Site icon Vistara News

Shivamogga News: ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯ್ಯಲ್ಲಿ ಕಿತ್ತುಕೊಳ್ಳುತ್ತಿದೆ ಕಾಂಗ್ರೆಸ್‌ ಸರ್ಕಾರ: ರಾಘವೇಂದ್ರ ಆರೋಪ

Shivamogga MP B Y Raghavendra latest pressmeet

ಭದ್ರಾವತಿ: ಕಾಂಗ್ರೆಸ್‌ ಸರ್ಕಾರ (Congress government) ಗ್ಯಾರಂಟಿ ನೆಪದಲ್ಲಿ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯ್ಯಲ್ಲಿ ಕಿತ್ತುಕೊಳ್ಳುವ ಕಾರ್ಯವನ್ನು ಮಾಡುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ 9 ವರ್ಷ ತುಂಬಿದ ಸಂದರ್ಭದಲ್ಲಿ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಾಂಗ್ರೆಸ್‌ನ ಯಾವುದೇ ಭಾಗ್ಯದ ಬಗ್ಗೆ ಬೇಸರವಿಲ್ಲ, ಜನರಿಗೆ ಅವೆಲ್ಲವೂ ತಲುಪಬೇಕು. ಆದರೆ, ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವುದು ಸರಿ ಅಲ್ಲ. ವಿದ್ಯುತ್‌ ಯುನಿಟ್‌ ದರವನ್ನು ಹೆಚ್ಚಳ ಮಾಡಿರುವುದಲ್ಲದೇ, 200 ರ ಬದಲು 201 ಯುನಿಟ್‌ ಬಳಕೆ ಮಾಡಿದರೂ ಪೂರ್ಣ ದರವನ್ನು ಕಟ್ಟಿಸಿಕೊಂಡು ಸಬ್ಸಿಡಿಯನ್ನು ಕಿತ್ತುಕೊಳ್ಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ, ಈ ಹಿನ್ನಲೆಯಲ್ಲಿ ಕೆಇಬಿ ಕಚೇರಿಗಳಿಗೆ ಮುತ್ತಿಗೆ ಹಾಕುವ ಕೆಲಸವನ್ನು ಬಿಜೆಪಿ ಆರಂಭ ಮಾಡಿದೆ ಎಂದರು.

ಇದನ್ನೂ ಓದಿ: Viral News: ರಾಜಿ ಮೂಲಕ 138 ದಂಪತಿಗಳ ವಿಚ್ಛೇದನ ತಡೆದಿದ್ದ ವಕೀಲನಿಗೆ‌ ಡಿವೋರ್ಸ್‌ ನೀಡಿದ ಪತ್ನಿ

