Site icon Vistara News

Vaikunta ekadasi : ಶರವಣ ಚಾರಿಟೇಬಲ್ ಟ್ರಸ್ಟ್​​ನಿಂದ 1 ಲಕ್ಷ ಲಡ್ಡು ವಿತರಣೆ

TA Saravana

ಬೆಂಗಳೂರು: ವೈಕುಂಠ ಏಕಾದಶಿ (Vaikunta ekadasi ) ಪ್ರಯುಕ್ತ ಬೆಂಗಳೂರು ನಗರದಲ್ಲಿರುವ ಎಲ್ಲ ವಿಷ್ಣು ದೇಗುಲಗಳಲ್ಲಿ ಭಕ್ತರಿಗೆ ಶರವಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ 1 ಲಕ್ಷ ಲಡ್ಡು ವಿತರಣೆಯಾಗಲಿದೆ. ಬಸವನಗುಡಿಯಲ್ಲಿರುವ ಶ್ರೀ ಸಾಯಿ ಪಾರ್ಟಿ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಡ್ಡು ವಿತರಣಾ ಕಾರ್ಯಕ್ರಮಕ್ಕೆ ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ ಅವರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿಡ ಟಿ .ಎ.ಶರವಣ, ವೈಕುಂಠ ಏಕಾದಶಿ ದಿನದಂದು ಮಹಾವಿಷ್ಣುವಿನ ವೈಕುಂಠ ಮಹಾದ್ವಾರ ತೆರೆಯಲಾಗುತ್ತದೆ ಎಂದು ನಂಬಿಕೆ ಹಿಂದೂ ಧರ್ಮದಲ್ಲಿ ಇದೆ. ವೈಕುಂಠ ಏಕಾದಶಿಯಂದು ಶ್ರೀ ವೆಂಕಟೇಶ್ವರ ದರ್ಶನ ಪಡೆಯಬೇಕು. ತಿರುಮಲ ತಿರುಪತಿಗೆ ಹೋಗಬೇಕು. ಲಡ್ಡು ಪ್ರಸಾದ ಸ್ವೀಕರಿಸಬೇಕು ಎಂಬ ಬಯಕೆ ಎಲ್ಲರಿಗೂ ಇರುತ್ತದೆ. ಆದರೆ, ಎಲ್ಲರಿಗೂ ತಿರುಪತಿಗೆ ಹೋಗಲು ಸಾಧ್ಯವಿಲ್ಲ. ಅದಕ್ಕಾಗಿ ಬೆಂಗಳೂರಿನಲ್ಲಿಯೇ ಲಡ್ಡು ವಿತರಣೆ ಮಾಡಲಾಗುತ್ತದೆ. 100 ಬಾಣಸಿಗರು ತಿರುಪತಿ ಲಡ್ಡು ಮಾದರಿಯಲ್ಲೇ 1 ಲಕ್ಷ ಲಡ್ಡು ತಯಾರಿಕೆ ಮಾಡುತ್ತಾರೆ ಎಂದು ಹೇಳಿದರು.

ಶುದ್ಧ ತುಪ್ಪ, ಗೋಡಂಬಿ, ದಾಕ್ಷಿ, ಕಡಲೆ ಬೇಳೆ ಬಳಸಿ ತಿರುಪತಿಯ ಲಡ್ಡು ಮಾದರಿಯಲ್ಲಿ ತಯಾರಿಸಲಾಗಿದೆ. ವೆಂಕಟೇಶ್ವರ ದೇಗುಲಗಳಲ್ಲಿ ಭಕ್ತರಿಗೆ ಲಡ್ಡು ಪ್ರಸಾದ ವಿತರಿಸಲಾಗುವುದು ಎಂದು ಹೇಳಿದರು.

ಜನರು ಸಾಕಷ್ಟು ಅತಂಕದಲ್ಲಿ ಇದ್ದಾರೆ. ಕೊರೊನಾ ಮಹಾಮಾರಿ ಮತ್ತೇ ಕಾಣಿಸಿಕೊಂಡಿದೆ. ಹೀಗಾಗಿ ಸಕಲ ಸಂಕಷ್ಟಗಳು ದೂರವಾಗಲಿ ಜನರಿಗೆ ಸುಖ, ಶಾಂತಿ ನೆಮ್ಮದ್ದಿ ಲಭಿಸಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ಅವರು ಹೇಳಿದ್ದಾರೆ.

