Site icon Vistara News

Lakshmi Hebbalkar: ಅಂಗನವಾಡಿ ಪರಿಕಲ್ಪನೆಯನ್ನೇ ನಮ್ಮ ಸರ್ಕಾರ ಬದಲಾಯಿಸಿದೆ; ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Our government has changed the concept of Anganwadi says Minister Lakshmi Hebbalkar

ಬೆಳಗಾವಿ: ಕಳೆದ 49 ವರ್ಷಗಳ ಹಿಂದೆ ಇಡೀ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿದ ಹೆಗ್ಗಳಿಕೆ ಕರ್ನಾಟಕದ್ದು. ಈಗ ಮತ್ತೆ ದೇಶದಲ್ಲೇ ಪ್ರಪ್ರಥಮ ಬಾರಿಗೆ ಅಂಗನವಾಡಿಗಳಲ್ಲೇ ‘ಸರ್ಕಾರಿ ಮಾಂಟೆಸ್ಸರಿ’ ಆರಂಭಿಸುವ ಮೂಲಕ ‘ಕರ್ನಾಟಕ’ ದೇಶದ ಇತಿಹಾಸದ ಸುವರ್ಣಾಕ್ಷರದಲ್ಲಿ ಬರೆಯುವಂತ ಹೊಸ ದಾಖಲೆ ಮಾಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar) ಹೇಳಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರೀಕರ ಹಾಗೂ ವಿಶೇಷ ಚೇತನರ ಇಲಾಖೆ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿದ ಸಚಿವರು, ಕರ್ನಾಟಕದಲ್ಲಿ 1975ನೇ ಇಸವಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಪ್ರಪ್ರಥಮ ಬಾರಿಗೆ ನಮ್ಮ ದೇಶದ ಉಕ್ಕಿನ ಮಹಿಳೆ ದಿ. ಇಂದಿರಾ ಗಾಂಧಿಯವರು ಅಂಗನವಾಡಿಗಳಿಗೆ ಚಾಲನೆ ಕೊಟ್ಟರು ಎಂದು ಹೇಳಿದರು.

ಇದನ್ನೂ ಓದಿ: Invest Karnataka: ಸನ್ಸೇರಾ ಕಂಪನಿಯಿಂದ ರಾಜ್ಯದಲ್ಲಿ 2,100 ಕೋಟಿ ರೂ. ಹೂಡಿಕೆ; ರಾಮನಗರದಲ್ಲಿ ಘಟಕ

ಬಡವರ, ಹಳ್ಳಿಯ ರೈತರ ಮಕ್ಕಳಿಗೆ ಪೌಷ್ಠಿಕ ಆಹಾರದ ಜತೆಯಲ್ಲಿ ಅವರಿಗೆ ಒಳ್ಳೆಯ ಶಿಕ್ಷಣ ಸಿಗಬೇಕು; ಒಳ್ಳೆಯ ಆರೈಕೆ ಸಿಗಬೇಕು ಎನ್ನುವ ಆಶಯದಿಂದ 49 ವರ್ಷಗಳ ಹಿಂದೆ ದಿ. ಇಂದಿರಾ ಗಾಂಧಿಯವರು, ಅದೂ ಕರ್ನಾಟಕದಲ್ಲೇ, ಅದೂ ನಮ್ಮ ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಸ್ಥಾಪಿಸಿದರು. ಕರ್ನಾಟಕದಲ್ಲಿ ಅಂಗನವಾಡಿ ಸ್ಥಾಪನೆಗೊಂಡು ಮುಂದಿನ ವರ್ಷಕ್ಕೆ ಐವತ್ತು ವರ್ಷಗಳು ತುಂಬಲಿದ್ದು, ನಮ್ಮ ಅಂಗನವಾಡಿಗಳು ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ಸಂತಸದ ವಿಷಯ ಎಂದರು.

ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ

ಇಡೀ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಅದೂ ನಮ್ಮ ಕರ್ನಾಟಕದಲ್ಲಿ ನಮ್ಮ ಅಂಗನವಾಡಿಗಳು ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಸುಸಂದರ್ಭದಲ್ಲಿ ಇಲಾಖೆಯ ಸಚಿವೆಯಾಗಿ ಇರುವುದು ಹೆಮ್ಮೆ ಎನಿಸುತ್ತಿದೆ. ಹಿಂದೆ ಒಂದು ಕಾಲವಿತ್ತು ಅಂಗನವಾಡಿಗಳಿಗೆ ಹೋಗುವ ಮಕ್ಕಳೆಂದರೆ, ನರ್ಸರಿಗಳಿಗೆ ಫೀ ಕಟ್ಟಲಾಗದವರು, ಬಡವರ ಮಕ್ಕಳು ಮಾತ್ರ ಹೋಗುವ ಪರಿಕಲ್ಪನೆ ಇತ್ತು. ಆದರೆ, ಇಂದು ಆ ಪರಿಕಲ್ಪನೆ ಬದಲಾಗಿದೆ. ನಮ್ಮ ಸರ್ಕಾರ ನಮ್ಮ ಅಂಗನವಾಡಿ ಚಿತ್ರಣವನ್ನೇ ಬದಲಾಯಿಸಿದೆ. ನಮ್ಮ ಅಂಗನವಾಡಿಗಳಲ್ಲೇ ಸರ್ಕಾರಿ ಮಾಂಟೆಸ್ಸರಿ-ಪೂರ್ವ ಪ್ರಾಥಮಿಕ ಶಾಲೆಗಳನ್ನಾಗಿ ಆರಂಭಿಸಿದೆ. ಈಗಾಗಲೇ, ಬೆಂಗಳೂರಿನಲ್ಲಿ 250 ಎಲ್‌ಕೆಜಿ, ಯುಕೆಜಿ ನರ್ಸರಿಗಳು ಚಾಲನೆಗೊಂಡಿವೆ ಎಂದು ಹೇಳಿದರು.

