Site icon Vistara News

Krishna mutt politics : ನಾನು ಇತಿಹಾಸಕಾರನಲ್ಲ, ಪೇಜಾವರ ಶ್ರೀಗಳು ಹೇಳಿದ್ದನ್ನು ಹೇಳಿದ್ದೇನೆ, ತಪ್ಪಿದ್ದರೆ ಕ್ಷಮಿಸಿ ಎಂದ ಮಿಥುನ್‌ ರೈ

Mithun rai

#image_title

ಮಂಗಳೂರು: ಉಡುಪಿ ಕೃಷ್ಣ ಮಠದ ಜಾಗವನ್ನು ಮುಸ್ಲಿಂ ರಾಜರು (Krishna mutt politics) ನೀಡಿದ್ದಾರೆ ಎಂಬ ತಮ್ಮ ಹೇಳಿಕೆಯ ಬಗ್ಗೆ ಕಾಂಗ್ರೆಸ್‌ ನಾಯಕ ಮಿಥುನ್‌ ರೈ ಸ್ಪಷ್ಟನೆ ನೀಡಿದ್ದು, ಈ ವಿಚಾರ ತಪ್ಪು ಎಂದಾದರೆ ಕ್ಷಮೆ ಯಾಚಿಸಲು ಸಿದ್ಧ ಎಂದಿದ್ದಾರೆ.

ದ.ಕ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪುತ್ತಿಗೆಯ ನೂರಾನಿ ಮಸೀದಿಯಲ್ಲಿ ನಡೆದ ʻನಮ್ಮೂರ ಮಸೀದಿ ನೋಡ ಬನ್ನಿʼ ಕಾರ್ಯಕ್ರಮದಲ್ಲಿ ಮಾತನಾಡಿದ ಮಿಥುನ್‌ ರೈ ಅವರು, ಉಡುಪಿಯ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು ಎಂಬ ಹೇಳಿಕೆ ನೀಡಿದ್ದರು. ಇದು ಆಕ್ರೋಶಕ್ಕೆ ಕಾರಣವಾದಾಗ ಮಿಥುನ್‌ ರೈ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಇದೀಗ ಉಡುಪಿ ಶಾಸಕ ಕೆ. ರಘುಪತಿ ಭಟ್‌ ಅವರು ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಬಳಿಕ ಮತ್ತೊಮ್ಮೆ ಮೂಡುಬಿದಿರೆಯಲ್ಲಿ ಮಾತನಾಡಿದ ಅವರು, ನಾನೇನೂ ಇತಿಹಾಸಕಾರನಲ್ಲ. ಪೂಜ್ಯರಾದ ಪೇಜಾವರ ಹಿರಿಯ ಶ್ರೀಗಳು ಹೇಳಿದ ವಿಚಾರವನ್ನು ಪತ್ರಿಕೆಯಲ್ಲಿ ಓದಿದ್ದೆ. ಅದನ್ನೇ ಹೇಳಿದ್ದೆನೆ ಎಂದಿದ್ದಾರೆ.

ಅವತ್ತು ನಾನು ಈ ಮಾತುಗಳನ್ನು ಹೇಳುವಾಗ ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್ ಕೂಡ ವೇದಿಕೆಯಲ್ಲಿದ್ದರು. ದೇವಸ್ಥಾನದ ಅರ್ಚಕರೂ ಇದ್ದರು. ನನಗೆ ಈ ಮಾತು ಹೇಳುವಲ್ಲಿ ಬೇರೆ ಯಾವ ಉದ್ದೇಶವೂ ಇರಲಿಲ್ಲ. ನಮ್ಮ ಜಿಲ್ಲೆಯ ಸೌಹಾರ್ದ ಪರಂಪರೆ ತುಂಬ ಪುರಾತನವಾದುದು. ಸೌಹಾರ್ದತೆಗೆ ನಾನೂ ನೂರಾರು ಉದಾಹರಣೆಗಳನ್ನು ಕೊಡಬಲ್ಲೆ. ಅದರಲ್ಲಿ ಇದೊಂದು ಎಂದು ಹೇಳಿ ಪೇಜಾವರ ಶ್ರೀಗಳು ಹೇಳಿದ ಮಾತನ್ನು ಪುನರುಚ್ಚರಿಸಿದ್ದೆ ಎಂದು ಮಿಥುನ್‌ ರೈ ಹೇಳಿದ್ದಾರೆ.

.ʻʻನಾನು ಉಡುಪಿ ಮಠದ ಪೇಜಾವರ ಶ್ರೀಗಳು ಈ ಹಿಂದೆ ಹೇಳಿದ್ದನ್ನೆ ಪುನರುಚ್ಚರಿಸಿದ್ದೇನೆ. ಅವರು ಹೇಳಿದ ಮಾತನ್ನೇ ಪತ್ರಿಕೆಯಲ್ಲಿ ವರದಿ ಮಾಡಿದ್ದರು. ಅದನ್ನೇ ನಾನು ಉಲ್ಲೇಖಿಸಿದ್ದೇನೆ. ನಾನು ಯಾವುದೇ ತಪ್ಪು ಸಂದೇಶ ನೀಡಲು ಹೊರಟಿರಲಿಲ್ಲʼʼ ಎಂದಿರುವ ಅವರು, ತಪ್ಪಾಗಿದ್ರೆ ನಾನು ಕ್ಷಮಾಪಣೆ ಬೇಕಾದರೂ ಕೇಳುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಉಡುಪಿ ಶಾಸಕ ರಘುಪತಿ ಭಟ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ʻʻಅವರು ಈ ಬಗ್ಗೆ ಪೇಜಾವರ ಶ್ರೀಗಳನ್ನು ಕೇಳುವುದು ಒಳಿತುʼʼ ಎಂದರು.

ಈ ನಡುವೆ, ಮಿಥುನ್‌ ರೈ ಮಾತು ಅದಕ್ಕೆ ಬರುತ್ತಿರುವ ಪ್ರತಿಕ್ರಿಯೆಗಳಿಗೆ ಸ್ಪಷ್ಟನೆ ನೀಡಿರುವ ಪೇಜಾವರ ಮಠದ ಈಗಿನ ಶ್ರೀಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು, ಪೇಜಾವರ ಹಿರಿಯ ಶ್ರೀಗಳಾಗಿದ್ದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹೇಳಿದ ಒಂದು ವಿಚಾರವನ್ನು ತಪ್ಪಾಗಿ ಗ್ರಹಿಸಿ ಅದನ್ನು ಉಡುಪಿಗೆ ಜೋಡಿಸಲಾಗುತ್ತಿದೆ. ಆದರೆ, ಮಧ್ವಾಚಾರ್ಯರ ಕಾಲದಲ್ಲಿ ಆ ಘಟನೆ ನಡೆದಿದ್ದು ಉಡುಪಿಯಲ್ಲಿ ಅಲ್ಲ, ಗಂಗಾ ನದಿ ತೀರದಲ್ಲಿ. ಗುರುಗಳ ಹೇಳಿಕೆಯನ್ನು ಅವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Krishna Mutt politics : ಮುಸ್ಲಿಂ ರಾಜ ಜಾಗ ನೀಡಿದ್ದು ಉಡುಪಿಯಲ್ಲಿ ಅಲ್ಲ, ಗಂಗಾ ತೀರದಲ್ಲಿ: ವಿವಾದಕ್ಕೆ ತೆರೆ ಎಳೆದ ಪೇಜಾವರ ಶ್ರೀ

Exit mobile version