Site icon Vistara News

Karnataka Election: ಬಿಜೆಪಿಯಿಂದ ಅಬ್ಬರದ ಪ್ರಚಾರ; ಹಾರನಹಳ್ಳಿಯಲ್ಲಿ ರೋಡ್‌ ಶೋ

#image_title

ಶಿವಮೊಗ್ಗ: ವಿಧಾನಸಭೆ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾರನಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಬಿ.ಅಶೋಕ ನಾಯ್ಕ ಅವರು ಚುನಾವಣಾ ಪ್ರಚಾರ, ರೋಡ್ ಶೋ ಹಾಗೂ ಮನೆ ಮನೆಗಳಿಗೆ ತೆರಳಿ ಪ್ರಚಾರ ನಡೆಸಿದರು. ಸಾವಿರಾರು ಕಾರ್ಯಕರ್ತರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

“ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ದೇಶ ಶ್ರೇಷ್ಠ ಮಾರ್ಗದಲ್ಲಿ ಮುನ್ನಡೆದಿದೆ. ಧರ್ಮ ರಕ್ಷಣೆ ಮತ್ತು ದೇಶದ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಪಕ್ಷ ಬಿಜೆಪಿ. ಬಿಜೆಪಿ ನೇತೃತ್ವದ ಸರ್ಕಾರವನ್ನು ಮತ್ತೊಮ್ಮೆ ಆಡಳಿತಕ್ಕೆ ತರಬೇಕು. ಗ್ರಾಮಾಂತರ ಕ್ಷೇತ್ರದಲ್ಲಿ ಕೆ.ಬಿ. ಅಶೋಕ ನಾಯ್ಕ ಅವರನ್ನು ಮತ್ತೊಮ್ಮೆ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು” ಎಂದು ಶಿವಮೊಗ್ಗ ಜಿಲ್ಲಾ ಚುನಾವಣಾ ಉಸ್ತುವಾರಿ ಕುಲದೀಪ್ ಸಿಂಗ್ ಕುಮಾರ ಹೇಳಿದರು.

ಹಾರನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ರೋಡ್ ಶೋ ಸಂದರ್ಭದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಪಕ್ಷದ ಮುಖಂಡರು ಮಾತನಾಡಿದರು. ನಂತರ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಬಿ.ಅಶೋಕ ನಾಯ್ಕ್ ಮಾತನಾಡಿ, “ಐದು ವರ್ಷಗಳಲ್ಲಿ ಹಿಂದಿನ ಅವಧಿಗಳಲ್ಲಿ ಆಗದಷ್ಟು ಅಭಿವೃದ್ಧಿ ಕೆಲಸಗಳನ್ನು ನಡೆಸಲಾಗಿದೆ. ಅಭಿವೃದ್ಧಿ ಎಂದರೆ ಬಿಜೆಪಿ, ಬಿಜೆಪಿಯೇ ಭರವಸೆ” ಎಂದು ತಿಳಿಸಿದರು.

“ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಗ್ರಾಮಾಂತರ ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು, ಹೆಚ್ಚಿನ ಅನುದಾನವನ್ನು ಕ್ಷೇತ್ರಕ್ಕೆ ನೀಡಿದ್ದಾರೆ. ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಅವರ ನೆರವಿನಿಂದಲೂ ಕೋಟ್ಯಂತರ ರೂ. ಅನುದಾನ ಗ್ರಾಮಾಂತರ ಕ್ಷೇತ್ರಕ್ಕೆ ಲಭಿಸಿದೆ. ಅಭಿವೃದ್ಧಿ ಪರ್ವ ನಿರಂತರವಾಗಿ ಮುಂದುವರಿಯಲು ಬಿಜೆಪಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಬೇಕು. ಹೆಚ್ಚಿನ ಬೆಂಬಲ ನೀಡಬೇಕು” ಎಂದು ಮನವಿ ಮಾಡಿದರು.

ಅಶೋಕ ನಾಯ್ಕ ಅವರು ರೋಡ್ ಶೋಗೂ ಮುನ್ನ ಚೌಕಿ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಗದ್ದುಗೆಗೆ ಭೇಟಿ ನೀಡಿದರು. ನಂತರ ಹಾರನಹಳ್ಳಿ ಶ್ರೀ ರಾಮಲಿಂಗೇಶ್ವರ ಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರೋಡ್ ಶೋಗೆ ಚಾಲನೆ ನೀಡಲಾಯಿತು.

ಇದನ್ನೂ ಓದಿ: Karnataka Election: ಜನರನ್ನು ಭಯದಲ್ಲಿಟ್ಟು ಚುನಾವಣೆ ಗೆದ್ದ ತಕ್ಷಣ ಭದ್ರಕೋಟೆಯಾಗಲ್ಲ: ಡಿಕೆ ಬ್ರದರ್ಸ್‌ ಮೇಲೆ ಸಿ.ಟಿ. ರವಿ ಕಿಡಿ

ಶಿವಮೊಗ್ಗ ಗ್ರಾಮಾಂತರ ಪ್ರವಾಸಿ ಪ್ರಭಾರಿ ಮುಖೇಶ್ ಸಿಂಗ್ ಕೋಲಿ, ಕ್ಷೇತ್ರ ಪ್ರಭಾರಿ ಎಸ್. ದತ್ತಾತ್ರಿ, ಮಂಡಲ ಅಧ್ಯಕ್ಷ ರತ್ನಾಕರ ಶೆಣೈ, ಚುನಾವಣಾ ಸಮಿತಿ ಸಂಚಾಲಕ ಸಿಂಗನಹಳ್ಳಿ ಸುರೇಶ್, ಶಿವಮೊಗ್ಗ ಗ್ರಾಮಾಂತರ ಅಭ್ಯರ್ಥಿ ಪ್ರಮುಖ್ ವಿರೂಪಾಕ್ಷಪ್ಪ, ಸ್ವರೂಪ್, ಜಗದೀಶ್, ತಮ್ಮಡಿಹಳ್ಳಿ ನಾಗರಾಜ್, ಸೌಮ್ಯ, ಹಾರನಹಳ್ಳಿ ಮಹಾಶಕ್ತಿ ಕೇಂದ್ರದ ರಮೇಶ್, ಕಿರಣ್, ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.

Exit mobile version