Site icon Vistara News

Rain News | ಅಣ್ಣನೊಂದಿಗೆ ಶಾಲೆಗೆ ಬೈಕ್‌ನಲ್ಲಿ ಹೊರಟ್ಟಿದ್ದವಳು ಹಳ್ಳದಲ್ಲಿ ಕೊಚ್ಚಿಹೋದಳು

ಹಾಸನ: ಇಲ್ಲಿನ ಚನ್ನರಾಯಪಟ್ಟಣ ತಾಲೂಕಿನ ದಡ್ಡಿಹಳ್ಳಿಯಲ್ಲಿ ಸತತ ಮಳೆಗೆ (Rain News) ಕೆರೆ ಕೋಡಿಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದು, ಇದರ ಅಪಾಯವನ್ನು ಅರಿಯದೆ ಬೈಕ್‌ ಚಲಾಯಿಸಿದ ಪರಿಣಾಮ ಹಿಂಬದಿ ಕುಳಿತಿದ್ದ ವಿದ್ಯಾರ್ಥಿನಿಯೊಬ್ಬಳು ನೀರು ಪಾಲಾದ ಘಟನೆ ಗುರುವಾರ ನಡೆದಿದೆ. ಹೆಗ್ಗಡಗೆರೆ ಗ್ರಾಮದ ರಾಜಾಭೋವಿ ಪುತ್ರಿ ರಂಜಿತಾ (11) ಮೃತ ದುರ್ದೈವಿ.

ರಂಜಿತಾ ಎಂದಿನಂತೆ ಗುರುವಾರ ಬೆಳಗ್ಗೆ ಶಾಲೆಗೆ ತನ್ನ ದೊಡ್ಡಪ್ಪನ ಮಗನೊಂದಿಗೆ ಬೈಕ್‌ನಲ್ಲಿ ಶಾಲೆಗೆ ತೆರಳಿದ್ದಳು. ಈ ವೇಳೆ ಕೆರೆಕೋಡಿ ತುಂಬಿ ರಸ್ತೆಗೆ ಹರಿಯುತ್ತಿತ್ತು. ಎಂದಿನಂತೆ ಎಂದು ತಿಳಿದ ಸಹೋದರ ಅದರಲ್ಲಿಯೇ ಬೈಕ್‌ ಚಲಾಯಿಸಿಕೊಂಡು ಹೋಗಿದ್ದಾನೆ. ಆದರೆ, ಈ ವೇಳೆ ನೀರಿನ ರಭಸ ಹೆಚ್ಚು ಇದ್ದಿದ್ದರಿಂದ ಬೈಕ್‌ ನಿಯಂತ್ರಣ ತಪ್ಪಿದೆ. ಹಾಗೇ ಬೈಕ್‌ ಸಮೇತ ಇಬ್ಬರೂ ನೀರಿಗೆ ಬಿದ್ದಿದ್ದಾರೆ. ನೀರಿನ ರಭಸಕ್ಕೆ ರಂಜಿತಾ ನೀರು ಪಾಲಾಗಿದ್ದಾಳೆ. ಅವಳನ್ನು ಕಾಪಾಡಲು ಪ್ರಯತ್ನಪಟ್ಟನಾದರೂ ಸಾಧ್ಯವಾಗಲಿಲ್ಲ. ಮೊದಲೇ ಹೆದರಿದ್ದ ಆತ ಈಜಿಕೊಂಡು ದಡ ಸೇರಿದ್ದಾನೆ.

ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಕಾರ್ಯಾಚರಣೆಗೆ ಇಳಿದ ಸ್ಥಳೀಯರೇ ಹಳ್ಳದಲ್ಲಿ ಹುಡುಕಾಡಿದ್ದಾರೆ. ಸುಮಾರು ಒಂದು ಗಂಟೆ ಕಾಲ ಹುಡುಕಾಡಿ ಮೃತದೇಹವನ್ನು ಹೊರತೆಗೆದಿದ್ದಾರೆ. ರಂಜಿತಾಳ ಸಾವಿನ ಸುದ್ದಿ ಕೇಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ | Rain news | ಅಡುಗೆ ಮಾಡುತ್ತಿದ್ದಾಗಲೇ ಕುಸಿದು ಬಿತ್ತು ಮಣ್ಣಿನ ಮನೆ; ಪ್ರಾಣ ಭಯದಿಂದ ಓಡಿ ಬಂದ ಸದಸ್ಯರು

Exit mobile version