Site icon Vistara News

Shivamogga News: ನ್ಯಾಯಯುತ ಹಕ್ಕುಗಳನ್ನು ಪಡೆಯಲು ಈಡಿಗ ಸಮುದಾಯ ಸಂಘಟಿತವಾಗಬೇಕು: ಯೋಗೇಂದ್ರ ಗುರೂಜಿ

ediga Community program inauguarated by swamijis at Shivamogga

ಶಿವಮೊಗ್ಗ: ಈಡಿಗ ಸಮುದಾಯ (Ediga Community), ನ್ಯಾಯಯುತ ಹಕ್ಕುಗಳನ್ನು (Rights) ಪಡೆಯಲು ಸಂಘಟಿತವಾಗಬೇಕು ಎಂದು ಸಾರಗನಜಡ್ಡು ಕಾರ್ತಿಕೇಯ ಕ್ಷೇತ್ರದ ಅವಧೂತರಾದ ಯೋಗೇಂದ್ರ ಗುರೂಜಿ ಹೇಳಿದರು.

ಶ್ರೀ ನಾರಾಯಣಗುರು ವಿಚಾರ ವೇದಿಕೆಯು ನಗರದ ಈಡಿಗ ಭವನದಲ್ಲಿ ಆಯೋಜಿಸಿದ್ದ ಚಿಂತನಮಂಥನ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಈಡಿಗ ಸಮುದಾಯ, ಸಾಕಷ್ಟು ಕಷ್ಟ ನೋಡಿದೆ. ನೊಂದು ಬೆಂದಿರುವ ಈ ಸಮುದಾಯಕ್ಕೆ ಇಂದು ದಾರಿದ್ರ್ಯ ಬಂದಿಲ್ಲ. ಸಂಘಟನಾತ್ಮಕವಾಗಿ ನ್ಯಾಯವಾಗಿ ಧಕ್ಕಬೇಕಿರುವುದನ್ನು ಪಡೆಯಬೇಕಿದೆ. ಈ ನೆಲೆಯಲ್ಲಿ ಸಮಾಜ ಸಂಘಟನೆಯಾಗಬೇಕು ಎಂದು ತಿಳಿಸಿದರು.

ಇದನ್ನೂ ಓದಿ: ICC World Cup: ಏಕದಿನ ವಿಶ್ವಕಪ್​ಗೆ ಬಲಿಷ್ಠ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ

ಎಲ್ಲವನ್ನೂ ಅರಗಿಸಿಕೊಳ್ಳುವ ಶಕ್ತಿ ಇಂದು ಈಡಿಗ ಸಮಾಜಕ್ಕೆ ಬಂದಿದೆ. ನಮ್ಮ ಜನಸಂಖ್ಯೆಗನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಸಮಾಜದ ಹಲವು ಸಂಘಟನೆಗಳಿದ್ದು, ಎಲ್ಲವೂ ಅವರವರ ನೆಲೆಯಲ್ಲಿ ಸಮಾಜದ ಕೆಲಸ ಮಾಡುತ್ತಿದೆ. ಈಗ ಎಲ್ಲರನ್ನೂ ಒಗ್ಗೂಡಿಸಿ ಸರ್ಕಾರಕ್ಕೆ ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸಿ ನ್ಯಾಯ ಪಡೆಯಬೇಕಿದೆ. ಚಿಂತನ ಮಂಥನವೊದು ಪ್ರತಿ ಜಿಲ್ಲೆಯಲ್ಲಿ ನಡೆದು ಮುಂದೆ ಒಂದು ಹೋರಾಟವಾಗಲಿದೆ ಎಂದು ಹೇಳಿದರು.

