Site icon Vistara News

Recruitment Exam : ಹಿಜಾಬ್ ಗದ್ದಲದ ನಡುವೆಯೇ ವಿವಿಧ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ಶುರು

Kea Recruitment Exam Hijab

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority- KEA) ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಲು (Recruitment Exam) ಅವಕಾಶ ಒದಗಿಸಿದೆ. ಅಕ್ಟೋಬರ್ 28 ಮತ್ತು 29ರಂದು ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗಾಗಿ (Examination on October 28, 29) ಕೆಇಎ ಪರೀಕ್ಷೆಯನ್ನು ನಡೆಸುತ್ತಿದೆ. ಪರೀಕ್ಷೆಗೆ ಹಿಜಾಬ್ ಧರಿಸಿ ಹಾಜರಾಗಲು ಅನುಮತಿ ನೀಡಲಾಗಿದ್ದು, ಇದಕ್ಕೆ ಷರತ್ತು ವಿಧಿಸಲಾಗಿದೆ.

ವಿವಿಧ ನಿಗಮ ಮಂಡಳಿಗಳ 720 ಖಾಲಿ ಹುದ್ದೆಗೆ ಕೆಇಎ ಪರೀಕ್ಷೆಯನ್ನು ನಡೆಸುತ್ತಿದೆ. ಅ.28 ಮತ್ತು 29ರಂದು ಪರೀಕ್ಷೆ ನಡೆಯಲಿದ್ದು, ಈ ಎರಡು ದಿನ ಆಯಾ ಜಿಲ್ಲಾಧಿಕಾರಿಗಳೇ ಜವಾಬ್ದಾರಿಯಾಗಿರುತ್ತಾರೆ. ಮೊದಲ ದಿನ ಬೆಂಗಳೂರಿನ 72 ಪರೀಕ್ಷಾ ಕೇಂದ್ರ ಸೇರಿ ರಾಜ್ಯದ ಒಟ್ಟು 350 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು 1.75 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಅ.29ರಂದು ಒಟ್ಟು 870 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಬೆಂಗಳೂರಿನಲ್ಲಿ 95 ಪರೀಕ್ಷಾ ಕೇಂದ್ರಗಳಿವೆ.

ಯಾವ್ಯಾವ ಹುದ್ದೆಗೆ ಪರೀಕ್ಷೆ?
1) ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ
2) ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್, ಆಹಾರ ನಿಗಮ
3) ಸೈನಿಕ ಕಲ್ಯಾಣ ಮತ್ತು ಪುನರ್ ವಸತಿ ಇಲಾಖೆ

ಅಭ್ಯರ್ಥಿಗಳಿಗೆ ಈ ಷರತ್ತುಗಳು

ಈ ಬಾರಿ ಹಿಜಾಬ್ ಧರಿಸಿ ಹಾಜರಾಗಲು ಅನುಮತಿ ನೀಡಲಾಗಿದೆ. ಆದರೆ ಅದಕ್ಕೆ ಷರತ್ತು ವಿಧಿಸಲಾಗಿದೆ. ಹಿಜಾಬ್‌ ಧರಿಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಪರೀಕ್ಷೆ ಆರಂಭವಾಗುವುದಕ್ಕೆ ಒಂದು ಗಂಟೆ ಮೊದಲು ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಅವರು ಮಹಿಳಾ ಸಿಬ್ಬಂದಿಯಿಂದ ತಪಾಸಣೆಗೆ ಒಳಪಡಬೇಕಾಗುತ್ತದೆ ಎಂದು ಪರೀಕ್ಷಾ ಪ್ರಾಧಿಕಾರ ತಿಳಿಸಿದೆ

ಪರೀಕ್ಷೆಗೆ ಹಾಜರಾಗುವವರು ಪ್ರವೇಶ ಪತ್ರ, ಇತ್ತೀಚಿನ ಪಾಸ್ ಪೋರ್ಟ್ ಅಳತೆಯ 2 ಫೋಟೋ, ಸರ್ಕಾರ ಮಾನ್ಯ ಮಾಡಿರುವ ಗುರುತಿನ ಚೀಟಿ ತರಬೇಕು. ಪರೀಕ್ಷೆ ಮುಗಿಯುವವರೆಗೂ ಹೊರ ಹೋಗಲು ಅವಕಾಶವಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ಈ ನಿಯಮಗಳು ಹಿಂದಿನಿಂದಲೂ ಇವೆ ಮತ್ತು ಅದನ್ನೇ ಯಥಾವತ್ತಾಗಿ ಮುಂದುವರಿಸಲಾಗಿದೆ.

ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು

ಇದನ್ನೂ ಓದಿ: Gold Rate Today: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್‌ ಏರಿಕೆ; ಇಂದಿನ ದರ ಇಷ್ಟಿದೆ

ಏನಿದು ಹಿಜಾಬ್‌ ವಿವಾದ?

2022ರ ಜನವರಿಯಲ್ಲಿ ಉಡುಪಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಅರು ಮಂದಿ ವಿದ್ಯಾರ್ಥಿನಿಯರು ತಮಗೆ ಹಿಜಾಬ್‌ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡುತ್ತಿಲ್ಲ ಎಂದು ಆಕ್ಷೇಪಿಸುವುದರೊಂದಿಗೆ ಹಿಜಾಬ್‌ ವಿವಾದ ರಾಜ್ಯದಲ್ಲಿ ತಲೆ ಎತ್ತಿತ್ತು. ಬಳಿಕ ಅದು ರಾಜ್ಯಾದ್ಯಂತ ಹರಡಿತ್ತು. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಬಂದರೆ ತಾವು ಕೇಸರಿ ಶಾಲು ಧರಿಸಿ ಬರುವುದಾಗಿ ಹಿಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದರು.

ಈ ಪ್ರಕರಣದ ಹೈಕೋರ್ಟ್‌ ಮೆಟ್ಟಿಲೇರಿದಾಗ ಹೈಕೋರ್ಟ್‌ ಇದು ಆಯಾ ಶಾಲೆ, ಕಾಲೇಜಿನ ಸಮವಸ್ತ್ರ ಸಂಹಿತೆಗೆ ಸಂಬಂಧಿಸಿದ ವಿಷಯ ಎಂದು ತೀರ್ಪು ನೀಡಿತ್ತು. ಸರ್ಕಾರ ಕೂಡಾ ಹಿಜಾಬ್‌ ಧರಿಸಬಾರದು ಎಂಬ ನಿಲುವನ್ನು ಪ್ರಕಟಿಸಿತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದಾಗಲೂ ಹೆಚ್ಚಿನ ವ್ಯತ್ಯಾಸವೇನೂ ಆಗಲಿಲ್ಲ.

ಈ ನಡುವೆ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಹಿಜಾಬ್‌ ನೀತಿಯಲ್ಲಿ ಬದಲಾವಣೆ ಮಾಡಲಿದೆ ಎಂಬ ಸುದ್ದಿ ಹರಡಿತ್ತು. ಆದರೆ, ಸರ್ಕಾರ ಇದುವರೆಗೆ ಅದರ ಗೋಜಿಗೆ ಹೋಗಿಲ್ಲ. ರಾಜ್ಯದಲ್ಲಿ ನಡೆಯುವ ಯಾವುದೇ ಶಾಲೆ, ಕಾಲೇಜುಗಳ ಪರೀಕ್ಷೆಗಳಿಗೆ ಹಿಜಾಬ್‌ ಧರಿಸಿ ಹಾಜರಾಗುವಂತಿಲ್ಲ ಎಂಬ ನಿಯಮ ಈಗ ಜಾರಿಯಲ್ಲಿದೆ. ಆದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪರೀಕ್ಷೆಗೆ ಈ ವಿವಾದ ಬಾಧಿಸಿಲ್ಲ. ಇದು ಯಾವುದೇ ಕಾಲೇಜು ಆಡಳಿತ ಮಂಡಳಿಯ ನಿರ್ಧಾರಕ್ಕೆ ಒಳಪಟ್ಟಿಲ್ಲ ಮತ್ತು ಸಾರ್ವತ್ರಿಕ ಪರೀಕ್ಷೆಯಾಗಿರುವುದರಿಂದ ಹಿಂದಿನ ನೀತಿಯೇ ಜಾರಿಯಲ್ಲಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version