ಸೊರಬ: ತಾಲೂಕಿನ ಉದ್ರಿ ಗ್ರಾಮದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ (Government Ayurvedic Hospital) ಆವರಣದಲ್ಲಿ ಸಸಿಗಳ (Plants) ನೆಟ್ಟಿರುವುದು ಮಾತ್ರವಲ್ಲದೆ ಬೆಳೆಸುವ ಪ್ರಕ್ರಿಯೆಯೂ ನಡೆಯುತ್ತಿದ್ದು, ಉದ್ಯಾನವು ಆಸ್ಪತ್ರೆಗೆ (Hospital) ಬರುವ ರೋಗಿಗಳಿಗೆ (Patients) ಮನೋಲ್ಲಾಸ ನೀಡುತ್ತಿದೆ. ಮಾತ್ರವಲ್ಲದೆ, ತಾಲೂಕಿನಲ್ಲಿಯೇ ಮಾದರಿ ಆಸ್ಪತ್ರೆಯಾಗಿ ಗಮನ ಸೆಳೆಯುತ್ತಿದೆ.
ಪ್ರಸ್ತುತ ಇಲ್ಲಿನ ಆಸ್ಪತ್ರೆಯಲ್ಲಿ ಆಯುಷ್ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಎಂ.ಕೆ. ಮಹೇಶ್ ಅವರು ಸುತ್ತಮುತ್ತಲಿನ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಜತೆಗೆ ಮುತುವರ್ಜಿ ವಹಿಸಿದ್ದರಿಂದ ಆಸ್ಪತ್ರೆಯ ಆವರಣದಲ್ಲೊಂದು ಔಷಧ ಸಸ್ಯಗಳ ಲೋಕ ಎದ್ದು ನಿಂತಿದೆ.
ಇದನ್ನೂ ಓದಿ: Rohit Sharma: ರೋಹಿತ್ ಶರ್ಮ ಕ್ರಿಕೆಟ್ ಕರಿಯರ್ಗೆ ತುಂಬಿತು 16 ವರ್ಷ
75ಕ್ಕೂ ಅಧಿಕ ಸಸಿಗಳು
ಉದ್ಯಾನದಲ್ಲಿ ವಿವಿಧ ಔಷಧೀಯ ಗುಣಗಳುಳ್ಳ ಲಕ್ಷ್ಮಣಫಲ, ಬೆಟ್ಟದ ನೆಲ್ಲಿ, ಅಶ್ವಗಂಧ, ವಿಷ್ಣುಕಾಂತಿ, ದಾಲ್ಚಿನ್ನಿ, ಅಸ್ಥಿಶೃಂಖಲ, ಅಶೋಕ, ಬಿಲ್ವ, ಕಛೂರ, ರಾಣಫಲ, ಮರೀಚ, ಜಲಬ್ರಾಹ್ಮಿ, ಅಪಮಾರ್ಗ, ಅಮಲಕಿ, ಚಿತ್ರಕ, ಗುಡೂಚಿ, ದೂಪದ ಮರ, ದೊಡ್ಡಪತ್ರೆ, ದೂರ್ವ, ಪಿಪ್ಪಲಿ ಅಶೋಕ, ಮಧುನಾಶಿನಿ, ಪಾನ್ ಪತ್ರೆ, ವಚ ಹೀಗೆ ಸುಮಾರು 75ಕ್ಕೂ ಅಧಿಕ ಸಸಿಗಳನ್ನು ನೆಟ್ಟು ಪೋಷಣೆ ಮಾಡಲಾಗುತ್ತಿದೆ.
ಪ್ರತಿಯೊಂದು ಸಸಿಗೂ ವೈಜ್ಞಾನಿಕವಾಗಿ, ಆಯುರ್ವೇದದಲ್ಲಿ ಬಳಕೆಯಲ್ಲಿರುವ ಮತ್ತು ಆಡು ಭಾಷೆಯಲ್ಲಿ ಬಳಕೆಯಲ್ಲಿ ಹೆಸರಿನ ನಾಮಫಲಕದ ಜತೆಗೆ ಉಪಯೋಗದ ಕುರಿತು ಕಿರು ಮಾಹಿತಿ ನಾಮಫಲಕ ಅಳವಡಿಸಿರುವುದು ವಿಶೇಷ.
ಸ್ಥಳೀಯ ಯುವಕರ ಸಹಕಾರದೊಂದಿಗೆ ಪ್ರತಿ ಸಸಿಗೂ ಹನಿ ನೀರಾವರಿ ವ್ಯವಸ್ಥೆ ಸಹ ಕಲ್ಪಿಸಲಾಗಿದೆ. ಆಸ್ಪತ್ರೆಯ ಆವರಣದಲ್ಲಿ ಬೆಳೆದಿರುವ ಔಷಧೀಯ ಸಸ್ಯಗಳಿಂದ ಔಷಧವನ್ನು ತಯಾರಿಸುತ್ತಿಲ್ಲ. ಬದಲಿಗೆ ಮುಂದಿನ ಪೀಳಿಗೆಗೆ ಅಪರೂಪದ ಸಸ್ಯ ಪ್ರಭೇದಗಳನ್ನು ಸಂರಕ್ಷಿಸಿ ಪರಿಚಯಿಸುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಸ್ಥಳೀಯ ಗ್ರಾಮಸ್ಥರು ಹಾಗೂ ಯುವಕರು ಸಹ ಕೈಜೋಡಿಸಿದ್ದಾರೆ. ಸಸಿಗಳನ್ನು ಖುದ್ದು ವೈದ್ಯರೇ ಹಾಸನ, ಚಿಕ್ಕಮಗಳೂರು, ಶಿರಸಿ ಸೇರಿದಂತೆ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಭಾಗದಿಂದ ಆಯ್ದು ತಂದಿದ್ದಾರೆ. ಸ್ಥಳಾವಕಾಶವಿದಿದ್ದರೆ ಔಷಧ ವನವನ್ನೇ ಮಾಡುವ ಹಂಬಲ ಇಲ್ಲಿನ ವೈದ್ಯರದ್ದು.
