Site icon Vistara News

KUWJ Awards: ಜನಪರ ಪತ್ರಿಕೋದ್ಯಮ ನಮ್ಮ ಆದ್ಯತೆ ಆಗಬೇಕು: ಪಿ.ಸಾಯಿನಾಥ್

KUWJ awards

ಚಿತ್ರದುರ್ಗ: ಭಾರತೀಯ ಪತ್ರಿಕೋದ್ಯಮಕ್ಕೆ ತನ್ನದೇ ಆದ ಇತಿಹಾಸ, ಪರಂಪರೆ ಇದೆ. ಸತ್ಯವನ್ನು ಹೇಳುವ ಪರಿಪಾಠವನ್ನು ನಾವೆಂದೂ ಮರೆಯಬಾರದು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರ್ಪೋರೇಟ್ ವ್ಯವಸ್ಥೆ ಸಂಚಿನಿಂದ ಸಾಧ್ಯವಾದಷ್ಟು ದೂರವಿರಬೇಕು. ಸಮಾಜಮುಖಿ, ಜನಪರ ಪತ್ರಿಕೋದ್ಯಮ (KUWJ Awards) ನಮ್ಮ ಆದ್ಯತೆ ಆಗಬೇಕೇ ಹೊರತು, ಕಾರ್ಪೊರೇಟ್ ಪತ್ರಿಕೋದ್ಯಮವಲ್ಲ ಎಂದು ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತ ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ(ಕೆಯುಡಬ್ಲ್ಯೂಜೆ) ನಗರದ ಎಸ್.ಎರ್.ಎಸ್. ಸಂಸ್ಥೆ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕೆಯುಡಬ್ಲ್ಯೂಜೆ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪತ್ರಿಕೆಗಳ ಮಾಲೀಕತ್ವವನ್ನು ದೇಶದ ಖ್ಯಾತ ಕಂಪನಿಗಳ ಮಾಲೀಕರು ಹೊಂದುತ್ತಿರುವುದು ಆತಂಕಕಾರಿ ಸಂಗತಿ. ಇದರಿಂದ ಸಹಜ ಪತ್ರಿಕೋದ್ಯಮಕ್ಕೆ ಧಕ್ಕೆಯಾಗುವ ಲಕ್ಷಣಗಳು ಇವೆ. ಈ ಬೆಳವಣಿಗೆಗಳಿಂದ ಜನಸಾಮಾನ್ಯರಿಗೆ ಮುಂದಿನ ದಿನಗಳಲ್ಲಿ ತೊಂದರೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಪತ್ರಿಕೋದ್ಯಮವನ್ನು ಕಾರ್ಪೋರೇಟ್‌ ವ್ಯವಸ್ಥೆ ಹತೋಟಿಗೆ ಇಟ್ಟುಕೊಳ್ಳುವ ಪ್ರಯತ್ನಕ್ಕೆ ಬ್ರೇಕ್ ಹಾಕಬೇಕು ಎಂದು ಹೇಳಿದರು.

ಇದನ್ನೂ ಓದಿ | Raja Marga Column : ಭಾವನೆಗಳೇ ಇಲ್ಲದ ರೋಬೋಟ್‌ನಂಥ ಮನುಷ್ಯರ ಜತೆ ಬದುಕೋದಾದರೂ ಹೇಗೆ?

ಸರ್ಕಾರಗಳು ಪತ್ರಿಕೆಗಳ ಹಾಗೂ ಪತ್ರಕರ್ತರ ಹತೋಟಿಯಲ್ಲಿಟ್ಟುಕೊಳ್ಳಲು ಹವಣಿಸುತ್ತಿವೆ. ಹಲವಾರು ಕಾನೂನುಗಳನ್ನು ರೂಪಿಸಿ, ಪತ್ರಿಕಾ ಸ್ವಾತಂತ್ರ್ಯ ಮೊಟಕುಗೊಳಿಸಲು ಕಾರ್ಯಗಳೂ ನಡೆಯುತ್ತಿವೆ ಆತಂಕದ ಸಂಗತಿ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಮಾಧ್ಯಮಗಳಿಗೆ ಮುಕ್ತವಾಗಿ ಕಾರ್ಯ ನಿರ್ವಹಿಸುವಂತಹ ವಾತಾವರಣ ನಿರ್ಮಿಸಬೇಕು. ಪತ್ರಕರ್ತರಿಗೆ ರಕ್ಷಣೆ, ಸಹಾಯ ಬಹಳ ಮುಖ್ಯ. ಪಿಐಬಿ ಹಲವಾರು ಸಮಿತಿಗಳನ್ನು ಮತ್ತು ಉಪ ಸಮಿತಿಗಳನ್ನು ರಚಿಸಿದೆ. ನಾನು ಹಲವು ಸಮಿತಿಯಲ್ಲಿದ್ದು, ಪತ್ರಿಕಾ ಸ್ವಾತಂತ್ರ್ಯಕ್ಕೆ ಮುಕ್ತವಾದ ಅವಕಾಶ ನೀಡಬೇಕೆಂಬುದು ನನ್ನ ನಿಲುವಾಗಿದೆ ಎಂದರು.

