Site icon Vistara News

Rain News : ಭಾರಿ ಮಳೆಗೆ ಸೋರುತಿಹುದು ಸುರಂಗ ಮಾಳಿಗೆ; ಗುಡ್ಡದ ಮಣ್ಣು ಕುಸಿತ

national Highway 66 Tunnel water Leakage

ಕಾರವಾರ: ಅದು ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಲಾಗಿರುವ ಸುರಂಗ ಮಾರ್ಗ. ಚತುಷ್ಪಥ ಹೆದ್ದಾರಿಗಾಗಿ ನಾಲ್ಕು ಟನಲ್‌ಗಳಿದ್ದು (Tunnel water Leakage) ಈಗಾಗಲೇ ವಾಹನ ಸಂಚಾರಕ್ಕೂ ಅನುವು ಮಾಡಿಕೊಡಲಾಗಿದೆ. ಆದರೆ ಕರಾವಳಿಯಲ್ಲಿ ಸುರಿದ ಧಾರಾಕಾರ ಮಳೆಗೆ (Rain News) ಇದೀಗ ಟನಲ್ ಹೊರಗೆ ಮಣ್ಣು ಕುಸಿದು ರಸ್ತೆಗೆ ಬೀಳುತ್ತಿದ್ದು, ಇನ್ನೊಂದೆಡೆ ಸುರಂಗದೊಳಗೆ ನೀರು ಸೋರಿಕೆಯಾಗುತ್ತಿದೆ. ಇದು ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ.

ಕರಾವಳಿಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಅಬ್ಬರಿಸಿದ ವರುಣ ಶುಕ್ರವಾರ ಉತ್ತರ ಕನ್ನಡದಲ್ಲಿ ಕೊಂಚ ಬಿಡುವು ನೀಡಿದ್ದಾನೆ. ತಗ್ಗು ಪ್ರದೇಶಗಳಲ್ಲಿ ಸಂಗ್ರಹವಾಗಿದ್ದ ನೀರು ಇದೀಗ ಇಳಿಕೆಯಾಗಿದ್ದು, ಜನರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಕಾರವಾರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರ್ಮಿಸಲಾಗಿರುವ ಟನಲ್ ಮಾರ್ಗದಲ್ಲಿ ಧಾರಾಕಾರ ಮಳೆಯಿಂದಾಗಿ ಮಣ್ಣು ಕುಸಿತ ಉಂಟಾಗಿದೆ.

ಜತೆಗೆ ಟನಲ್ ಒಳಗೂ ಸಹ ನೀರು ಸೋರಿಕೆಯಾಗುತ್ತಿದೆ. ಮಳೆ ನಿಂತಿದ್ದರೂ ಸಹ ಗುಡ್ಡದ ಮೇಲಿನಿಂದ ನಿರಂತರವಾಗಿ ನೀರು ಹರಿದು ಟನಲ್ ಒಳಗಿನ ಮೇಲ್ಛಾವಣಿಯಿಂದ ಇಳಿಯುತ್ತಿದ್ದು, ಇದು ವಾಹನ ಸವಾರರಿಗೆ ಆತಂಕ ಉಂಟು ಮಾಡಿದೆ.

ಕರಾವಳಿಯಲ್ಲಿ ಮೊದಲೇ ಮಳೆಯ ಪ್ರಮಾಣ ಹೆಚ್ಚಿಗೆ ಇದ್ದು ಹಲವೆಡೆ ಅವಾಂತರಗಳನ್ನು ಸೃಷ್ಟಿಸಿದೆ. ಇದೀಗ ಟನಲ್ ಬಳಿ ಮಣ್ಣು ಕುಸಿಯುತ್ತಿರುವುದರಿಂದ ಈ ಮಾರ್ಗದಲ್ಲಿ ಓಡಾಡಲು ವಾಹನ ಸವಾರರು ಭಯಪಡುವಂತಾಗಿದೆ. ಕಳೆದ ಮೂರ್ನಾಲ್ಕು ದಿನ ಸುರಿದ ಧಾರಾಕಾರ ಮಳೆಗೆ ಟನಲ್ ಎದುರು ಗುಡ್ಡದ ಮೇಲಿನಿಂದ ಮಣ್ಣು ಕುಸಿದಿದ್ದು, ಮಣ್ಣು ಮಿಶ್ರಿತ ನೀರು ರಸ್ತೆಯ ಮೇಲೂ ಸಹ ಹರಿದಿದೆ.

ಇದನ್ನೂ ಓದಿ: Rain News : ಭಾರಿ ಮಳೆಗೆ ನೋಡ ನೋಡುತ್ತಿದ್ದಂತೆ ಕುಸಿಯಿತು ಮನೆ ಮುಂದಿದ್ದ ಬಾವಿ

ಇದರಿಂದ ಹೆದ್ದಾರಿಯಲ್ಲಿ ಸಾಗುವ ವಾಹನಗಳು ಸ್ಕಿಡ್ ಆಗಿ ಬೀಳುವ ಸಾಧ್ಯತೆಗಳಿದ್ದು ಸದ್ಯ ಮುಂಜಾಗ್ರತಾ ಕ್ರಮವಾಗಿ ಟನಲ್ ಕೊನೆಯಲ್ಲಿ ಒಂದು ಬದಿ ಬ್ಯಾರಿಕೇಡ್ ಹಾಕಲಾಗಿದೆ. ಅಲ್ಲದೇ ಒಮ್ಮೊಮ್ಮೆ ಟನಲ್ ಒಳಗೆ ವಿದ್ಯುತ್ ದೀಪಗಳು ಬಂದ್ ಆಗುತ್ತಿದ್ದು, ಇದೂ ಸಹ ವಾಹನ ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯ ಶಾಸಕ ಸತೀಶ್ ಸೈಲ್ ಹೆದ್ದಾರಿಯ ಹಲವೆಡೆ ಐಆರ್‌ಬಿ ಕಂಪೆನಿ ಅವೈಜ್ಞಾನಿಕ ಕಾಮಗಾರಿ ನಡೆಸಿದ್ದು ಟನಲ್ ಒಳಗಿನ ಸೋರಿಕೆ ಕುರಿತು ಸರಿಪಡಿಸಲು ಸೂಚನೆ ನೀಡುವುದಾಗಿ ತಿಳಿಸಿದ್ದಾರೆ.

ಒಟ್ಟಾರೆ ಹೆದ್ದಾರಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಟನಲ್ ಮಾರ್ಗ ಮೊದಲ ಮಳೆಗೆ ಸೋರಿಕೆಯಾಗುತ್ತಿರುವುದು ಕಾಮಗಾರಿಯ ಕುರಿತು ಪ್ರಶ್ನೆ ಉದ್ಭವಿಸಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಮುಂದೆ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಬೇಕಾಗಿದೆ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version