ಮನಸ್ಸಿಗೆ ವಿಕುಂಠಿತವಾದ ಗತಿಯನ್ನುಂಟು ಮಾಡುವುದೇ ವೈಕುಂಠ ಏಕಾದಶಿ

ಹೆಸರಿನಲ್ಲೇ ಸೂಚಿತವಾಗಿರುವಂತೆ, ಮನಸ್ಸಿಗೆ ವಿಕುಂಠಿತವಾದ ಗತಿಯನ್ನುಂಟು ಮಾಡುವುದೇ ವೈಕುಂಠ ಏಕಾದಶಿಯ ವಿಶೇಷತೆ. ವೈಕುಂಠ ಎನ್ನುವ ಪದವು ‘ಕುಠ್’ ಎನ್ನುವ ಧಾತುವಿನಿಂದ ವ್ಯುತ್ಪತ್ತಿಯನ್ನು ಹೊಂದಿದೆ. ಕುಠ್ ಎಂದರೆ ತಡೆ ಅಥವಾ ನಿಲ್ಲಿಸು ಎಂದು ಅರ್ಥ. ತಡೆದು ತಡೆದು ಮುಂದೆ ಹೋಗುವ ಗತಿಯನ್ನು ಕುಂಠಿತವಾದ ಗತಿ ಎನ್ನುತ್ತಾರೆ ಮತ್ತು ಇದಕ್ಕೆ ವಿರುದ್ಧವಾದುದು ವಿಕುಂಠಿತವಾದ ಗತಿ. ನಮ್ಮ ಪ್ರಾಪಂಚಿಕ ಜೀವನವು ಯಾವಾಗಲೂ ಸುಖ ದುಃಖಗಳಿಂದ ಅಥವಾ ಏರುಪೇರುಗಳಿಂದ ಕೂಡಿರುವುದರಿಂದ ನಮ್ಮ ಮನಸ್ಸು ತಳಮಳವನ್ನು ಹೊಂದಿದ್ದು ಏರಿಳಿತಗಳಿಂದ ಕೂಡಿರುತ್ತದೆ.

ಅಂದರೆ, ಸಾಮಾನ್ಯವಾಗಿ ಮನಸ್ಸಿಗೆ ಕುಂಠಿತವಾದ ಸ್ಥಿತಿ ಗತಿಗಳು ಇರುತ್ತದೆ. ಆದರೆ, ಮನಸ್ಸನ್ನು ಅಂತ ರ್ಮುಖವಾಗಿಸಿ ಅಧ್ಯಾತ್ಮ ಸಾಧನೆಯನ್ನು ಮಾಡಿ ಭಗವತ್ಸಾಕ್ಷಾತ್ಕಾರ ಹೊಂದಿದರೆ ಆಗ ಮನಸ್ಸು ದೃಢವಾಗಿ, ಬಲಿಷ್ಠವಾಗಿ ಹೊರ ಜೀವನದ ಪ್ರಭಾವದಿಂದ ಏರಿಳಿತಕ್ಕೊಳಗಾಗದೇ ಶಾಂತವಾಗಿರುತ್ತದೆ. ಹೀಗಿದ್ದಾಗ, ಮನಸ್ಸು ಪ್ರಾಪಂಚಿಕ ವಿಷಯಗಳಿಂದ ಹಿಡಿದು ಅಧ್ಯಾತ್ಮ ಕ್ಷೇತ್ರದವರೆವಿಗೂ ತಡೆಯಿಲ್ಲದೇ ಸುಲಭವಾಗಿ ಹರಿಯಬಲ್ಲದ್ದಾಗಿದ್ದು ವಿಕುಂಠಿತವಾದ ಗತಿಯನ್ನು ಹೊಂದಿದೆ ಎಂದು ಹೇಳಬಹುದು. ಯಾವ ನೆಲೆಯಲ್ಲಿ ವಿಕುಂಠಿತವಾದ ಸ್ಥಿತಿಯಿರುತ್ತದೆಯೋ ಆ ನೆಲೆಯನ್ನು ವೈಕುಂಠ ಎಂದು ಕರೆಯುತ್ತಾರೆ. ಇಂತಹಾ ನೆಲೆ ಎಲ್ಲಿರುತ್ತದೆ? ಆ ನೆಲೆಗೂ ವೈಕುಂಠ ಏಕಾದಶಿಗೂ ಏನು ಸಂಬಂಧ ಎನ್ನುವುದು ಮುಂದೆ ತಿಳಿಯಬೇಕಾದ ವಿಷಯ.

