ತೀರ್ಥಹಳ್ಳಿ: ಪಿಎಸ್ಐ ಹಗರಣದ ಆರೋಪಿ ದಿವ್ಯಾ ಹಾಗರಗಿ, ಸ್ಯಾಂಟ್ರೋ ರವಿ ಹಾಗೂ ಪಾಟೀಲ್ ಅವರು ತೀರ್ಥಹಳ್ಳಿ ಕ್ಷೇತ್ರದಲ್ಲಿ ಆರಗ ಜ್ಞಾನೇಂದ್ರ ಪರವಾಗಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ ಎಂದು ಮಾಜಿ ಶಿಕ್ಷಣ ಸಚಿವ ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ (Karnataka Election) ಆರೋಪಿಸಿದರು.
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಹುಂಚ ಹೋಬಳಿಯ ಕಗಲಿಜಡ್ಡು ಗ್ರಾಮದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಈ ಮೂವರು ಭ್ರಷ್ಟಾಚಾರಿಗಳು ಭ್ರಷ್ಟ ಹಣದಲ್ಲಿ ಆರಗ ಪರ ಕ್ಯಾಂಪೇನ್ ನಡೆಸುತಿದ್ದಾರೆ. ನಮ್ಮದು ಖಾಲಿ ಜೇಬು ನಮಗೆ ನಿಷ್ಠಾವಂತ ಕಾರ್ಯಕರ್ತರೇ ಶಕ್ತಿ” ಎಂದು ಹೇಳಿದರು.
ಹಾಗೆಯೇ ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, “ಶರಾವತಿ ಸಂತ್ರಸ್ತರಿಗೆ ಬಿಜೆಪಿ ಮಹಾ ಮೋಸ ಮಾಡಿದೆ. ಚುನಾವಣಾ ಸಮಯದಲ್ಲಿ ಮಾತ್ರ ಶರಾವತಿ ಸಂತ್ರಸ್ತರು ಬಿಜೆಪಿಯವರಿಗೆ ನೆನಪಾಗುತ್ತಾರೆ” ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಂಡಿ ರಾಮಚಂದ್ರ, ಶ್ವೇತಾ ರಾಮಚಂದ್ರ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಚಂದ್ರಮೌಳಿ, ಕೂರಂಬಳ್ಳಿ ಷಣ್ಮುಖಪ್ಪ, ಮುಡುಬಾ ರಾಘವೇಂದ್ರ, ಮುಖಂಡರಾದ ಅಮೀರ್ ಹಂಜಾ, ಬಶೀರ್ ಅಹ್ಮದ್, ಗರತಿ ಕೆರೆ ರಾಜು, ಬುಕ್ಕಿವರ ರಮೇಶ, ಎಂ.ಎಂ. ಪರಮೇಶ್, ಎಡಗುಡ್ಡೆ ಷಣ್ಮುಖ ಇನ್ನಿತರರಿದ್ದರು.