Site icon Vistara News

karnataka Budget | ಗಂಗರ ಇತಿಹಾಸ ಅರಿಯಲು ಸಂಶೋಧನಾ ಪ್ರಾಧಿಕಾರ ರಚನೆ: ಸಿಎಂ ಬಸವರಾಜ ಬೊಮ್ಮಾಯಿ

karnataka budget

ಬೆಂಗಳೂರು : ತಲಕಾಡಿನ ಗಂಗರ ಇತಿಹಾಸವನ್ನು ತಿಳಿಯಲು ಸಂಶೋಧನಾ ಪ್ರಾಧಿಕಾರ ರಚನೆ ಬಗ್ಗೆ ಬರುವ ಬಜೆಟ್‌ನಲ್ಲಿ (karnataka Budget) ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಜಯರಾಮ್ ರಾಯಪುರ ವಿರಚಿತ ಚಾವುಂಡರಾಯ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ “ಶ್ರೇಷ್ಠ ಆಡಳಿತಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು. ಸಾಹಿತ್ಯ ಬೆಳೆಯಲು ವ್ಯಕ್ತಿತ್ವವನ್ನು ಗುರುತಿಸುವ ಕೆಲಸವಾಗಬೇಕು. ಐತಿಹಾಸಿಕ ಸಾಹಿತ್ಯವನ್ನು ವ್ಯಕ್ತಿತ್ವದ ಮೂಲಕ ಪ್ರತಿಬಿಂಬಿಸಿದರೆ ಸತ್ಯಾಂಶ ತಿಳಿಯುತ್ತದೆ. ಐ.ಆರ್.ಎಸ್. ಅಧಿಕಾರಿ ಜಯರಾಮ್‌ ಅವರು ಸಾಕಷ್ಟು ಸಮಾಜಮುಖಿ ಕೃತಿಗಳನ್ನು ಬರೆದಿದ್ದಾರೆ,” ಎಂದರು.

“ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಜಯರಾಮ್ ರಾಯಪುರ ಅವರೊಂದಿಗೆ ನಮ್ಮ ಸ್ನೇಹವಾಗಿದ್ದೇ ಸಾಹಿತ್ಯದಿಂದ. ಬರವಣಿಗೆ ಹಾಗೂ ನಾಟಕ ಅವರ ಹವ್ಯಾಸ. ಸಂಪೂರ್ಣವಾಗಿ ಸಾಹಿತ್ಯ, ಚಿಂತನಾ ಲೋಕಕ್ಕೆ ಬಂದು ಕೃತಿಗೆ ಇಳಿಸಿದ್ದಲ್ಲದೇ ನಾಟಕವನ್ನು ಮಾಡಿಸಿದ್ದಾರೆ. ಅವರು ಕರ್ನಾಟಕದ ಅಧಿಕಾರಿ ಮಾತ್ರವಲ್ಲ, ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಗಳು,” ಎಂದರು.

“ಅವರ ನೇತೃತ್ವದಲ್ಲಿ ಹೊರಬರುತ್ತಿರುವ “ಸಮಾಜಮುಖಿ’ ಮಾಸಪತ್ರಿಕೆ ಅತ್ಯುತ್ತಮವಾಗಿ ಮೂಡಿಬರುತ್ತಿದೆ. ಸಮಾಜದ ಧ್ವನಿಯಾಗಿಯೂ ಹೊರಬರಲಿ,” ಎಂದರು.