ಯಾರ ಸಂಪರ್ಕ ಅಥವಾ ಯೋಗದಿಂದ ಮನಸ್ಸಿಗೆ ವಿಕುಂಠಿತವಾದ ಸ್ಥಿತಿ ಉಂಟಾಗುತ್ತದೆಯೋ ಆ ಭಗವಂತನಿರುವ ಲೋಕವನ್ನೇ ಮುಖ್ಯವಾಗಿ ವೈಕುಂಠ ಎಂದು ಕರೆಯುವುದು. ಯಾರು ಆ ವೈಕುಂಠಪತಿಯಾದ ವಿಷ್ಣುವನ್ನು ಇಲ್ಲಿರುವಾಗಲೇ ಸಾಕ್ಷಾತ್ಕರಿಸಿಕೊಂಡಿರುತ್ತಾರೆಯೋ ಅಂತಹವರು ದೇಹಾವಸಾನದ ನಂತರ ಈ ವೈಕುಂಠ ಲೋಕದಲ್ಲಿ ಶಾಶ್ವತವಾಗಿ ನೆಲೆಸುತ್ತಾರೆ. ಎರಡನೆಯದಾಗಿ ಹಾಗೆ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡ ಜ್ಞಾನಿಗಳು ಭೂಮಿಯ ಮೇಲೆ ಇರುವಾಗ ಅವರು ತಮ್ಮ ಮನಸ್ಸಿನ ಗತಿಯನ್ನು ವಿಕುಂಠಿತವಾಗಿಟ್ಟುಕೊಂಡು ಸುತ್ತಮುತ್ತಲಿನವರಿಗೂ ಅಂತಹಾ ಗತಿಯನ್ನು ದಯಪಾಲಿಸುತ್ತಿರುವಾಗ ಆ ಜ್ಣಾನಿಗಳ ಸನ್ನಿಧಿಯನ್ನೂ ಸಹಾ ಭೂವೈಕುಂಠ ಎಂದು ಕರೆಯಬಹುದು. ಆ ಜ್ಞಾನಿಗಳ ಸನ್ನಿಧಿ ಬೇರೆಯಲ್ಲಾ, ಭಗವಂತನ ಸನ್ನಿಧಿ ಬೇರೆಯಲ್ಲಾ!

ಇನ್ನೂ ಮುಂದುವರಿದು ಹೇಳುವುದಾದರೆ, ಅಂತಹಾ ಜ್ಞಾನಿಗಳು ಪ್ರತಿಷ್ಠಾಪಿಸಿ ಭಗವಂತನ ಸಾನ್ನಿಧ್ಯವನ್ನುಂಟು ಮಾಡಿರುವ ದೇವಾಲಯಗಳನ್ನೂ ಸಹಾ ಭೂವೈಕುಂಠವೆಂದು ಕರೆಯಬಹುದು ಏಕೆಂದರೆ ಈ ದೇವಾಲಯವಕ್ಕೆ ಹೋಗುವವರಿಗೂ ಸಹಾ ಅವರವರ ಪರಿಸ್ಥಿತಿ-ಸಂಸ್ಕಾರಗಳಿಗನುಗುಣವಾಗಿ ಕೊಂಚ ಮಟ್ಟಿಗಾದರೂ ಆ ವಿಕುಂಠಿತವಾದ ಸ್ಥಿತಿ ಉಂಟಾಗುತ್ತದೆ. ಅಂತಹಾ ದೇವಾಲಯಗಳಲ್ಲಿಯೂ ಸಹಾ ವೆಂಕಟರಮಣ ಸ್ವಾಮಿಯ ದೇವಾಲಯವು ವಿಶೇಷ. ಏಕೆಂದರೆ, ಕಲೌ ವೇಂಕಟನಾಥಃ ಎಂದು ಹೇಳುವಂತೆ, ವೈಕುಂಠಪತಿಯಾದ ವಿಷ್ಣುವಿನ ರೂಪಗಳಲ್ಲಿ, ಕಲಿಯುಗದಲ್ಲಿ ಬೇಗ ಒಲಿಯುವುದು ವೆಂಕಟರಮಣನ ರೂಪವೇ.