ಸೋಲೂರು ರೇಣುಕಾ ಪೀಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿ, ಈಡಿಗ ಸಮುದಾಯದ ಎಲ್ಲಾ ಸ್ವಾಮೀಜಿಗಳ ನಡುವೆ ಒಂದು ಒಗ್ಗಟ್ಟು ಮೂಡಿದೆ. ಹಿಂದಿನ ಸರ್ಕಾರದ ಅವಧಿಯಿಂದಲೂ ನಮ್ಮ ಬೇಡಿಕೆ ಮಂಡಿಸಿದ್ದೇವೆ. ಅವುಗಳ ಅನುಷ್ಠಾನಕ್ಕೆ ಹೋರಾಟ ಮುಂದುವರಿಯಲಿದೆ. ಸಮಾಜದ ಜನರು ಹೆಚ್ಚು ವಿದ್ಯಾವಂತರಾಗಬೇಕು ಎಂದು ತಿಳಿಸಿದರು.

ನಿಪ್ಪಾಣಿಯ ಮಹಾಕಾಳಿ ಪೀಠದ ಅರುಣಾನಂದ ತೀರ್ಥ ಸ್ವಾಮೀಜಿ ಮಾತನಾಡಿ, ನಾರಾಯಣ ಗುರು ವಿಚಾರ ವೇದಿಕೆಯ ಸಾರಥ್ಯದಲ್ಲಿ ಐಕ್ಯತೆಯ ಹೋರಾಟ ನಡೆಬೇಕಿದೆ. ಸಮಾಜದ ದುರ್ಬಲರನ್ನು ಮುಖ್ಯವಾಹಿನಿಗೆ ತರುವಲ್ಲಿ ಸರ್ವ ಸಂಘಟನೆಗಳು ಶ್ರಮಿಸಬೇಕು. ಈಡಿಗ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಮಠಾಧೀಶರ ನಡುವೆ ಸಮನ್ವಯತೆ ಮೂಡಿದೆ ಎಂದು ಹೇಳಿದರು.

ಬೆಂಗಳೂರಿನ ಶಿ.ಗ ಫೌಂಡೇಷನ್ ಗುರುಮೂರ್ತಿ ಗುರೂಜಿ ಮಾತನಾಡಿ, ಸಮಾಜದ ಭಾವನೆಗಳು ಮತ್ತು ಚಿಂತನೆಗಳು ಬದಲಾಗಬೇಕು. ಎಲ್ಲರನ್ನೂ ಒಗ್ಗೂಡಿಸಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ನೆಲೆಯಲ್ಲಿ ಸಮಾಜ ಬಲಗೊಳ್ಳಬೇಕು. ಈಡಿಗ ಸಮಾಜದ ಯುವಕರು ಸಂಸ್ಕಾರಯುತವಾದ ಜೀವನ ಮೌಲ್ಯ ಅಳವಡಿಸಿಕೊಳ್ಳಬೇಕು. ಈ ಸಮಾಜದಲ್ಲಿ ಹುಟ್ಟಿದ ಮೇಲೆ ಈ ಜನರ ಸೇವೆಗೆ ಕಂಕಣಬದ್ಧರಾಗಬೇಕು ಎಂದು ಹೇಳಿದರು.

