Site icon Vistara News

Shivamogga News: ಸಾಮಾನ್ಯ ಜನರ ಜೀವನಕ್ಕೆ ಸರ್ಕಾರದ ಸಹಕಾರ ಗೃಹಲಕ್ಷ್ಮಿ ಯೋಜನೆ: ಸಚಿವ ಎಸ್. ಮಧು ಬಂಗಾರಪ್ಪ

Minister S Madhu Bangarappa drives for Gruha Lakshmi Scheme implementation program in Shivamogga

ಶಿವಮೊಗ್ಗ: ಸಾಮಾನ್ಯ ಜನರ ಜೀವನದಲ್ಲಿ ಸದಾ ಕಾಲ ಸರ್ಕಾರದ (Government) ಸಹಕಾರವೇ ಗೃಹಲಕ್ಷ್ಮಿಯಂತಹ ಯೋಜನೆಯಾಗಿದೆ (Gruha Lakshmi Scheme) ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಮಹಾನಗರಪಾಲಿಕೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗೃಹಲಕ್ಷ್ಮಿ ಯೋಜನೆ ಒಂದು ಐತಿಹಾಸಿಕ ಮತ್ತು ದೇಶದಲ್ಲಿಯೇ ಅಚ್ಚರಿ ಮೂಡಿಸುವಂತಹ ಕಾರ್ಯಕ್ರಮವಾಗಿದೆ, ಬೆಲೆ ಏರಿಕೆಯ ಸಂದರ್ಭದಲ್ಲಿ ಹಾಗೂ ಮಹಿಳೆಯರ ಆರ್ಥಿಕ ಸಬಲೀಕರಣದ ವಿಷಯದಲ್ಲಿ ಗೃಹಲಕ್ಷ್ಮಿ ಯೋಜನೆ ಮುಖ್ಯ ಪಾತ್ರ ವಹಿಸುತ್ತದೆ ಎಂದರು.

ಇದನ್ನೂ ಓದಿ: Vijayanagara News: ಹಂಪಿಯಲ್ಲಿ ಅಪರೂಪದ ಬಿಳಿ ಬಣ್ಣದ ಹಾವು ಪತ್ತೆ

ರಕ್ಷಾ ಬಂಧನದ ದಿನದಂದು ರಾಜ್ಯ ಸರ್ಕಾರ ಸಹೋದರನ ಸ್ಥಾನದಲ್ಲಿ ನಿಂತು ಮನೆಯ ಯಜಮಾನಿಯರಾಗಿರುವ ಸಹೋದರಿಯರಿಗೆ ರೂ.2000 ಕೊಡುಗೆಯನ್ನು ನೀಡುತ್ತಿರುವ ಸಂತೋಷದ ದಿನ ಇದಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾದ ಮಹಿಳಾ ಫಲಾನುಭವಿಗಳ ಖಾತೆಗೆ ಇಂದಿನಿಂದ ಪ್ರತಿ ತಿಂಗಳು ರೂ.2000 ಜಮೆಯಾಗಲಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಅಂಬೇಡ್ಕರ್ ಅವರ ಆಶಯದಂತೆ ಇಂದು ಎಲ್ಲ ಜಾತಿ, ಮತ, ವರ್ಗದವರು ಒಂದಾಗಿ, ಒಂದೇ ವೇದಿಕೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಸಂತಸದ ವಿಷಯ ಎಂದ ಅವರು, ಸರ್ಕಾರ ನುಡಿದಂತೆ ನಡೆದಿದೆ. ದೇಶದಲ್ಲೇ ಗೃಹಲಕ್ಷ್ಮಿಯಂತಹ ಉತ್ತಮ ಕಾರ್ಯಕ್ರಮವನ್ನು ನೀಡಿದ ರಾಜ್ಯ ಸರ್ಕಾರ ಜಯಶಾಲಿಯಾಗಿದೆ. ಸರ್ಕಾರ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಿದೆ ಎಂದರು.

ಜಿಲ್ಲೆಯಲ್ಲಿ ಈವರೆಗೆ 360294 ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾಗಿದ್ದು, ಇನ್ನೂ 32000 ಮಹಿಳೆಯರ ನೋಂದಣಿ ಬಾಕಿ ಇದೆ. ನೋಂದಣಿಯಾದ ಫಲಾನುಭವಿಗಳು ತಮ್ಮ ಅಕ್ಕಪಕ್ಕದವರಿಗೆ ಈ ಬಗ್ಗೆ ತಿಳಿಸಿ ಸಹಕರಿಸಬೇಕು ಹಾಗೂ ಜಿಲ್ಲಾಧಿಕಾರಿಗಳು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳು ಇನ್ನು 7 ರಿಂದ 10 ದಿನಗಳ ಒಳಗೆ ಈ ಬಾಕಿ ನೊಂದಣಿ ಮಾಡಿಸಿ ಶೇ.100 ಗುರಿ ತಲುಪಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಗೃಹಲಕ್ಷ್ಮಿ ಯೋಜನೆಯ ರೂ.2000 ಗಳನ್ನು ವಿತರಣೆ ಮಾಡಿದರು. ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಗೃಹಲಕ್ಷ್ಮಿ ಯೋಜನೆ ಚಾಲನೆ ಕಾರ್ಯಕ್ರಮದ ನೇರ ಪ್ರಸಾರವನ್ನು ಎಲ್‍ಇಡಿ ಪರದೆಗಳಲ್ಲಿ ಪ್ರದರ್ಶಿಸಲಾಯಿತು.

ಇದನ್ನೂ ಓದಿ: Asia Cup 2023: ಭಾರತ-ಪಾಕ್​ ಹೈವೋಲ್ಟೇಜ್ ಪಂದ್ಯ ನಡೆಯುವುದೇ ಅನುಮಾನ!

ಮಾಜಿ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಪಾಲಿಕೆ ಸದಸ್ಯ ಎಚ್.ಸಿ.ಯೋಗೇಶ್, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಎಸಿ ಸತ್ಯನಾರಾಯಣ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಸಂತೋಷ್ ಕುಮಾರ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸುಂದರೇಶ್, ಇತರೆ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version