ಇದನ್ನೂ ಓದಿ : Vaikuntha Ekadashi 2023 | ಇಸ್ಕಾನ್‌ನಲ್ಲಿ ಸಂಭ್ರಮದಿಂದ ವೈಕುಂಠ ಏಕಾದಶಿ ಆಚರಣೆ

ಹೀಗಾಗಿ, ದಿನದ ಪ್ರಭಾವದ ದೃಷ್ಟಿಯಿಂದ ಗಮನಿಸಿದರೆ ಆ ದಿನಕ್ಕೆ, ವ್ಯಕ್ತಿಯ ಪಾತ್ರತೆಗನುಗುಣವಾಗಿ ಮನಸ್ಸಿಗೆ ವಿಕುಂಠಿತವಾದ ಸ್ಥಿತಿಯನ್ನುಂಟು ಮಾಡುವ ಯೋಗ್ಯತೆ ಇರುತ್ತದೆ. ಇಂತಹಾ ದಿನದಲ್ಲಿ ಆ ವೈಕುಂಠಪತಿಯ, ಅದರಲ್ಲೂ ಕಲಿಯುಗದಲ್ಲಿ ವಿಶೇಷವಾಗಿ ಅನುಗ್ರಹ ಹರಿಸುವ ವೆಂಕಟರಮಣ ಸ್ವಾಮಿಯ ದರ್ಶನ ಸೇವೆಗಳು ಇನ್ನಷ್ಟು ಹೆಚ್ಚು ಪರಿಣಾಮ ಬೀರುತ್ತದೆ. ಹೀಗಾಗಿ ವೈಕುಂಠ ಏಕಾದಶಿಯಂದು ವೆಂಕಟರಮಣಸ್ವಾಮಿಯ ದೇವಾಲಯ ಸಂದರ್ಶನ, ಸೇವೆ ಎನ್ನುವ ರೂಢಿಯು ಬೆಳೆದು ಬಂದಿದೆ.

ಆ ದಿನದಂದು ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ವೈಕುಂಠದ್ವಾರ ಎನ್ನುವ ವಿಶೇಷ ವ್ಯವಸ್ಥೆಯನ್ನು ಮಾಡಿರುತ್ತಾರೆ. ಭಕ್ತರು ಭಗವಂತನ ದರ್ಶನ ಮಾಡಿ, ಪ್ರದಕ್ಷಿಣೆ ಮಾಡಿಕೊಂಡು ಈ ವೈಕುಂಠ ದ್ವಾರದಿಂದ ಹೊರಹೋಗುವುದು ರೂಢಿ. ಈ ಪದ್ಧತಿಯನ್ನು ಯೋಗಶಾಸ್ತ್ರ ಹಾಗೂ ತಂತ್ರಶಾಸ್ತ್ರದ ಹಿನ್ನೆಲೆಯಲ್ಲಿಯೂ ಗಮನಿಸಬಹುದು. ಈ ಶಾಸ್ಥ್ರಗಳ ಪ್ರಕಾರ, ಪ್ರತಿಯೊಬ್ಬ ಮಾನವನ ದೇಹದಲ್ಲಿಯೂ ಇಡಾ, ಪಿಂಗಳಾ ಮತ್ತು ಸುಷುಮ್ನಾ ಎಂಬ ಮೂರು ನಾಡಿಗಳು ಬೆನ್ನು ಮೂಳೆ ಹಾಗೂ ಅದರ ಸುತ್ತ ಇರುತ್ತದೆ. ಈ ಮೂರರಲ್ಲಿ ಮನಸ್ಸು ಇಡಾ, ಪಿಂಗಳಗಳಲ್ಲಿ ಸಂಚರಿಸುತ್ತಿರುವಾಗ ಅದಕ್ಕೆ ವೃದ್ಧಿ, ಕ್ಷಯಗಳಿದ್ದು, ಯೋಗ ಸಾಧನೆಯಿಂದ ಸುಷುಮ್ನಾ ನಾಡಿಯನ್ನು ಪ್ರವೇಶಿಸುತ್ತದೆ.