ದುಡಿಯುವ ಜನರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ

ದೇಶ ಬೆಳೆಯುತ್ತಿದೆ. ರಾಜ್ಯವೂ ಅಭಿವೃದ್ಧಿಯಲ್ಲಿ ಮುನ್ನಡೆಯುತ್ತಿವೆ, ಹಾಗೆಯೇ ನಮ್ಮ ಅಂಗನವಾಡಿಗಳು ಕೂಡ ಉನ್ನತೀಕರಣ ಆಗಬೇಕೆಂಬ ಆಶಯದಿಂದ ನಮ್ಮ ಇಲಾಖೆ, ಅಂಗನವಾಡಿಗಳನ್ನು ಆಧುನೀಕರಣಗೊಳಿಸುತ್ತಿದೆ. ಇದು ಪೈಪೋಟಿ ಯುಗ, ಆಧುನಿಕ ತಂತ್ರಜ್ಜಾನ ಯುಗ. ಹಾಗಾಗಿ, ಇಂತಹ ಯುಗದಲ್ಲಿ, ಬಿಡುವಿಲ್ಲದೆ ದುಡಿಯುವ ಜನರ ಮಕ್ಕಳು, ರೈತರ ಮಕ್ಕಳು ಕೂಡ ನರ್ಸರಿ ಕಲಿಯಬೇಕೆಂಬ ಆಶಯದಿಂದ ಸರ್ಕಾರಿ ಮಾಂಟೆಸ್ಸರಿಗಳನ್ನು ಆರಂಭಿಸಲಾಗಿದೆ. ಇಂಗ್ಲೀಷ್ ಮತ್ತು ಕನ್ನಡದಲ್ಲಿ ಮಕ್ಕಳಿಗೆ ಕಲಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಅಂಗನವಾಡಿಯಲ್ಲೂ ಎಂಎ, ಬಿಇ ಕಲಿತವರು

ಅಂಗನವಾಡಿಗಳಲ್ಲಿ ಸರ್ಕಾರದ, ಇಲಾಖೆಯ ಅಶಯದಂತೆ ಕಾರ್ಯಕರ್ತೆಯರು ಕೆಲಸ ಮಾಡಬೇಕು. ತಮ್ಮ ಮಕ್ಕಳಂತೆ ಫೋಷಿಸಿ, ಅವರನ್ನು ಒಳ್ಳೆಯ ಶಿಕ್ಷಣವಂತರಾಗಿ ಬೆಳೆಯಲು ಸಹಕಾರ ನೀಡಬೇಕು. ಈಗ ಅಂಗನವಾಡಿ ಗಳಲ್ಲಿ ಕೆಲಸ ಮಾಡುವವರಿಗೆ ಪಿಯುಸಿ ಮಾನದಂಡ ಮಾಡಲಾಗಿದೆ. ಆದರೆ, ಈಗಾಗಲೇ ಅಂಗನವಾಡಿಗಳಲ್ಲಿ ಎಂ ಎ, ಬಿಎ, ಬಿಎಡ್, ಬಿಇ ಕಲಿತವರು ಕೂಡ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದು ಹೆಮ್ಮೆಯ ಸಂಗತಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

18 ಸಾವಿರ ಮಾಂಟೆಸ್ಸರಿ ಆರಂಭ

ಇಡೀ ರಾಜ್ಯದಲ್ಲಿ 18 ಸಾವಿರ, ಬೆಳಗಾವಿ ಜಿಲ್ಲೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು, ಅದರಲ್ಲೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ 300ಕ್ಕೂ ಅಧಿಕ ಎಲ್‌ಕೆಜಿ, ಯುಕೆಜಿ ಯನ್ನು ಆರಂಭಿಸಲಾಗುವುದು. ಇಂಗ್ಲೀಷ್ ಮತ್ತು ಕನ್ನಡ ಮಾಧ್ಯಮದಲ್ಲಿ ಮಾಂಟೆಸ್ಸರಿಗಳನ್ನು ತೆರೆಯಲಾಗುತ್ತಿದ್ದು, ಇಲಾಖೆ ವತಿಯಿಂದ ಮಕ್ಕಳಿಗೆ ಯುನಿಫಾರಂ, ಸ್ಕೂಲ್ ಬ್ಯಾಗ್, ನೋಟ್ ಪುಸ್ತಕ, ಕಲಿಕಾ ಪುಸ್ತಕಗಳನ್ನು ವಿತರಿಸಲಾಗುವುದು. ಮುಂದಿನ ತರಗತಿಗಳಿಗೆ ಹೋಗಲು ಟಿಸಿ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಇದನ್ನೂ ಓದಿ: MB Patil: ರಾಜ್ಯದಲ್ಲಿ ಟೊಯೋಟಾ ಕಂಪನಿಯ ಹೂಡಿಕೆ ಅಬಾಧಿತ; ಸಚಿವ ಎಂ‌.ಬಿ. ಪಾಟೀಲ

ಈ ವೇಳೆ ಇಲಾಖೆಯ ಉಪ ನಿರ್ದೇಶಕ ನಾಗರಾಜ, ಸಿಡಿಪಿಓ ಸುಮಿತ್ರಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಉಪಸ್ಥಿತರಿದ್ದರು.

Exit mobile version