Site icon Vistara News

Murder Case : ಒಕ್ಕಲಿಗ ಸಂಪ್ರದಾಯದಂತೆ ನೆರವೇರಿದ ಪ್ರತಿಮಾ ಅಂತ್ಯಕ್ರಿಯೆ; ಮಗಳನ್ನು ಅಪ್ಪಿ ರೋದಿಸಿದ ಪೋಷಕರು

Murder case of Geologist Pratima

ಶಿವಮೊಗ್ಗ/ಬೆಂಗಳೂರು: ಒಕ್ಕಲಿಗ ಸಂಪ್ರದಾಯದಂತೆ ಭೂ ವಿಜ್ಞಾನಿ ಪ್ರತಿಮಾ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ಸ್ವಗ್ರಾಮದಲ್ಲಿ ನೆರವೇರಿಸಿದರು. ನ.4ರ ರಾತ್ರಿ ಬೆಂಗಳೂರಿನ ದೊಡ್ಡಕಲ್ಲಸಂದ್ರದ ಗೋಕುಲ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಪ್ರತಿಮಾರನ್ನು ಅವರದ್ದೇ ಕಾರು ಚಾಲಕ ಕಿರಣ್‌ ಹತ್ಯೆ (Murder case) ಮಾಡಿ ಪರಾರಿ ಆಗಿದ್ದ.

ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾದ ಪ್ರತಿಮಾರ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸಿದರು. ಇದಕ್ಕೂ ಮೊದಲು ತೀರ್ಥಹಳ್ಳಿಯ ಸತ್ಯನಾರಾಯಣ ಮನೆಯಲ್ಲಿ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಮಾ ಅವರ ಕುಟುಂಬಸ್ಥರು, ಹಿತೈಷಿಗಳು, ಸ್ನೇಹಿತರು ಅಂತಿಮ ದರ್ಶನ ಪಡೆದುರು. ಮಾಜಿ ಸಚಿವ ಆರಗ ಜ್ಞಾನೇಂದ್ರ ಅಂತಿಮ ದರ್ಶನ ಪಡೆದು, ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ತೀರ್ಥಹಳ್ಳಿಯ ಕುರುವಳ್ಳಿ ಹಿಂದೂ ರುದ್ರ ಭೂಮಿಯಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಶಿವನ ವಿಗ್ರಹದ ಮುಂದೆ ಮೃತದೇಹವಿಟ್ಟು ಪೂಜೆ ಸಲ್ಲಿಸಿದರು. ಅಂತಿಮ ವಿಧಿ ವಿಧಾನ ಸಲ್ಲಿಸಿ, ಪುತ್ರ ಪಾರ್ಥ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಇದಕ್ಕೂ ಮೊದಲು ತಾಯಿಯ ಮೃತದೇಹದ ಮುಂದೆ ಕುಳಿತು ಮಗ ಪಾರ್ಥ ಕಣ್ಣೀರು ಹಾಕಿದ್ದರು. ಪ್ರತಿಮಾ ತಂದೆ ಸುಬ್ಬಣ್ಣ ಮಗಳನ್ನು ಅಪ್ಪಿಕೊಂಡು ರೋಧಿಸಿದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಪ್ರತಿಮಾ ಸಾವು ತುಂಬಾ ನೋವು ತಂದಿದೆ. ಈ ಸಾವಿಗೆ ನ್ಯಾಯ ಬೇಕು ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು. ಕಳೆದ 15 ದಿನಗಳ ಹಿಂದಷ್ಟೇ ಮನೆ ಗೃಹಪ್ರವೇಶ ಮಾಡಿದ್ದರು ಎಂದು ಪ್ರತಿಮಾ ಸಂಬಂಧಿ ಕಾಂತರಾಜು ಪ್ರತಿಕ್ರಿಯಿಸಿದರು.

ಇದನ್ನೂ ಓದಿ: Murder Case : ಸರ್ಕಾರಿ ಕೆಲಸ ಇಲ್ಲವೇ ಪ್ರತಿಮಾಳ ಕೊಲೆ; ನಿರ್ಧರಿಸಿಯೇ ಬಂದಿದ್ದ ಹಂತಕ ಕಿರಣ್‌

ಇವನೇ ನೋಡಿ ಭೂವಿಜ್ಞಾನಿ ಪ್ರತಿಮಾ ಕೊಲೆಗಾರ, ಯಾರನ್ನು ನಂಬುವುದು ಹೇಳಿ?

