Site icon Vistara News

Ram Mandir : ಮುಕ್ಕಾಲು ಇಂಚಿನ ಚಾಕ್‌ಪೀಸ್‌ನಲ್ಲಿ ಅರಳಿದ ಅಯೋಧ್ಯಾ ಬಾಲರಾಮ

Engraving of Balarama on chalk piece

ಬೆಂಗಳೂರು: ಜನವರಿ 22ರ ಅಯೋಧ್ಯಾ ಶ್ರೀರಾಮಮಂದಿರ (Ram Mandir) ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಇಡೀ ವಿಶ್ವವೇ ಎದುರು ನೋಡುತ್ತಿದೆ. ದೇಶದ ಮೂಲೆ-ಮೂಲೆಗಳಲ್ಲಿ ರಾಮಜಪ ಜೋರಾಗುತ್ತಿದೆ. ಕೋಟ್ಯಾಂತರ ಭಕ್ತ ಸಮೂಹ ಭಕ್ತಿ ಭಾವೈಕ್ಯತೆಯಲ್ಲಿ ಮುಳುಗುತ್ತಿದೆ. ಇನ್ನು ರಾಜ್ಯದ ಕಲಾವಿದರೊಬ್ಬರ ವಿಶಿಷ್ಟ, ವಿಭಿನ್ನ ಸೇವೆ ಇಡೀ ದೇಶದ (Ayodhya Mandir) ಗಮನ ಸೆಳಿಯುತ್ತಿದೆ.

ಸೂಕ್ಷ್ಮ ಶಿಲ್ಪ ಕಲಾವಿದ ಸಚಿನ್‌ ಸಂಘೆ ಎಂಬುವವರು ಮುಕ್ಕಾಲು ಇಂಚಿನ ಚಾಕ್‌ ಪೀಸ್‌ನಲ್ಲಿ ಬಾಲರಾಮನನ್ನು ಕೆತ್ತುವ ಮೂಲಕ ವಿಭಿನ್ನ ರೀತಿಯಲ್ಲಿ ರಾಮನ ಬಗೆಗಿನ ಪ್ರೀತಿಯನ್ನು ತೋರಿಸಿದ್ದಾರೆ. ಕಳೆದ 15 ದಿನಗಳಿಂದ ಏಕಾಗ್ರತೆಯೊಂದಿಗೆ ಭಕ್ತಿ, ಭಾವದಿಂದ ಬಾಲರಾಮನ 6 ಆಕೃತಿಗಳನ್ನು ಕೆತ್ತಿದ್ದಾರೆ. ಸಚಿನ್‌ ಸಂಘೆ ಅವರು ಇವುಗಳನ್ನು ಅಯೋಧ್ಯೆಯ ರಾಮ ಜನ್ಮಭೂಮಿ ಟ್ರಸ್ಟ್‌‌ಗೆ ಕಳುಹಿಸಿಕೊಟ್ಟಿದ್ದಾರೆ.

ಕಲಾವಿದ ಸಚಿನ್‌ ಸಂಘೆ

ಜನವರಿ 22ರ ಕಾರ್ಯಕ್ರಮಲ್ಲಿ ಭಾಗಿಯಾಗುವ ಪ್ರಧಾನಿ ಮೋದಿ ಸೇರಿ ಹಲವು ಮಂದಿ ಗಣ್ಯಾತಿಗಣ್ಯರಿಗೆ ಈ ಸೂಕ್ಷ್ಮ ಕಲಾಕೃತಿ ಉಡುಗೊರೆಯಾಗಿ ನೀಡಲಿದ್ದಾರೆ. ಹಂಪಿ ಕಲ್ಲಿನ ರಥ, ತಾಜ್‌ ಮಹಲ್‌, ಜೈನ ತೀರ್ಥಂಕರರ ಮೂರ್ತಿಗಳು, ನಾಟ್ಯ ಗಣಪತಿ, ದುರ್ಗಾ, ಹನುಮಂತ, ಶಿರಡಿ ಸಾಯಿಬಾಬಾ ಸೇರಿದಂತೆ ಸಾಕಷ್ಟು ಕಲಾಕೃತಿಗಳನ್ನು ಕೆತ್ತಿರುವ ಸಚಿನ್‌ ಅವರಿಗೆ ಬಾಲರಾಮನ ಕೆತ್ತನೆ ಬಹಳ ವಿಶೇಷವಂತೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಮೂಲದ ಶಿಂಧೆಯವರು ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರೂ, ತಮ್ಮ ಇಷ್ಟದ ಕೆಲಸವನ್ನು ಎಂದಿಗೂ ನಿರ್ಲಕ್ಷ್ಯ ಮಾಡಿಲ್ಲ. ಪ್ರಧಾನಿ ಮೋದಿ, ರಾಮನಾಥ್‌‌ ಕೋವಿಂದ್‌, ದ್ರಾವಿಡ್‌ರಂತಹ ಮಹಾನ್ ಸಾಧಕರಿಂದಲೂ ಬೇಷ್‌ ಎನಿಸಿಕೊಂಡಿರುವ ಸಚಿನ್‌ ಮುಂದಿನ ದಿನಗಳಲ್ಲಿ ಸಂಪೂರ್ಣ ರಾಮಮಂದಿರವನ್ನೂ ಚಾಕ್‌ ಪೀಸ್‌ನಲ್ಲಿಯೇ ರಚಿಸಬೇಕೆಂಬ ಮಹದಾಸೆ ಇದೆ ಎಂದಿದ್ದಾರೆ.