ಪಕ್ಷದ ಕಾರ್ಯಕರ್ತರ ನೇತೃತ್ವದಲ್ಲಿ ಸಂಪರ್ಕ್‌ ಸೆ ಸಮರ್ಥನ್‌ ಕಾರ್ಯಕ್ರಮದಡಿ ಕಾರ್ಯಕರ್ತರು, ಸಂಘಟನೆಯ ಹಿತೈಷಿಗಳನ್ನು, ಪ್ರಭಾವಿ ವ್ಯಕ್ತಿಗಳನ್ನು ಭೇಟಿ ಮಾಡುವಂತಹ ವಿಶೇಷ ಕಾರ್ಯಕ್ರಮ ಇಡೀ ದೇಶಾದ್ಯಂತ ಈಗಾಗಲೇ ಹಮ್ಮಿಕೊಳ್ಳಲಾಗಿದೆ. ಈ ಮುಖಾಂತರ ಕೇಂದ್ರ ಸರ್ಕಾರದ ಸಾಧನೆಗಳನ್ನು ಚರ್ಚೆ ಮಾಡಿ ಜನಸಾಮಾನ್ಯರಿಗೆ ಮುಟ್ಟಿಸುವಂತಹ ಕಾರ್ಯವನ್ನು ಮಾಡಲಾಗುತ್ತಿದೆ. ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ಪ್ರದೇಶಗಳಲ್ಲಿ ಭೇಟಿ ನೀಡಿ, ಅಪೂರ್ಣಗೊಂಡ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರೈಸುವ ನಿಟ್ಟಿನಲ್ಲಿ ಹಾಗೂ ಚುನಾಯಿತ ಪ್ರತಿನಿಧಿಗಳ ನೇತೃತ್ವದಲ್ಲಿ ವಿಕಾಸ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಭದ್ರಾವತಿಯ ಬುಳ್ಳಾಪುರ ಗ್ರಾಮದಲ್ಲಿ 50.29 ಎಕರೆ ಪ್ರದೇಶದಲ್ಲಿ ರಾಪಿಡ್‌ ಆಕ್ಷನ್‌ ಫೋರ್ಸ್‌ ಸ್ಥಾಪನೆಗೆ ಕೇಂದ್ರ ಗೃಹ ಮಂತ್ರಿ ಅಮಿತ್‌ ಷಾ ಅವರು ಈಗಾಗಲೇ ಭೂಮಿ ಪೂಜೆ ನೆರವೇರಿಸಿದ್ದಾರೆ. ಈ ರಾಪಿಡ್‌ ಅಕ್ಷನ್‌ ಫೋರ್ಸ್‌ ಕರ್ನಾಟಕದ 31 ಜಿಲ್ಲೆಗಳನ್ನೊಳಗೊಂಡಿದ್ದಷ್ಟೇ ಅಲ್ಲದೇ, ಕೇರಳದ 4 ಜಿಲ್ಲೆಗಳು, ಗೋವಾದ 2 ಜಿಲ್ಲೆಗಳು, ಲಕ್ಷದ್ವೀಪದ 1 ಜಿಲ್ಲೆ ಹಾಗೂ ಪುದುಚೆರಿಯ 1 ಜಿಲ್ಲೆಗಳ ವ್ಯಾಪ್ತಿಯನ್ನು ಸಹ ಒಳಗೊಂಡಿರುತ್ತದೆ. ಕಮಾಂಡೆಂಟ್‌, ಡೆಪ್ಯುಟಿ ಕಮಾಂಡೆಂಟ್‌ ಸೇರಿದಂತೆ ಒಟ್ಟು 445 ಜನ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ.

ಇದನ್ನೂ ಓದಿ: Lionel Messi: ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿ ನೀಡಿದ ಲಿಯೋನೆಲ್​ ಮೆಸ್ಸಿ!

ಸಂಸತ್‌ ಸದಸ್ಯರ ಪ್ರದೇಶಾಭಿವೃದ್ಧಿ ಯೋಜನೆಯಡಿ ಒಟ್ಟಾರೆ 37 ಕೋಟಿ ವೆಚ್ಚದಲ್ಲಿ ಅಂದಾಜು 1000 ಕಾಮಗಾರಿಗಳ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗಿದ್ದು, ( ಪ್ರಯಾಣಿಕರ ತಂಗುದಾಣ, ಹೈಮಾಸ್ಟ್ ಲೈಟ್ಸ್ ಸಮುದಾಯಭವನಗಳು, ರಸ್ತೆ, ಶಾಲೆಗಳಲ್ಲಿ ಕುಡಿಯುವ ನೀರಿನ ಘಟಕಗಳು, ಸ್ಮಶಾನ ಅಭಿವೃದ್ಧಿ, ಪಾರ್ಕ್‌ ಅಭಿವೃದ್ಧಿ, ರೈತ ಸಹಕಾರಿ ಸಂಘಗಳ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳು, ಭದ್ರಾವತಿಯಲ್ಲಿ 2 ಡಿಸ್ಪೆನ್ಸರಿಗಳನ್ನು ಪ್ರಾರಂಭಿಸಲಾಗಿದೆ, ಜತೆಗೆ ಮತ್ತಿತರೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದರು.

