Site icon Vistara News

ಸಂಗನಕಲ್ಲು ಗ್ರಾಮದಲ್ಲಿ ಸೂತಕ; ಒಂದೇ ಕುಟುಂಬದ 9 ಮಂದಿಯ ಸಾಮೂಹಿಕ ಅಂತ್ಯಕ್ರಿಯೆ, ಗೋಳಾಟ

Mass Funeral in Sanganakal Village Of 9 People who Died In Accident near Mysore

#image_title

ಬಳ್ಳಾರಿ: ಮೈಸೂರಿನ ಕೊಳ್ಳೇಗಾಲ-ಟಿ.ನರಸಿಪುರ ಹೆದ್ದಾರಿಯ ಕುರುಬೂರು ಬಳಿ ನಡೆದ ಭೀಕರ ಅಪಘಾತ (Mysore Road Accident)ದಲ್ಲಿ ಮೃತಪಟ್ಟವರ ಅಂತ್ಯಸಂಸ್ಕಾರ ಇಂದು ಅವರ ಹುಟ್ಟೂರಾದ ಬಳ್ಳಾರಿಯ ಸಂಗನಕಲ್ಲು ಗ್ರಾಮದಲ್ಲಿ ಏಕಕಾಲಕ್ಕೆ ನಡೆದಿದೆ. ಈ ದುರಂತದಲ್ಲಿ ಒಂದೇ ಕುಟುಂಬದ 9 ಮಂದಿ ಮೃತಪಟ್ಟಿದ್ದಾರೆ. ಇಂದು ಸಂಗನಕಲ್ಲು ಗ್ರಾಮದಲ್ಲಿ ಎಲ್ಲರನ್ನೂ ಹೂಳುವ ಮೂಲಕ ಅಂತ್ಯಕ್ರಿಯೆ ಮಾಡಲಾಗಿದೆ.

ಇಂದು ಸಾಮೂಹಿಕ ಅಂತ್ಯಕ್ರಿಯೆ ನಡೆಯುತ್ತಿರುವ ಹಿನ್ನಲೆಯಲ್ಲಿ ಸಂಗನಕಲ್ಲು ಗ್ರಾಮಕ್ಕೆ ಮಾಜಿ ಸಚಿವ ಬಿ.ಶ್ರೀರಾಮುಲು ಭೇಟಿ ಕೊಟ್ಟಿದ್ದರು. ಮೃತರ ಕುಟುಂಬಸ್ಥರಿಗೆ-ಸಂಬಂಧಿಕರಿಗೆ ಸಾಂತ್ವನ ಹೇಳಿದ್ದಾರೆ. ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಶ್ರೀರಾಮುಲು ‘ಸಂಗನಕಲ್ಲು ಗ್ರಾಮದಿಂದ 12 ಜನರು ಮೈಸೂರಿಗೆ ಪ್ರವಾಸಕ್ಕೆ ಹೋಗಿದ್ದರು. ಬಳ್ಳಾರಿಯಿಂದ ರೈಲಿನಲ್ಲಿ ತೆರಳಿ, ಅಲ್ಲಿಂದ ಬಾಡಿಗೆ ಕಾರಿನಲ್ಲಿ ಮಲೆಮಹದೇಶ್ವರ ದೇವಸ್ಥಾನಕ್ಕೆ ಹೋಗಿದ್ದರು. ದೇಗುಲದಿಂದ ವಾಪಸ್ ಬರುವಾಗ ಅಪಘಾತವಾಗಿದೆ. ಈ ಬಗ್ಗೆ ಸ್ಥಳೀಯರೇ ನನಗೆ ಫೋನ್ ಮಾಡಿ ತಿಳಿಸಿದ್ದರು. ಗಾಯಾಳುಗಳಿಗೆ ಸಮರ್ಪಕ ಚಿಕಿತ್ಸೆ ಕೊಡಿಸುವಂತೆ ಅಲ್ಲಿನ ಅಧಿಕಾರಿಗಳಿಗೆ ತಿಳಿಸಿದ್ದೆ’ ಎಂದು ಹೇಳಿದರು.

ಹಾಗೇ, ‘ರಾಜ್ಯ ಸರ್ಕಾರ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಆದರೆ ಮಾನವೀಯತೆ ದೃಷ್ಟಿಯಿಂದ ತಲಾ 5 ಲಕ್ಷ ರೂ.ನೀಡಬೇಕು’ ಎಂದು ಒತ್ತಾಯಿಸಿದ್ದಾರೆ. ಹಾಗೇ, ಕುಟುಂಬದಲ್ಲಿ ಇರುವ ಇತರರು ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಬೇಕು ಎಂದೂ ಹೇಳಿದರು. ಇನ್ನು ಅಂತ್ಯ ಸಂಸ್ಕಾರ ನಡೆಯುತ್ತಿದ್ದ ಜಾಗಕ್ಕೆ ಬಳ್ಳಾರಿ ಡಿಸಿ ಪವನ್​ ಕುಮಾರ್ ಮಾಲಪಾಟಿ ಕೂಡ ಭೇಟಿ ಮಾಡಿ, ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು.