ಇದನ್ನೂ ಓದಿ: Ayodhya Rama Mandir : ರಾಮ ಶಿಲೆ ಸಿಕ್ಕ ಜಾಗದಲ್ಲೂ ಮಂದಿರ ನಿರ್ಮಾಣ; 22ರಂದೇ ಭೂಮಿ ಪೂಜೆ

ರಾಮನ ಅವತಾರದಲ್ಲಿ ಮಕ್ಕಳು ಮಿಂಚಿಂಗ್‌

ಅಯೋಧ್ಯೆ ಸೇರಿ ವಿಶ್ವವೆಲ್ಲವೂ ರಾಮನ ಜಪವನ್ನು ಮಾಡುತ್ತಿದ್ದರೆ, ಇತ್ತ ರಾಜಧಾನಿ ಬೆಂಗಳೂರಲ್ಲಿ ರಾಮನ ಅವತಾರದಲ್ಲಿ ಮಕ್ಕಳು ಮಿಂಚುತ್ತಿದ್ದಾರೆ. ಅಯೋಧ್ಯಾ ಶ್ರೀರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಹಿನ್ನೆಲೆಯಲ್ಲಿ ದೇಶದಾದ್ಯಂತ ವಿಭಿನ್ನ ರೀತಿಯಲ್ಲಿ ಸಂಭ್ರಮವನ್ನು ಆಚರಿಸಲಾಗುತ್ತಿದೆ. ಚಾಕ್‌ಪೀಸ್‌ನಲ್ಲಿ ರಾಮನ ಕೆತ್ತನೆ, ರಾಮನಿಗಾಗಿ 21.5 ಅಡಿಯ ಕೊಳಲು ತಯಾರಿಸಿದ್ದು, ಪಾರ್ಲೆ-ಜಿ ಬಿಸ್ಕತ್‌ಗಳಲ್ಲಿ ಅಯೋಧ್ಯಾ ರಾಮ ಮಂದಿರ ಅರಳಿದೆ.

ಸದ್ಯ ಈಗ ಬೆಂಗಳೂರಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಬಾಲರಾಮನ ವೇಷವನ್ನು ಹಾಕಿ ಫೋಟೋ ಶೂಟ್‌ ಮಾಡಿಸುತ್ತಿದ್ದಾರೆ. ಬಿಲ್ಲು ಬಾಣ ಕೊಟ್ಟು ಜಿಂಕೆ ಬೇಟೆಯಾಡುವ ರೀತಿಯಲ್ಲಿ ವೇಷವನ್ನು ಹಾಕಿ ಖುಷಿ ಪಡುತ್ತಿದ್ದಾರೆ. ವಿದ್ಯಾರಣ್ಯಪುರದಲ್ಲಿ 18 ತಿಂಗಳ ಪುಟಾಣಿ ಲಿಶಾನ್ ಡಿ ಜೈನ್‌ ರಾಮಲಲ್ಲಾನಾಗಿ ಕಾಣಿಸಿಕೊಂಡಿದ್ದಾನೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version