Site icon Vistara News

Life Saving Surgery | ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಎತ್ತಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ; ಪಶು ಇಲಾಖೆ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ

Life Saving Surgery

ನಿಟ್ಟೂರು: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ಹೆಬ್ಬಿಗೆ ಗ್ರಾಮದಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಎತ್ತಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಬತ್ತೆ ಮಲ್ಲಪ್ಪದ ಖ್ಯಾತ ಪಶು ತಜ್ಞ ವೈದ್ಯ ಡಾ.ಅವಿನಾಶ್ ಎಂಬುವವರು ಸುಮಾರು ೨ ಗಂಟೆಗೂ ಹೆಚ್ಚು ಕಾಲ ಶಸ್ತ್ರ ಚಿಕಿತ್ಸೆ ನಡೆಸಿ (Life Saving Surgery) ಎತ್ತಿನ ಕೊಂಬಿನಿಂದ ಕ್ಯಾನ್ಸರ್ ಗಡ್ಡೆಯನ್ನು ಹೊರಕ್ಕೆ ತೆಗೆದಿದ್ದಾರೆ.

ಹೆಬ್ಬಿಗೆ ಗ್ರಾಮದ ಬಸವಿನಕಲ್ಲು ಗಣಪತಿ ಎಂಬುವವರ ಎತ್ತಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಕೃಷಿ ಕೆಲಸಗಳಿಗೆ ಬಳಸುತ್ತಿದ್ದ ಸುಮಾರು 90 ಸಾವಿರ ರೂ. ಬೆಲೆಯ ಎತ್ತಿನ ಕೊಂಬಿಗೆ ಕ್ಯಾನ್ಸರ್ ಬಂದಿತ್ತು. ಇದರಿಂದ ಎತ್ತು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿತ್ತು.

ಸಕಾಲದಲ್ಲಿ ಸುದ್ದಿ ತಿಳಿದು ಪಶು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಎತ್ತಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ನಂತರ ಬತ್ತೆ ಮಲ್ಲಪ್ಪದ ಖ್ಯಾತ ಪಶು ತಜ್ಞ ವೈದ್ಯ ಡಾ.ಅವಿನಾಶ್ ಅವರು ಸುಮಾರು ೨ ಗಂಟೆಗೂ ಹೆಚ್ಚು ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಎತ್ತಿನ ಕೊಂಬಿನಿಂದ ಕ್ಯಾನ್ಸರ್ ಗಡ್ಡೆಯನ್ನು ಯಶಸ್ವಿಯಾಗಿ ಹೊರಕ್ಕೆ ತೆಗೆದಿದ್ದಾರೆ.

6 ತಿಂಗಳ ವಿಶ್ರಾಂತಿ ಬಳಿಕ ಶಸ್ತ್ರ ಚಿಕಿತ್ಸೆಗೆ ಒಳಗಾದ ಎತ್ತು ಮತ್ತೆ ಕೃಷಿ ಬಳಕೆಗೆ ಸಿದ್ಧ ಎಂದು ವೈದ್ಯರು ಭರವಸೆ ನೀಡಿದ್ದಾರೆ. ಶಸ್ತ್ರಚಿಕಿತ್ಸೆ ಮಾಡುವಾಗ ವೈದ್ಯರಿಗೆ ಹೆಬ್ಬಿಗೆ ಪಶು ಆಸ್ಪತ್ರೆಯ ಸಹಾಯಕ ಸತೀಶ್ ಚದರಳ್ಳಿ ಸಹಕರಿಸಿದ್ದಾರೆ. ಪಶು ಇಲಾಖೆಯ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ | Attempt To Murder | ಶಿವಮೊಗ್ಗದಲ್ಲಿ ಮತ್ತೆ ಚೂರಿ ಇರಿತ; ಗಾಯಾಳು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು

Exit mobile version