Site icon Vistara News

Bachelor Party: ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌

Bachelor Party

ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಚಿತ್ರದ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಚಿತ್ರದ ಟೀಸರ್‌ ಅನ್ನು ನಟ ರಕ್ಷಿತ್‌ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಜನವರಿ 26 ರಂದು ‘ಬ್ಯಾಚುಲರ್ ಪಾರ್ಟಿ’ ಸಿನಿಮಾ (Bachelor Party Movie) ರಿಲೀಸ್‌ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.

ಕಾಮಿಡಿ ಜಾನರ್‌ನ ಈ ಸಿನಿಮಾದಲ್ಲಿ ನಟ ದಿಗಂತ್, ಲೂಸ್ ಮಾದ ಯೋಗಿ, ಅಚ್ಯುತ್ ಕುಮಾ‌ರ್, ನಟಿ ಸಿರಿ ರವಿಕುಮಾರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪಾರ್ಟಿಗೆ ಹೋಗ್ತಿದ್ದೀವಿ, ನಿಮ್ಮೆಲ್ಲರನ್ನು ಬಿಟ್ಟು ಹೋಗೋದಿಕ್ಕಾಗುತ್ತಾ… ಈ ಸಲ ಪಾರ್ಟಿ ಜೋರು ಎಂದು ಎಕ್ಸ್‌ ಖಾತೆಯಲ್ಲಿ ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಈ ಮೂಲಕ ಸಿನಿಮಾದಲ್ಲಿ ಮನರಂಜನೆಯ ರಸದೌತಣವಿರಲಿದೆ ಎಂದು ಚಿತ್ರತಂಡ ಮುನ್ಸೂಚನೆ ನೀಡಿದೆ.

ಕಿರಿಕ್ ಪಾರ್ಟಿ’ ಚಿತ್ರದ ಬರಹಗಾರ ಅಭಿಜಿತ್ ಮಹೇಶ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಕಿರಿಕ್‌ ಪಾರ್ಟಿಯ ಬರಹಗಾರರಲ್ಲಿ ಅಭಿಜಿತ್ ಮಹೇಶ್ ಕೂಡ ಒಬ್ಬರು. ಈ ಚಿತ್ರದ ಮೂಲಕ ಇದೀಗ ಅವರು ಸ್ವತಂತ್ರ ನಿರ್ದೇಶಕರಾಗಿ ಬೆಳ್ಳಿ ಪರದೆಗೆ ಕಾಲಿಡುತ್ತಿದ್ದಾರೆ. ಪರಂವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಅಮಿತ್ ಗುಪ್ತ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದು, ಅರವಿಂದ್ ಛಾಯಾಗ್ರಹಣ, ಅರ್ಜುನ್ ರಾಮು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಇದನ್ನೂ ಓದಿ | Kannada New Movie: ಜ್ಯೂನಿಯರ್‌​ ದರ್ಶನ್​ ನಟನೆಯ ಸಿನಿಮಾ ಟೈಟಲ್‌ ರಿವೀಲ್‌!

ನಿರೂಪ್ ಭಂಡಾರಿಗೆ ಜೋಡಿಯಾದರು ಬೃಂದಾ ಆಚಾರ್ಯ!

ಬೆಂಗಳೂರು: ಒಂದು ಪಾತ್ರದ ಮೂಲಕ ಅದೃಷ್ಟ ಖುಲಾಯಿಸಿಕೊಂಡ ನಟಿಯರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು ಹೊನ್ನಾವರದ ಹುಡುಗಿ ಬೃಂದಾ ಆಚಾರ್ಯ (Brinda Acharya). ಕೌಸಲ್ಯ ಸುಪ್ರಜಾ ರಾಮ ಚಿತ್ರದಲ್ಲಿ ಶಿವಾನಿಯಾಗಿ ಮನಸೋರೆಗೊಂಡಿದ್ದ ಬೃಂದಾ ಮುಂದೀಗ ಅವಕಾಶಗಳ ಸುಗ್ಗಿ ಶುರುವಾಗಿದೆ. ಲೇಟೆಸ್ಟ್ ವಿಚಾರವೇನೆಂದರೆ, ಬೃಂದಾ ಇದೀಗ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ಬೃಂದಾ ಆಚಾರ್ಯ ನಿರೂಪ್ ಭಂಡಾರಿಗೆ (Nirup Bhandari) ಜೋಡಿಯಾಗಿ ನಟಿಸಲಿದ್ದಾರೆ. ಸದ್ಯದ ಮಟ್ಟಿಗೆ ಈ ಸಿನಿಮಾ ಬಗ್ಗೆ ಕೆಲವೇ ಕೆಲ ಮಾಹಿತಿಗಳು ಮಾತ್ರವೇ ಜಾಹೀರುಗೊಂಡಿವೆ.

