Site icon Vistara News

Shivamogga News: ಕಾಗೋಡು ಚಳವಳಿ ನೇತಾರ ಎಚ್. ಗಣಪತಿಯಪ್ಪ 99ನೇ ಜನ್ಮದಿನ ಆಚರಣೆ

Kagodu movement leader H Ganapathyappas 99th birthday celebration at Sagara

ಸಾಗರ: ಕಾಗೋಡು ಚಳವಳಿ (Kagodu movement) ಮೂಲಕ ಗೇಣಿದಾರರ ಬದುಕಿಗೆ ಹೊಸಭಾಷ್ಯ ಬರೆದ ಹೆಗ್ಗಳಿಕೆ ಕಾಗೋಡು ಚಳುವಳಿ ನೇತಾರ ಎಚ್.ಗಣಪತಿಯಪ್ಪ (H. Ganapathyappa) ಅವರಿಗೆ ಸಲ್ಲುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ತಿಳಿಸಿದರು.

ಇಲ್ಲಿನ ರೈತಭವನದಲ್ಲಿ ಗುರುವಾರ ರೈತ ಸಂಘ (ಡಾ.ಎಚ್.ಗಣಪತಿಯಪ್ಪ ಸ್ಥಾಪಿತ) ವತಿಯಿಂದ ಡಾ. ಎಚ್.ಗಣಪತಿಯಪ್ಪ ಅವರ 99ನೇ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಲಾಢ್ಯರಾದ ಜಮೀನುದಾರರ ವಿರುದ್ದ ಡಾ. ಎಚ್.ಗಣಪತಿಯಪ್ಪ ಅವರು ರೈತ ಸಂಘವನ್ನು ಕಟ್ಟಿ ಹೋರಾಟ ನಡೆಸುವ ಮೂಲಕ ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಗೇಣಿ ಕಾಯ್ದೆಯನ್ನು ರದ್ದುಗೊಳಿಸಿ ಸಹಸ್ರಾರು ಗೇಣಿದಾರರು ಉಳುವ ಭೂಮಿಯ ಒಡೆಯರನ್ನಾಗಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಅವರ ಹೋರಾಟದ ಬದುಕನ್ನು ಯುವ ಸಮೂಹ ಅರ್ಥ ಮಾಡಿಕೊಳ್ಳಬೇಕು ಎಂದರು.

ಇದನ್ನೂ ಓದಿ: Asia Cup 2023 : ಸೋಮವಾರದೊಳಗೆ ಏಷ್ಯಾ ಕಪ್​ಗೆ ತಂಡ ಪ್ರಕಟ

ಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ್ ಕೆಳದಿ ಮಾತನಾಡಿ, ಡಾ. ಎಚ್.ಗಣಪತಿಯಪ್ಪ ಅವರ ಹೋರಾಟ ಇಂದಿಗೂ ಎಲ್ಲರ ಮನಸ್ಸಿನಲ್ಲಿ ಮಾಸದೆ ಉಳಿದಿದೆ. ಕಾಗೋಡು ಸತ್ಯಾಗ್ರಹವನ್ನು ಕೊನೆಯವರೆಗೂ ತೆಗೆದುಕೊಂಡು ಹೋಗಿ, ಭೂಮಾಲೀಕರ ಆಸೆ ಆಮೀಷಗಳಿಗೆ ಒಳಗಾಗದೆ ಸೈದ್ಧಾಂತಿಕವಾಗಿ ಹೋರಾಟದಲ್ಲಿ ಯಶಸ್ಸು ಕಂಡ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಗಣಪತಿಯಪ್ಪ ಅವರ ಹೋರಾಟದಿಂದಾಗಿ ಲಕ್ಷಾಂತರ ಗೇಣಿ ಕುಟುಂಬ ಇಂದು ನೆಮ್ಮದಿಯಿಂದ ಬದುಕು ನಡೆಸುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: Lokayukta Raid : ಬಿಬಿಎಂಪಿ ರೆವಿನ್ಯೂ ಕಚೇರಿಗಳ ಮೇಲೆ ಲೋಕಾಯುಕ್ತ ಮೆಗಾ ರೇಡ್!

ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಡಾ. ರಾಮಚಂದ್ರಪ್ಪ ಮನೆಘಟ್ಟ, ಉಪಾಧ್ಯಕ್ಷ ಕುಮಾರ ಗೌಡ, ಪ್ರಧಾನ ಕಾರ್ಯದರ್ಶಿ ಹೊಯ್ಸಳ ಗಣಪತಿಯಪ್ಪ, ಚಂದ್ರಪ್ಪ ಆಲಳ್ಳಿ, ಕಿರಣ್ ಕುಮಾರ್ ವಡ್ನಾಲ ಇನ್ನಿತರರು ಹಾಜರಿದ್ದರು.

Exit mobile version