ಮನಸ್ಸು ಸುಷುಮ್ನಾ ನಾಡಿಯನ್ನು ಪ್ರವೇಶಿಸಿ ಮುಂದುವರೆದರೇನೇ ಕೊನೆಯಲ್ಲಿ ಭಗವತ್ಸಾಕ್ಷಾತ್ಕಾರವಾಗುವುದು. ಆದುದರಿಂದ ಮಾನವ ದೇಹದಲ್ಲಿ ಈ ಸುಷುಮ್ನಾ ನಾಡಿಯೇ ವೈಕುಂಠ ದ್ವಾರವಾಗಿದೆ. ಹೀಗೆ ಸಾಧಕನ ದೇಹದಲ್ಲಿ ಒಳಗೆ ನಡೆಯುವ ಕ್ರಿಯೆಯನ್ನು ಹೊರಗಡೆಯಲ್ಲಿಯೂ ಅನುಕರಣೆ ರೂಪದಲ್ಲಿ ತಂದಿದ್ದಾರೆ. ಈ ಹೊರ ಅನುಕರಣಾ ರೂಪವಾದ ಆಚರಣೆಯೂ ಸಹಾ ಒಂದು ಸಾಧನೆಯೇ ಆಗಿದ್ದು ಸೂಕ್ತ ಸಂಸ್ಕಾರಗಳ ಸಿದ್ಧತೆಯನ್ನು ಹೊಂದಿರುವ ವ್ಯಕ್ತಿಯ ಮನಸ್ಸು ಈ ಆಚರಣೆಯಿಂದಾಗಿಯೇ ಸುಷುಮ್ನಾ ನಾಡಿಯ ಪ್ರವೇಶ ಮಾಡುವ ಸಾಧ್ಯತೆಯೂ ಸಹಾ ಇರುತ್ತದೆ.

ಹೀಗೆ, ಆ ದಿನದ ಪ್ರಭಾವ, ಆ ದಿನದ ವಿಶೇಷ ಆರಾಧ್ಯ ದೈವ ಹಾಗೂ ಅಂದಿನ ಆಚರಣೆ, ಈ ಮೂರೂ ಅಂಶಗಳಲ್ಲಿ ಒಂದೊಂದೂ ಸಹಾ ಮನಸ್ಸಿಗೆ ವಿಕುಂಠಿತ ಸ್ಥಿತಿಯನ್ನುಂಟು ಮಾಡುವಂತಹದ್ದಾಗಿದ್ದು ವೈಕುಂಠ ಏಕಾದಶಿಯಂದು ಈ ಮೂರೂ ಅಂಶಗಳು ಒಟ್ಟಿಗೆ ಸೇರಿರುವುದು ಬಹಳ ವಿಶೇಷ ಯೋಗ. ಮನಸ್ಸಿಗೆ ವಿಕುಂಠಿತವಾದ ನಡೆಯನ್ನುಂಟು ಮಾಡಿಕೊಂಡು ತನ್ಮೂಲಕ ಪಾಪಗಳನ್ನು ಶಮನ ಮಾಡಿಕೊಂಡು ನಮ್ಮನ್ನು ಪಾವನರಾಗಿಸಿಕೊಳ್ಳಲು ವೈಕುಂಠ ಏಕಾದಶಿ ಆಚರಣೆಯು ಮಹರ್ಷಿಗಳು ಕೊಟ್ಟಿರುವ ಅಪೂರ್ವ ಕೊಡುಗೆಯಾಗಿದೆ.

Exit mobile version