ಈ ಚಿತ್ರವನ್ನು ಸಚಿನ್ ವಾಲಿ ನಿರ್ದೇಶನ ಮಾಡಲಿದ್ದಾರೆ. ಸಿನಿಮಾ ರಂಗದಲ್ಲಿ ಹಲವಾರು ವರ್ಷಗಳಿಂದ ಸಕ್ರಿಯರಾಗಿರುವ ಸಚಿನ್ ಪಾಲಿಗಿದು ಸ್ವತಂತ್ರ ನಿರ್ದೇಶಕರಾಗಿ ಮೊದಲ ಚಿತ್ರ. ಇನ್ನುಳಿದಂತೆ ಬೃಂದಾ ಪಾತ್ರದ ವಿಚಾರಕ್ಕೆ ಬರೋದಾದರೆ, ಅವರ ಪಾಲಿಗೆ ಇಲ್ಲಿಯೂ ಕೂಡಾ ಭಿನ್ನವಾದ ಪಾತ್ರವೇ ಒಲಿದು ಬಂದಿದೆ. ಕಿರುತೆರೆಯಲ್ಲಿ ಖ್ಯಾತಿ ಗಳಿಸಿಕೊಂಡಿರುವ ಅಂಕಿತಾ ಅಮರ್ ಕೂಡಾ ಈ ಚಿತ್ರದಲ್ಲಿ ರಿಪೋರ್ಟರ್ ಆಗಿ ನಟಿಸಲಿದ್ದಾರೆ. ಕೌಸಲ್ಯ ಸುಪ್ರಜಾ ರಾಮ ಚಿತ್ರದಲ್ಲಿನ ಶಿವಾನಿಯಾಗಿ ಬೃಂದಾ ಆಚಾರ್ಯ ಎಲ್ಲರಿಗೂ ಹಿಡಿಸಿದ್ದರು. ಆ ನಂತರದಲ್ಲಿ ಒಂದರ ಹಿಂದೊಂದರಂತೆ ಮೂರು ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದರು. ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ, ರಾಮ ರಾಮಾ ರೇ ಖ್ಯಾತಿಯ ಸತ್ಯ ಪ್ರಕಾಶ್ ಜಿತೆಗಿನ ಎಕ್ಸ್ ಆ್ಯಂಡ್ ವೈ, ಎಸ್ ನಾರಾಯಣ್ ನಿರ್ದೇಶನದ ಒಂದ್ಸಲ ಮೀಟ್ ಮಾಡೋಣ ಚಿತ್ರಗಳು ಬೃಂದಾರ ಕೈಲಿವೆ. ಇದೀಗ ಕಥೆ, ಪಾತ್ರವನ್ನು ಇಷ್ಟಪಟ್ಟು ಸದರಿ ಚಿತ್ರಕ್ಕೆ ಸಹಿ ಹಾಕಿದ್ದಾರೆ.

ಒಂದು ಯಶಸ್ವಿ ಚಿತ್ರದಲ್ಲಿ ನಟಿಸಿಯಾದ ನಂತರ ಇಡುವ ಪ್ರತೀ ಹೆಜ್ಜೆಗಳು, ತೆಗೆದುಕೊಳ್ಳುವ ನಿರ್ಧಾರಗಳು ಕಲಾವಿದರ ವೃತ್ತಿ ಬದುಕನ್ನು ರೂಪಿಸುತ್ತವೆ. ಈ ನಿಟ್ಟಿನಲ್ಲಿ ನೋಡೋದಾದರೆ ಬೃಂದಾರದ್ದು ಪ್ರೌಢ ನಡೆ. ಯಾಕೆಂದರೆ, ತಾನು ನಟಿಸುವ ಪ್ರತೀ ಪಾತ್ರಗಳೂ ಕೂಡಾ ಹೊಸತನದೊಂದಿಗೆ ಪ್ರೇಕ್ಷಕರನ್ನು ತಲುಪಬೇಕೆಂಬ ಇರಾದೆ ಅವರಲ್ಲಿದೆ. ಅದೇ ಮನಃಸ್ಥಿತಿಯಲ್ಲಿ ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದ ಬೃಂದಾ ನಾಲ್ಕನೇ ಚಿತ್ರಕ್ಕೂ ಸಹಿ ಮಾಡಿದ್ದಾರೆ.

ಇದನ್ನೂ ಓದಿ | Ram Mandir: ಯಶ್‌-ಅಮಿತಾಭ್‌ ಬಚ್ಚನ್;‌ ಮಂದಿರ ಉದ್ಘಾಟನೆಗೆ ಯಾರಿಗೆಲ್ಲ ಆಹ್ವಾನ? ಪಟ್ಟಿ ಇಲ್ಲಿದೆ

ಈ ಚಿತ್ರದಲ್ಲಿ ಅವರು ಸೋಶಿಯಲ್ ಮೀಡಿಯಾ ಇನ್ ಫ್ಲೂಯೆನ್ಸರ್ ಪಾತ್ರದಲ್ಲಿ ನಟಿಸಲಿದ್ದಾರಂತೆ. ಹೊಸಾ ಆವೇಗ ಹೊಂದಿರುವ ಆ ಪಾತ್ರಕ್ಕೆ ಜೀವ ತುಂಬಲು ಎಲ್ಲ ತಯಾರಿಗಳನ್ನೂ ಈಗಾಗಲೇ ಮಾಡಿಕೊಂಡಿದ್ದಾರೆ. ಅಂದಹಾಗೆ, ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಈ ನಾಲ್ಕನೇ ಸಿನಿಮಾದ ಮತ್ತಷ್ಟು ವಿವರಗಳು ಸದ್ಯದಲ್ಲಿಯೇ ಹೊರಬೀಳಲಿವೆ.

Exit mobile version