ಬೆಂಗಳೂರು: ಗಣಿ ಮತ್ತು ಭೂವಿಜ್ಞಾನ (Mines and Geology) ಇಲಾಖೆಯ ಹಿರಿಯ ಭೂವಿಜ್ಞಾನಿ (Senior Scientist) ಪ್ರತಿಮಾ (45) ಅವರನ್ನು ಕುತ್ತಿಗೆಗೆ ಹಗ್ಗಬಿಗಿದು ಕತ್ತು ಕೊಯ್ದು ಕೊಲೆ (Murder Case) ಮಾಡಿದವನು ಅವರದೇ ಕಾರಿನ ಚಾಲಕ ಕಿರಣ್‌ (30) ಎನ್ನುವುದು ಸ್ಪಷ್ಟವಾಗಿದೆ. ಕೊಲೆಯಾದ ನವೆಂಬರ್‌ ನಾಲ್ಕರಿಂದಲೇ ತಲೆಮರೆಸಿಕೊಂಡಿದ್ದ ಆತನನ್ನು ಮಲೆ ಮಹದೇಶ್ವರ ಬೆಟ್ಟದ ಸಮೀಪ (Driver Kiran Arrested) ಬಂಧಿಸಲಾಗಿದೆ. ಪ್ರತಿಮಾ ಕೊಲೆ ಬಳಿಕ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದ ಮೂಲಕ ತಮಿಳುನಾಡಿನ ಕಡೆಗೆ ಹೊರಟಿದ್ದಾನೆ ಎನ್ನುವ ಮಾಹಿತಿಯನ್ನು ಪಡೆದ ಪೊಲೀಸರು ಎಲ್ಲೆಡೆ ಅಲರ್ಟ್‌ ಮಾಡಿದ್ದರು. ಇದೀಗ ಆತನನ್ನು ಬಂಧಿಸಿ ತಲ್ಲಘಟ್ಟಪುರ ಪೊಲೀಸ್ ಠಾಣೆಗೆ ತರಲಾಗಿದೆ. ಕೊಲೆಯ ಸಂಪೂರ್ಣ ವಿವರವನ್ನು ಪಡೆದ ಬಳಿಕ ಆತನನ್ನು ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ.

ನ.4ರಂದು ರಾತ್ರಿ ದೊಡ್ಡಕಲ್ಲಸಂದ್ರದ ಗೋಕುಲ್ ಅಪಾರ್ಟ್‌ಮೆಂಟ್‌ನಲ್ಲಿ ಭೂ ವಿಜ್ಞಾನಿ ಪ್ರತಿಮಾ (45) ಅವರ ಕೊಲೆಯಾಗಿತ್ತು. ರಾತ್ರಿ ಕರೆಗೆ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಅವರ ಸಹೋದರ ಪಕ್ಕದ ಮನೆಯವರ ಬಳಿ ಪರಿಶೀಲಿಸುವಂತೆ ತಿಳಿಸಿದ್ದರು. ಆಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಈ ಕೊಲೆಯ ಹಿಂದೆ ಹಲವು ಅನುಮಾನಗಳು ಎದ್ದು ಬಂದಿದ್ದವು. ಇದೀಗ ಅವರ ಕಾರು ಚಾಲಕನೇ ಕೊಲೆಗಾರ ಎಂದು ತಿಳಿದುಬಂದಿದೆ. ಆದರೂ ಕೊಲೆಯ ಉದ್ದೇಶದ ಹಿಂದಿನ ಅನುಮಾನಗಳು ಇನ್ನೂ ಜೀವಂತವಾಗಿಯೇ ಇವೆ.

ಕೊಲೆಯನ್ನು ಒಪ್ಪಿಕೊಂಡಿರುವ ಕಿರಣ್‌

ಕೊಲೆಯಾದ ದಿನ ಕಪ್ಪು ಬಣ್ಣದ ಟೀ ಶರ್ಟ್‌ ಮತ್ತು ಕಪ್ಪು ಬಣ್ಣದ ನೈಟ್‌ ಪ್ಯಾಂಟ್‌ ಧರಿಸಿದ್ದ ಆರೋಪಿ ಕಿರಣ್‌, ಬಂಧನದ ಹೊತ್ತಿನಲ್ಲೂ ಅದೇ ದಿರಿಸಿನಲ್ಲಿದ್ದ. ಕೊಲೆ ನಡೆದ ದಿನವೇ ಆತನ ಮೇಲೆ ಒಂದು ಕಣ್ಣಿತ್ತು. ಅದರ ಜತೆಗೆ ಅವನು ನಾಪತ್ತೆ ಕೂಡಾ ಆಗಿದ್ದ. ಇದಾದ ಬಳಿಕ ಆತನ ಮೊಬೈಲ್‌ ಕೂಡಾ ಸ್ವಿಚ್‌ ಆಫ್‌ ಆಗಿತ್ತು. ಆತನ ಮೊಬೈಲ್‌ನ್ನು ಪೊಲೀಸರು ಟ್ರ್ಯಾಕ್‌ನಲ್ಲಿ ಇಟ್ಟಿದ್ದರು. ಹೀಗಾಗಿ ಅದು ಮಲೆಮಹದೇಶ್ವರ ಬೆಟ್ಟದ ಪರಿಸರದಲ್ಲಿ ಆಫ್‌ ಆಗಿದ್ದು ಸ್ಪಷ್ಟವಾಗಿತ್ತು. ಸೋಮವಾರ ಸಂಜೆ ಆತನನ್ನು ಬಂಧಿಸಲಾಗಿದೆ.