ಇದನ್ನೂ ಓದಿ: Viral Video: ಗುಜರಾತ್ ಮಳೆಯಲ್ಲಿ ಅಪಾಯಕ್ಕೆ ಸಿಲುಕಿದ್ದ ವಿದ್ಯಾರ್ಥಿನಿಯರ ರಕ್ಷಣೆ: ಹ್ಯಾಪಿ ವೀಕೆಂಡ್ ಎಂದ ಮುಂಬಯಿ ಮಂದಿ
ನರೇಗಾ ಸದ್ಭಳಕೆ
ಉದ್ರಿ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಕ್ರಿಯಾಯೋಜನೆ ತಯಾರಿಸಿ ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಲಾಗಿದೆ. 109 ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ. ಅನುದಾನದ ಕೊರತೆಯ ನಡುವೆ ನರೇಗಾ ವರದಾನವಾಗಿದೆ. ನರೇಗಾ ಸೇರಿದಂತೆ ಸುಮಾರು 2 ಲಕ್ಷ ರೂ., ವೆಚ್ಚದಲ್ಲಿ ಸುಂದರ ಉದ್ಯಾನ ನಿರ್ಮಾಣವಾಗಿದೆ.
ಉದ್ರಿ ಗ್ರಾಮದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯವು ತಾಲೂಕಿನಲ್ಲಿಯೇ ಮಾದರಿಯಾಗಿದ್ದು, ಕೇವಲ ಆಸ್ಪತ್ರೆಯಾಗಿರದೆ, ಔಷಧ ಸಸ್ಯಗಳ ಭಂಡಾರವನ್ನೇ ಹೊತ್ತು ನಿಂತಿರುವುದು ಗ್ರಾಮಸ್ಥರಿಗೂ ಸಹ ಹೆಮ್ಮೆಯ ವಿಷಯವಾಗಿದೆ.
ಇದನ್ನೂ ಓದಿ: 7th Pay Commission : ಎನ್ಪಿಎಸ್ ನೌಕರರ ಬೇಡಿಕೆ ಕುರಿತು ಚರ್ಚಿಸಲು ಆಯೋಗದಿಂದ ಮಹತ್ವದ ಸಭೆ
ಉದ್ರಿ ಗ್ರಾಮದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಆವರಣದಲ್ಲಿ ಸ್ಥಳದ ಕೊರತೆಯ ನಡುವೆಯೂ ಗ್ರಾಮಸ್ಥರ ಮತ್ತು ಸ್ಥಳೀಯ ಗ್ರಾಪಂ ಸಹಕಾರದೊಂದಿಗೆ ಕಳೆದ ಮೂರು ವರ್ಷದಿಂದ ಔಷಧ ಸಸ್ಯಗಳ ಉದ್ಯಾನ ಮಾಡಲಾಗಿದೆ. ತಾವು ಸೇವೆ ಸಲ್ಲಿಸುವ ವೇಳೆಯಲ್ಲಿ ಗ್ರಾಮಸ್ಥರು ಸಹ ಉತ್ತಮ ಸಹಕಾರ ನೀಡುತ್ತಿದ್ದಾರೆ. ಗ್ರಾಮಸ್ಥರ ನೆರವಿನಿಂದ ಪರಿಸರ ದಿನ, ರಕ್ತದಾನ ಶಿಬಿರದಂತಹ ಅನೇಕ ಸಮಾಜಮುಖಿ ಕಾರ್ಯಗಳು ಸಹ ನಡೆದಿದೆ. ತಾಲೂಕು ಕೇಂದ್ರದಲ್ಲಿ 10 ಹಾಸಿಗೆಗಳ ಆಯುರ್ವೇದ ಆಸ್ಪತ್ರೆ ನಿರ್ಮಿಸಲು ಅನುಮೋದನೆಯ ಹಂತದಲ್ಲಿದ್ದು, ತಾಲೂಕು ಕೇಂದ್ರದ ಆಸ್ಪತ್ರೆಯ ಆವರಣದಲ್ಲಿಯೇ ಔಷಧ ವನ ಅಥವಾ ಉದ್ಯಾನ ಮಾಡುವ ಅಭಿಲಾಷೆ ಇದೆ ಎಂದು ಉದ್ರಿ ಗ್ರಾಮದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಎಂ.ಕೆ. ಮಹೇಶ್ ತಿಳಿಸಿದ್ದಾರೆ.