Site icon Vistara News

Shivamogga News: ಮುಖ್ಯ ಶಿಕ್ಷಕ ಶಾಲೆಗೆ ಗೈರು; ಪೋಷಕರಿಂದ ಶಾಲೆ ಎದುರು ದಿಢೀರ್ ಪ್ರತಿಭಟನೆ

Headmaster absent from school A sudden protest in front of the school by the parents

ರಿಪ್ಪನ್‌ಪೇಟೆ: ಸಮೀಪದ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ (Govt Higher Primary School) ಕಳೆದ ಎರಡ್ಮೂರು ವರ್ಷದಿಂದ ಮುಖ್ಯೋಪಾದ್ಯಾಯರು (Head Master) ಅನಾರೋಗ್ಯದ ಕಾರಣ ಗೈರು ಹಾಜರಾಗುತ್ತಿದ್ದು ಶಾಲಾ ಮಕ್ಕಳಿಗೆ (School Children) ಪಾಠ-ಪ್ರವಚನ ಸರಿಯಾಗಿ ಆಗದೇ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿ, ಶುಕ್ರವಾರ ಪೋಷಕರು ಮತ್ತು ಗ್ರಾಮಸ್ಥರು ಶಾಲಾ ಅವರಣದಲ್ಲಿ ದಿಢೀರ್ ಪ್ರತಿಭಟನೆ (Protest) ನಡೆಸುವ ಮೂಲಕ ಮುಖ್ಯ ಶಿಕ್ಷಕ ಗಂಗಾನಾಯ್ಕ್ ಅವರನ್ನು ಕೂಡಲೇ ವರ್ಗಾಯಿಸುವಂತೆ ಆಗ್ರಹಿಸಿದರು.

ಕಳೆದ ಮೂರು ವರ್ಷದಿಂದಲೂ ಎಸ್.ಡಿ.ಎಂ.ಸಿ. ಅಧ್ಯಕ್ಷ ಉಮೇಶ್, ಈ ಬಗ್ಗೆ ಸಾಕಷ್ಟು ಬಾರಿ ಕ್ಷೇತ್ರಶಿಕ್ಷಣಾಧಿಕಾರಿಗಳ ಗಮನಕ್ಕೆ ತರಲಾದರೂ ಕೂಡಾ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಬಿ.ಇ.ಓ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Chandrayaan -3 : ರೋವರ್​ ಚಂದ್ರನ ಮೇಲೆ ಅನ್ವೇಷಣೆ ಮಾಡಲು ಹೊರಟ ವಿಡಿಯೊ ಬಿಡುಗಡೆ ಮಾಡಿದ ಇಸ್ರೊ

ಒಂದರಿಂದ 8ನೇ ತರಗತಿವರೆಗೆ 70 ವಿದ್ಯಾರ್ಥಿಗಳಿದ್ದು ಈ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದಾಗಿ 11 ವಿದ್ಯಾರ್ಥಿಗಳು ವರ್ಗಾವಣೆ ಪತ್ರವನ್ನು ಹಿಂಪಡೆದು ಬೇರೆ ಕಡೆ ಶಾಲೆಗಳಿಗೆ ದಾಖಲಾಗಿದ್ದಾರೆ. ಉಳಿದಂತೆ ಈಗ 59 ವಿದ್ಯಾರ್ಥಿಗಳಿದ್ದು ಇಬ್ಬರು ಖಾಯಂ ಶಿಕ್ಷಕರು ಮಾತ್ರ ಇದ್ದಾರೆ, ಅದರಲ್ಲೂ ಹಿಂದಿ, ಇಂಗ್ಲಿಷ್ ಶಿಕ್ಷಕರುಗಳಿಲ್ಲದೆ ಗ್ರಾಮೀಣ ಪ್ರದೇಶದ ನಮ್ಮ ಮಕ್ಕಳು ಪಾಠ ಪ್ರವಚನದಿಂದ ಹಿಂದೆ ಉಳಿಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರತಿಭಟನಾ ಸಂದರ್ಭದಲ್ಲಿ ಅರಸಾಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲೋಕೇಶ್, ಕೃಷ್ಣಮೂರ್ತಿ, ನಾಗೇಶ, ಧರ್ಮೋಜಿ, ಟಿ.ಎನ್.ಸುರೇಶ, ಲಲಿತಾ, ತುಳಸಿಕುಮಾರ್, ಸರಿತಾ,ಟಿ.ಹೆಚ್.ಮಂಜುನಾಥ, ಮಂಜುನಾಥ, ಕೀರ್ತಿಕುಮಾರ, ಟಿ.ಎನ್.ರಾಜೇಶ್, ಯಶೋಧ, ಸಚಿನ್, ಚಂದ್ರಶೇಖರ, ಚರಣ, ರಾಮಣ್ಣ, ರಾಘವೇಂದ್ರ, ದೇವರಾಜ್, ಓಂಕಾರ ಇನ್ನಿತರರು, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಅವರನ್ನು ತರಾಟೆಗೆ ತೆಗೆದುಕೊಂಡರು, ತಾವು ಹಾಲಿ ಗೈರು ಹಾಜರಾಗುವ ಮುಖ್ಯೋಪಾದ್ಯಾಯರನ್ನು ಕೂಡಲೇ ಬದಲಾಯಿಸಿ ನಮಗೆ ಖಾಯಂ ನಾಲ್ವರು ಶಿಕ್ಷಕರನ್ನು ನಿಯೋಜಿಸುವಂತೆ ಆಗ್ರಹಿಸಿದರು.

ಇದನ್ನೂ ಓದಿ: Asia Cup 2023: ಯೋ-ಯೋ ಟೆಸ್ಟ್​ ಪಾಸ್​ ಆದ ನಾಯಕ ರೋಹಿತ್​,ಹಾರ್ದಿಕ್​

ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ ಮೇಲಾಧಿಕಾರಿಗಳೊಂದಿಗೆ ಸಮಾಲೋಚಿಸಿ, ಬರುವ ಸೋಮವಾರದೊಳಗೆ ಹೆಚ್ಚುವರಿ ಇಬ್ಬರು ಶಿಕ್ಷರನ್ನು ನಿಯೋಜಿಸುವುದಾಗಿ ಭರವಸೆ ನೀಡಿದ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆದರು.

Exit mobile version