಧ 8 ವಿಕೆಟ್​ ವಿಜಯ

ಆದರೆ ಪುಷ್ಪಾ ಹಾಗೂ ರಮೇಶ್ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈ ಬಗ್ಗೆ ಹಳೆಯ ವಿದ್ಯಾರ್ಥಿಗಳು ವಿಚಾರಿಸಿದಾಗ ಅವರು ಸದಾಶಿವಗಡದ ಪತ್ರಿಕಾ ವಿತರಕ ವಾಫ್ ಎಂಬುವವರ ಮನೆಯಲ್ಲಿ ಇದ್ದಾರೆ ಎನ್ನುವ ಮಾಹಿತಿ ತಿಳಿದಿದೆ. ಎಲ್ಲ ವಿದ್ಯಾರ್ಥಿಗಳು ಶಿವಮೊಗ್ಗದಿಂದ ವಾಹನ ಮಾಡಿಕೊಂಡು ಶನಿವಾರ (ಫೆ.೨೫) ಕಾರವಾರಕ್ಕೆ ಆಗಮಿಸಿ ಉಪನ್ಯಾಸಕ ದಂಪತಿಗಳಿಗೆ ಪಾದ ಪೂಜೆ ಮಾಡಿ ಸನ್ಮಾನಿಸುವ ಮೂಲಕ ಗೌರವಿಸಿದರು.

ತಮ್ಮ ಹಳೆಯ ನೆನಪುಗಳ ಸಹಿತ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಯಾವ ರೀತಿ ಪಾಠ ಮಾಡುತ್ತಿದ್ದರು ಎನ್ನುವ ವಿಚಾರಗಳನ್ನು ಹಳೇ ವಿದ್ಯಾರ್ಥಿಗಳು ನೆನೆದರು. ಅಲ್ಲದೆ ಅನಾರೋಗ್ಯಕ್ಕೆ ಒಳಗಾಗಿದ್ದ ಉಪನ್ಯಾಸಕರನ್ನು ನೋಡಿ ಕಣ್ಣೀರಾದರು. ನಿವೃತ್ತ ಉಪನ್ಯಾಸಕರನ್ನು ಖುಷಿಪಡಿಸಲು ಅವರ ಮುಂದೆ ವಿದ್ಯಾರ್ಥಿಗಳು ನೃತ್ಯ ಮಾಡಿದ್ದು ವಿಶೇಷವಾಗಿತ್ತು. ಹಳೆಯ ವಿದ್ಯಾರ್ಥಿಗಳ ಪ್ರೀತಿಗೆ ವೃದ್ಧ ಉಪನ್ಯಾಸಕ ದಂಪತಿ ಸಹ ಭಾವುಕರಾದರು.

ಇದನ್ನೂ ಓದಿ: Congress plenary Session: ಸಾಮಾಜಿಕ ನ್ಯಾಯ ಭದ್ರತೆಗೆ ಜಾತಿಗಣತಿಗೆ ಕಾಂಗ್ರೆಸ್ ಒಲವು; ರಾಯಪುರ ಘೋಷಣೆ

Exit mobile version