ಈಗ ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆ ಆಗಿರುವುದು ತಾತ್ಕಾಲಿಕ ಮಾತ್ರ. ಈ ಸಂದರ್ಭ ಕಾಂಗ್ರೆಸ್‌ ಸರ್ಕಾರ ಮಾಡುತ್ತಿರುವ ಘೋಷಣೆಗಳು ಹಾಗೂ ತೆಗೆದುಕೊಳ್ಳುವಂತಹ ನಿಲುವುಗಳು ಎಲ್ಲವೂ ಅಚ್ಚರಿಯಾಗಿದೆ. ದೇಶದ ಹಿತ ದೃಷ್ಟಿಯಿಂದ ಮಹಾನ್‌ ನಾಯಕ ಸಾವರ್ಕರ್‌ ಅವರ ಇತಿಹಾಸ ಪುಟದಿಂದ ಮುಚ್ಚಿಡುವಂತಹ ಕೆಲಸವನ್ನು ಕಾಂಗ್ರೆಸ್‌ ಮಾಡಿತ್ತು. ಅದನ್ನು ಸೇರಿಸುವಂತಹ ಕೆಲಸವನ್ನು ಬಿಜೆಪಿ ಸರಕಾರ ಮಾಡಿದಾಗ , ಈಗ ಕಾಂಗ್ರೆಸ್‌ ಸರಕಾರ ತೆಗೆಯುವ ಕೆಲಸವನ್ನು ಮಾಡುತ್ತಿದೆ. ಇದರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಥವಾ ಬಿಜೆಪಿಯ ಸಿದ್ಧಾಂತಗಳಿಲ್ಲ, ಇವರು ಬ್ರಿಟೀಷರ ವಿರುದ್ಧ ಗುಂಡಿಗೆ ಎದೆಗೊಟ್ಟು ದೇಶದ ರಕ್ಷಣೆಗೋಷ್ಕರ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಮಹಾನ್‌ ನಾಯಕರ ಪಾಠವನ್ನು ತೆಗೆದು ಹಾಕುವ ಕೆಲಸ ನಿಜಕ್ಕೂ ಖಂಡನೀಯ,

ಅಲ್ಲದೇ ಗೋ ಹತ್ಯೆಯನ್ನು ನಿಷೇಧ ಕಾಯಿದೆ ರದ್ದುಗೊಳಿಸುವ ಕುರಿತು ಪಶು ಸಂಗೋಪನಾ ಸಚಿವರು ಹೇಳಿರುವುದು ದೌರ್ಭಾಗ್ಯ. ಕಾಂಗ್ರೆಸ್‌ ಹೀಗೆ ದ್ವೇಷದ ಕಾರಣವನ್ನು ಮಾಡಿದರೆ ಮತ್ತೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂತರೆ ಅನುಮಾನ ಇಲ್ಲ ಎಂದರು.

ಇದನ್ನೂ ಓದಿ: Power Cut : ಬೆಂಗಳೂರಿಗರೇ ನಾಳೆ ಈ ಟೈಂನಲ್ಲಿ ಈ ಏರಿಯಾದಲ್ಲಿ ಪವರ್‌ ಕಟ್‌

ಈ ವೇಳೆ ಭದ್ರಾವತಿ ಕ್ಷೇತ್ರ ಬಿಜೆಪಿ ಉಸ್ತುವಾರಿ ಅಶೋಕ್‌ ಮೂರ್ತಿ, ಜಿಲ್ಲಾ ಬಿಜೆಪಿ ಮುಖಂಡರಾದ ಡಾ.ಧನಂಜಯ ಸರ್ಜಿ, ಮಂಗೋಟೆ ರುದ್ರೇಶ್‌, ಧರ್ಮಪ್ರಸಾದ್‌, ಪ್ರಧಾನ ಕಾರ್ಯದರ್ಶೀ ಶ್ರೀನಾಥ್‌, ಕೂಡ್ಲಿಗೆರೆ ಹಾಲೇಶ್‌ ಮತ್ತಿತರರು ಹಾಜರಿದ್ದರು.

Exit mobile version