ಇದನ್ನೂ ಓದಿ: Gold Rate today: ಏರಿಳಿಕೆ ಕಾಣದ ಬಂಗಾರದ ಬೆಲೆ, 24 ಕ್ಯಾರೆಟ್‌ ಬೆಲೆ ₹ 6,016

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಾರಾಯಾಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ಶಿವಮೊಗ್ಗದಲ್ಲಿ ಹಿಂದೆ ಹಕ್ಕೊತ್ತಾಯ ಸಮಾವೇಶ ಮಾಡಿದಾಗ ಸಮಾಜದ ಐದು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಲಾಗಿತ್ತು. ಅಂದು ಈಡಿಗ ಅಭಿವೃದ್ಧಿ ನಿಗಮ ರಚನೆ ಮಾಡಿದ್ದು, ಮುಂದುವರಿದ ಚಟುವಟಿಕೆಗಳು ಈಗ ಆಗಬೇಕಿದೆ. ನೂತನ ಸರ್ಕಾರದ ಮೇಲೆ ಒತ್ತಡ ಹೇರಲು ನಾವು ಏನು ಮಾಡಬೇಕೆಂಬ ಉದ್ದೇಶ ಮತ್ತು ಸಮಾಜದ ಸಂಘಟನೆಯ ದೃಷ್ಟಿಯಿಂದ ಚಿಂತನ ಮಂಥನ ಕಾರ್ಯಕ್ರಮ ನಡೆಸಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಸಮಾಜದಿಂದ ಆಯ್ಕೆಯಾದ ಎಲ್ಲಾ ಶಾಸಕರು ಮತ್ತು ಸಚಿವರನ್ನು ಸನ್ಮಾನಿಸಲಾಗುವುದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸಂಘಟನೆ ಪ್ರಬಲವಾಗಿದ್ದು, ಧಾರ್ಮಿಕ ನಾಯಕರ ಮಾರ್ಗದರ್ಶನದಲ್ಲಿ ಸಮಾಜಮುಖಿ ಕಾರ್ಯ ಮಾಡಲಾಗುವುದು ಎಂದು ಹೇಳಿದರು.

ಈಡಿಗ ಸಮಾಜದ 26 ಪಂಗಡಗಳ ಪ್ರಮುಖರು ಪಾಲ್ಗೊಂಡಿದ್ದರು. ಮಾಜಿ ಶಾಸಕ ಡಾ.ಜಿ.ಡಿ. ನಾರಾಯಣಪ್ಪ, ಸಂಶೋಧಕ ಮಧು ಗಣಪತಿ ಮಡೆನೂರು, ಡಾ.ಮೋಹನ್ ಚಂದ್ರಗುತ್ತಿ, ಡಾ.ಅಣ್ಣಪ್ಪ ಮಳೀಮಠ್, ಪ್ರಮುಖರಾದ ಕಲಗೋಡು ರತ್ನಾಕರ್, ಸುರೇಶ್ ಬಾಳೇಗುಂಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಮಾನಸ ಹೆಬ್ಬೂರು ಕಾರ್ಯಕ್ರಮ ನಿರೂಪಿಸಿದರು. ಪ್ರಿಯ ಭಾಷಿಣಿ ಪ್ರಾರ್ಥಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಪ್ರವೀಣ್ ಹಿರೇ ಇಡಗೋಡು ಸ್ವಾಗತಿಸಿದರು.

ಇದನ್ನೂ ಓದಿ: Weather report : ಬೆಂಗಳೂರು ಸೇರಿ ಇಲ್ಲೆಲ್ಲ ಸಂಜೆ ವೇಳೆಗೆ ಮಳೆ ಕಾಟ

ಈಡಿಗ ಸಮುದಾಯದ ಎಲ್ಲ ಉಪ ಪಂಗಡಗಳು ಒಂದಾಗಿವೆ. ಇನ್ನೂ ಬೇಡಿಕೆ ಈಡೇರಿಕೆಗೆ ಸಂಘಟಿತರಾಗಬೇಕು. ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸಂಘಟನಾತ್ಮಕವಾಗಿ ಮುಂದೆ ಬಂದು ನ್ಯಾಯಯುತವಾಗಿ ಸಿಗಬೇಕಾದ ಬೇಡಿಕೆಗಳನ್ನು ಪಡೆಯಬೇಕು. ಸಮಾಜದ ಸಂಘಟನೆ ಸ್ವಾಮೀಜಿಗಳು ಒಂದಾಗಿರುವುದು ಸಂತೋಷದ ಸಂಗತಿ. ಸಮಾಜ ಸಂಘಟನೆ ಮತ್ತು ಸೇವಾ ಕಾರ್ಯಗಳಿಗೆ ಯಾವತ್ತೂ ಬೆಂಬಲವಾಗಿ ನಿಲ್ಲುತ್ತೇವೆ.

-ಡಾ.ಎಸ್.ರಾಮಪ್ಪ, ಧರ್ಮದರ್ಶಿಗಳು, ಶ್ರೀ ಕ್ಷೇತ್ರ ಸಿಗಂದೂರು.

Exit mobile version