Site icon Vistara News

Koppala News: ಜಿಟಿ ಜಿಟಿ ಮಳೆಯಲ್ಲಿಯೇ ಶಾಸಕ ಜನಾರ್ದನ ರೆಡ್ಡಿ ಸಿಟಿ ರೌಂಡ್

Gangavathi MLA Janardhana Reddy city round in the rain

ಗಂಗಾವತಿ: ನಗರದ ವಿವಿಧೆಡೆ ಶಾಸಕ ಜಿ. ಜನಾರ್ದನ ರೆಡ್ಡಿ, (Janardhana Reddy) ಬುಧವಾರ ಸಂಜೆ ಸುರಿಯುತ್ತಿದ್ದ ಜಿಟಿ ಜಿಟಿ ಮಳೆಯಲ್ಲಿಯೇ ಅಧಿಕಾರಿಗಳೊಂದಿಗೆ ಕಾಲ್ನಡಿಗೆಯ ಮೂಲಕ ಸಿಟಿರೌಂಡ್ (City round) ನಡೆಸಿ, ಸಾರ್ವಜನಿಕರ ಸಮಸ್ಯೆಗಳನ್ನು (Public problem) ಆಲಿಸಿದರು.

ನಗರದ ಇಂದಿರಾವೃತ್ತದಿಂದ ಕಾಲ್ನಡಿಗೆಯ ಮೂಲಕ ಮೂಲಕ ಆರಂಭವಾದ ಶಾಸಕ ರೆಡ್ಡಿ ಅವರ ಸಿಟಿರೌಂಡ್, ದುರುಗಮ್ಮನ ನಾಲಾ, ಶಿವೆ ಚಿತ್ರಮಂದಿರ, ಬಸ್‌ ನಿಲ್ದಾಣದ ರಸ್ತೆಗಳಲ್ಲಿ ಸಂಚರಿಸಿ ಮಳೆಯಿಂದ ಆಗುತ್ತಿರುವ ಸಮಸ್ಯೆ ಪರಿಶೀಲಿಸಿದರು.

ದುರುಗಮ್ಮ ನಾಲಾದಿಂದ ಜುಲೈನಗರದ ವರೆಗೆ ಇರುವ ಎರಡೂ ಬದಿಯ ರಸ್ತೆಗಳ ಮಧ್ಯೆ ಇರುವ ಆಳವಾದ ತಗ್ಗುಗುಂಡಿಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುತ್ತಿರುವ ದೃಶ್ಯ ಗಮನಿಸಿದರು.

ಇದನ್ನೂ ಓದಿ: Success Story: ತರಕಾರಿ ಮಾರುತ್ತಿದ್ದ ವ್ಯಕ್ತಿ ಈಗ ಕಂಪನಿ ಸಿಇಒ; ಇದು ದಿಲ್‌’ಖುಷ್’ ಆಗುವ ಕತೆ

ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ನಗರಸಭೆಯ ಪೌರಾಯುಕ್ತ ವಿರೂಪಾಕ್ಷಮೂರ್ತಿ ಅವರಿಗೆ ಸೂಚನೆ ನೀಡಿದರು. ತಕ್ಷಣಕ್ಕೆ ದುರಸ್ತಿ ಸಾಧ್ಯವಾಗದೇ ಹೋದರೆ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಸೂಚನೆ ನೀಡಿದರು.

ಗಂಗಾವತಿ ನಗರದ ಬೈಪಾಸ್ ರಸ್ತೆ ಮತ್ತು ಗೌಳಿ ಮಹದೇವಪ್ಪ ರೋಡ್ ಅವ್ಯವಸ್ಥೆ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ರೆಡ್ಡಿ, ಮಳೆಯಲ್ಲೇ ಅಧಿಕಾರಿಗಳೊಂದಿಗೆ ತೆರಳಿ ರಸ್ತೆ ವೀಕ್ಷಣೆ ಮಾಡಿದರು.

ಇದನ್ನೂ ಓದಿ: IND vs WI 1st ODI: ಹೊಸ ಜೆರ್ಸಿಯಲ್ಲಿ ಕಂಗೊಳಿಸಿದ ಟೀಮ್​ ಇಂಡಿಯಾ ಆಟಗಾರರು

ಬೈಪಾಸ್ ರಸ್ತೆ, ಮಹಾದೇವಪ್ಪ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಮೊಣಕಾಲೆತ್ತರಕ್ಕೆ ರಸ್ತೆಯಲ್ಲಿ ತಗ್ಗು ಬಿದ್ದು ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

Exit mobile version