ಸಾಧನೆಗಳ ಮೂಲಕ ಅವರ ವ್ಯಕ್ತಿತ್ವ ರಚನೆ

“ಹಲವಾರು ಪ್ರಯೋಗಗಳನ್ನು ಮಾಡಿದ ಅವರೊಬ್ಬ ಪ್ರಯೋಗಶೀಲ ಐಆರ್‌ಎಸ್ ಅಧಿಕಾರಿ. ಅವರ ಪ್ರಯೋಗಶೀಲತೆಯೇ ಚಾವುಂಡರಾಯ ಕೃತಿ. ಇದುವರೆಗೂ ಇತಿಹಾಸದಲ್ಲಿ ಪ್ರಕಟವಾಗದಿರುವ ವ್ಯಕ್ತಿತ್ವವನ್ನು ಜಗತ್ತಿಗೆ ಪರಿಚಯ ಮಾಡಿಸಿದ್ದಾರೆ. ಗಂಗರ ಬಗ್ಗೆ ತಿಳಿದಿರುವ ವಾವು ಚಾವುಂಡರಾಯ ಎಂಬ ದಂಡ ನಾಯಕನ ಬಗ್ಗೆ ಕೇಳಿರುವುದಿಲ್ಲ. ಈ ಮೂಲಕ ಕನ್ನಡದ ಸಾಹಿತ್ಯದಲ್ಲಿ ಹೊಸ ಆಯಾಮ ಬೆಳೆಸಿದ್ದಾರೆ,” ಎಂದರು.

ಅಹಿಂಸೆ ಮತ್ತು ತ್ಯಾಗದ ಪ್ರಬಲ ಪ್ರತಿಪಾದನೆ

ಗಂಗರು ಆಳಿರುವ ಪ್ರದೇಶದ ಬಂಕಾಪುರದಿಂದ ಪ್ರಾರಂಭವಾಗುತ್ತದೆ. ಗಂಗರ ಕಾಲ ಜೈನ ಮತ್ತು ಹಿಂದೂ ಧರ್ಮದ ಸಂಕ್ರಮಣ ಕಾಲವದು. ಜೈನ ಧರ್ಮದಲ್ಲಿ ಬದುಕಿನ ಬಗ್ಗೆ ಮತ್ತು ಸಾವಿನ ಬಗ್ಗೆ ಬಹಳ ಅದ್ಭುತ ಕಲ್ಪನೆ ಇದೆ. ಅಹಿಂಸೆ ಮತ್ತು ತ್ಯಾಗದ ಪ್ರತಿಪಾದನೇ ಬಹಳ ಪ್ರಬಲವಾಗಿದೆ. ರಾಜ ಮಾರಸಿಂಹ ಸಲ್ಲೇಖನ ಪ್ರಯೋಗದ ಸಂದರ್ಭದಲ್ಲಿ ನಡೆದ ಸಂಭಾಷಣೆ ಈ ನಾಟಕದ ಪ್ರಮುಖ ಅಂಶ. ರಾಜನಾದವನು ತನ್ನ ಸ್ಥಾನವನ್ನು ತ್ಯಾಗ ಮಾಡುವುದು ಒಂದು ಭಾಗವಾದರೆ, ತನ್ನನ್ನೇ ತ್ಯಾಗ ಮಾಡಿಕೊಳ್ಳುವುದು ಪರಿಪೂರ್ಣ ತ್ಯಾಗ,” ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.

ಇತಿಹಾಸವನ್ನು ಪ್ರತಿಯೊಬ್ಬ ಕನ್ನಡಿಗನೂ ತಿಳಿಯಬೇಕು

ಗಂಗರು ಮತ್ತು ರಾಷ್ಟಕೂಟರು ಕನ್ನಡ ನಾಡಿನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ರಾಜ ವಂಶಗಳು. ನಾಡಿನ ಭಾಷೆ, ಸಂಸ್ಕೃತಿ, ಕಲೆ ಎಲ್ಲವೂ ಆಳವಾಗಿ ಬೇರೂರಿರುವುದು ಇವರ ಕಾಲದಲ್ಲಿ. ಈ ಇತಿಹಾಸವನ್ನು ಪ್ರತಿಯೊಬ್ಬ ಕನ್ನಡಿಗನೂ ತಿಳಿಯಬೇಕು. ಆಗ ಮಾತ್ರ ಭವಿಷ್ಯದ ಸುಸಂಸ್ಕೃತ ನಾಡು ಕಟ್ಟಲು ಸಾಧ್ಯ ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ, ಸಾಹಿತಿ ಪ್ರೊ. ಎಚ್. ಎಸ್.ಶಿವಪ್ರಕಾಶ್, ಹಿರಿಯ ಸಾಹಿತಿ ಹಂ.ಪಾ. ನಾಗರಾಜಯ್ಯ, ಜಯರಾಮ ರಾಯಪುರ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ | Kannada Sahitya Sammelana | ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆತ್ಮೀಯ ಆಹ್ವಾನ

Exit mobile version