ಕೋವಿಡ್ ಸಂದರ್ಭದಲ್ಲಿ ಕೆಯುಡಬ್ಲ್ಯೂಜೆ ಪತ್ರಕರ್ತರ ಕುಟುಂಬಕ್ಕೆ ನೆರವು ಕೊಡಿಸುವ ನಿಟ್ಟಿನಲ್ಲಿ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಮಾಡಿರುವ ಸೇವೆ ಅನನ್ಯ ಎಂದರು.

ದಿಕ್ಸೂಚಿ ಭಾಷಣ ಮಾಡಿದ ಪ್ರೊ. ಬಿ.ಕೆ.ರವಿ ಅವರು ಮಾತನಾಡಿ, ಇಂದಿನ ಪತ್ರಿಕೋದ್ಯಮ ಸಂದಿಗ್ಧ ಸ್ಥಿತಿಯಲ್ಲಿದೆ. ವ್ಯಾಪಾರೀಕರಣದ ಹಾದಿಯಲ್ಲಿ ನಡೆಯುತ್ತಿದ್ದು, ಪತ್ರಿಕೆಗಳು ಅನಿವಾರ್ಯವಾಗಿ ಲಾಭಾಂಶದ ಕಡೆ ಗಮನ ಕೊಡಬೇಕಾಗಿದೆ. ಇದರಿಂದ ಎಲ್ಲೋ ಒಂದು ಕಡೆ ಸಾಮಾಜಿಕ ಹೊಣೆಗಾರಿಕೆ ಮರೆಯುತ್ತಿವೆಯೇನೋ ಎಂಬ ಆತಂಕವೂ ಸಹಜವಾಗಿ ಕಾಡುತ್ತಿದೆ ಎಂದರು.

ಪತ್ರಿಕಾ ಸಂಸ್ಥೆಗಳು ಉಳಿಯಲು, ದುಡಿಮೆಯ ಜೊತೆಗೆ ಮಾಧ್ಯಮಗಳು ಸಾಮಾಜಿಕ ಹೊಣೆಗಾರಿಕೆಯನ್ನು ಕಾಪಾಡಿಕೊಂಡು ಬರಬೇಕು ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಿಕೆಗಳ ಹಾಗೂ ಪತ್ರಕರ್ತರ ರಕ್ಷಣೆಗೆ ಸಂಘಟನೆ ಕೈಗೊಂಡಿರುವ ಕಾರ್ಯಗಳ ಬಗ್ಗೆ ವಿವರಿಸಿದರು. ಸ್ವಾತಂತ್ರ್ಯ ಪೂರ್ವದಲ್ಲೇ 1932ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಂಘಟನೆಯನ್ನು ಮಂಕುತಿಮ್ಮನ ಕಗ್ಗ ಖ್ಯಾತಿಯ ಪತ್ರಕರ್ತ ಡಿ.ವಿ.ಗುಂಡಪ್ಪನವರು ಸ್ಥಾಪನೆ ಮಾಡಿದ್ದಾರೆ. ಅಂದಿನಿಂದಲೂ ಸಂಘಟನೆ ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಕೋವಿಡ್ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಪತ್ರಕರ್ತರಿಗೆ ಸಂಘಟನೆ ನೆರವಿನ ಹಸ್ತ ಚಾಚಿದೆ ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ ಮಾತನಾಡಿ, ಜಿಲ್ಲೆಗೆ ರಾಜ್ಯ ಮಟ್ಟದ ಕಾರ್ಯಕ್ರಮ ಮಾಡಲು ಅವಕಾಶ ನೀಡಿದ ಕೆಯುಡಬ್ಲ್ಯೂಜೆಗೆ ಧನ್ಯವಾದ ತಿಳಿಸಿದರು.

ಎಸ್‌ಆರ್‌ಎಸ್ ಕಾಲೇಜಿನ ಅಧ್ಯಕ್ಷ ಲಿಂಗಾರೆಡ್ಡಿ, ಐಎಫ್‌ಡಬ್ಲ್ಯೂಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಅಪರ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಮದನಗೌಡ, ಹಿರಿಯ ಪತ್ರಕರ್ತರಾದ ಜಿ.ಎನ್.ಮೋಹನ್, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಪದಾಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ: ಆ ಕರಾಳ ದಿನಗಳನ್ನು ನೆನಪಿಸಿ ಅಂತರಂಗ ಕಲಕುವ ಬುಗುರಿ

ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಿದ್ದರಾಜು ಸ್ವಾಗತಿಸಿದರು. ಕಾವೇರಿ ನಿರೂಪಿಸಿದರು. ಸನತ್ ಕುಮಾರ ಬೆಳಗಲಿ, ಬಿ.ಎಂ.ಬಷೀರ್, ಸಿ.ಜೆ.ಮಂಜುಳ, ವಿ.ವೆಂಕಟೇಶ್, ಮೋಹನ ಹೆಗಡೆ ಸೇರಿದಂತೆ 25 ಹಿರಿಯ ಪತ್ರಕರ್ತರಿಗೆ ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತ ಪ್ರದಾನ ಮಾಡಲಾಯಿತು.

Exit mobile version