ಸೂತಕದ ಜಾತ್ರೆ
ಮೈಸೂರಿನ ಬಳಿ ಖಾಸಗಿ ಬಸ್​ ಮತ್ತು ಬಾಡಿಗೆ ಕಾರಿನ ನಡುವೆ ಡಿಕ್ಕಿಯಾಗಿ ಈ ದುರಂತ ನಡೆದಿದೆ. ಅಪಘಾತದಲ್ಲಿ ಮೃತಪಟ್ಟವರ ಶವಗಳನ್ನೆಲ್ಲ ಇಂದು ಮೈಸೂರಿನಿಂದ ಬಳ್ಳಾರಿಯ ಸಂಗನಕಲ್ಲು ಗ್ರಾಮಕ್ಕೆ ಆಂಬ್ಯುಲೆನ್ಸ್​ಗಳಲ್ಲಿ ತರಲಾಯಿತು. ಒಂದರ ಬೆನ್ನಿಗೆ ಒಂದರಂತೆ ಆಂಬ್ಯುಲೆನ್ಸ್​ಗಳು ಹಳ್ಳಿಗೆ ಬಂದು ನಿಂತವು. ಜನರ ಜಾತ್ರೆಯೇ ಅಲ್ಲಿತ್ತು. ಆದರೆ ಸೂತಕ ತುಂಬಿ ಹೋಗಿತ್ತು. ನೂರಾರು ಜನರು ಅಲ್ಲಿಗೆ ಆಗಮಿಸಿದ್ದರು. ಶವಗಳನ್ನು ಆಂಬ್ಯುಲೆನ್ಸ್​ಗಳಿಂದ ಇಳಿಸಿ, ಅಂತ್ಯಕ್ರಿಯೆ ಮಾಡುವ ಹೊತ್ತಿಗೆ ಕುಟುಂಬಸ್ಥರು, ಬಂಧುಗಳು ಗೋಳಿಡುತ್ತಿದ್ದರು.

ಇದನ್ನೂ ಓದಿ: Video : ಬೆಚ್ಚಿ ಬೀಳಿಸುತ್ತದೆ ಮೈಸೂರಿನ ಭೀಕರ ಅಪಘಾತದ ಸಿಸಿಟಿವಿ ದೃಶ್ಯ​

ಮೃತರು ಯಾರ್ಯಾರು?
ನಿನ್ನೆಯ ಅಪಘಾತದಲ್ಲಿ ಮೃತಪಟ್ಟವರು ಒಂದೇ ಕುಟುಂಬದವರು/ಪರಸ್ಪರ ಬಂಧುಗಳು. ಜನಾರ್ದನ್​, 4ವರ್ಷದ ಮಗು ಪುನೀತ್ ಮತ್ತು ಶಶಿಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಂದೀಪ್​ (23), ಇವರ ತಂದೆ ಕೊಟ್ರೇಶ್​ (45), ತಾಯಿ ಸುಜಾತಾ (35), ಮಂಜುನಾಥ್​ (40), ಪತ್ನಿ ಪೂರ್ಣಿಮಾ (30), ಮಕ್ಕಳಾದ ಕಾರ್ತೀಕ್​ (11), ಪವನ್​ (7), ಗಾಯತ್ರಿ (30) ಮತ್ತು ಇವರ ಮಗಳು ಶ್ರಾವ್ಯಾ (3) ಮೃತರು. ಚಾಲಕನ ಹೆಸರು ಗೊತ್ತಾಗಿಲ್ಲ.

ಆಂಬ್ಯುಲೆನ್ಸ್​​ನಲ್ಲಿ ಶವಗಳನ್ನು ತರಲಾಯಿತು

ಗ್ರಾಮದಲ್ಲಿ ನೆರೆದಿರುವ ಜನರು

ಆಂಬ್ಯುಲೆನ್ಸ್​ಗಳಿಂದ ಮೃತದೇಹಗಳನ್ನು ಕೆಳಕ್ಕೆ ಇಳಿಸುತ್ತಿರುವ ದೃಶ್ಯ

ಕುಟುಂಬಸ್ಥರ ಗೋಳಾಟ
Exit mobile version