ಕಿರಣ್‌ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಕೊಲೆಗೆ ಬಳಸಿದ್ದ ಹಗ್ಗ ಮತ್ತು ಚಾಕುವನ್ನು ಎಲ್ಲಿಂದ ತರಲಾಗಿದೆ. ನಂತರ ಅದನ್ನು ಎಲ್ಲಿ ಎಸೆಯಲಾಗಿದೆ ಎಂಬ ಮಾಹಿತಿಗಳನ್ನು ಪಡೆದುಕೊಂಡು ಅದನ್ನು ರಿಕವರಿ ಮಾಡುವ ಕೆಲಸ ನಡೆದಿದೆ. ಇನ್ಸಪೆಕ್ಟರ್ ಜಗದೀಶ್ ಅವರು ವಿಚಾರಣೆ ನಡೆಸಿದ್ದಾರೆ.

ಕೊಲೆಗೆ ಏನು ಕಾರಣ?

ಪ್ರತಿಮಾ ಅವರಿಗೆ ಕಿರಣ್‌ ಕಾರು ಚಾಲಕನಾಗಿದ್ದ. ಆದರೆ ಆತನ ವರ್ತನೆಗಳು ಪ್ರತಿಮಾ ಅವರಿಗೆ ಸರಿಹೋಗುತ್ತಿರಲಿಲ್ಲ ಎನ್ನಲಾಗಿದೆ. ಕೆಲವು ತಿಂಗಳ ಹಿಂದೆ ಆತ ಪ್ರತಿಮಾ ಅವರು ಬಳಸುತ್ತಿದ್ದ ಕಾರನ್ನು ಅಪಘಾತ ಮಾಡಿದ್ದ. ಇದರಿಂದ ಆತ ಯಾವ ಕಾರಣಕ್ಕೂ ತನಗೆ ಚಾಲಕನಾಗಿ ಬೇಡ ಎಂದು ಪ್ರತಿಮಾ ಹೇಳಿದ್ದರು ಎನ್ನಲಾಗಿದೆ. ಆತ ಹಲವು ಬಾರಿ ಮರಳಿ ಸೇರಿಸಿಕೊಳ್ಳಿ ಎಂದು ಕೇಳಿಕೊಂಡಿದ್ದರೂ ಅವರು ಒಪ್ಪಿರಲಿಲ್ಲ.

ಆದರೆ, ಶನಿವಾರ ರಾತ್ರಿ ಅನಿವಾರ್ಯವಾಗಿ ಅವನ ಕಾರಿನಲ್ಲೇ ಪ್ರತಿಮಾ ಅವರು ಮನೆಗೆ ಬಂದಿದ್ದಾರೆ ಎನ್ನಲಾಗಿದೆ. ಈ ವೇಳೆ ಕಿರಣ್‌ನ ಆಕ್ರೋಶ ಭುಗಿಲೆದ್ದು ಕೊಲೆ ನಡೆದಿದೆ ಎನ್ನಲಾಗುತ್ತಿದೆ.

ಹಾಗಿದ್ದರೆ ಕೊಲೆ ನಡೆದಿದ್ದು ಹೇಗೆ?

ಹಾಗಿದ್ದರೆ ಈ ಕೊಲೆ ಹೇಗೆ ನಡೆಯಿತು ಎನ್ನುವ ಬಗ್ಗೆ ಪ್ರಾಥಮಿಕ ಮಾಹಿತಿಗಳು ಲಭ್ಯವಾಗಿವೆ. ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಕಿರಣ್‌ ಪ್ರತಿಮಾ ಅವರನ್ನು ಮನೆಗೆ ಡ್ರಾಪ್‌ ಮಾಡಿದ್ದಾನೆ. ಪ್ರತಿಮಾ ಅವರು ಕಾರಿನಿಂದ ಇಳಿದು ಮೆಟ್ಟಿಲು ಹತ್ತಿ ತಮ್ಮ ಮನೆಗೆ ಹೋಗಿದ್ದಾರೆ. ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ʻಇಷ್ಟು ಜೋರು ಮಳೆ ಬರುತ್ತಿದೆಯಲ್ಲ.. ಹೇಗೆ ಹೋಗುತ್ತೀರಿʼ ಎಂದು ಕೇಳಿದ್ದಾರೆ. ಆಗ ಕಿರಣ್‌ ಬೈಕ್‌ನಲ್ಲಿ ಹೋಗುತ್ತೇನೆ ಎಂದಿದ್ದಾನೆ.

ಈ ನಡುವೆ, ಕಿರಣ್‌ನೊಳಗಿನ ಹಿಂಸ್ರಪಶು ಎದ್ದುನಿಂತಿದ್ದಾನೆ. ಆತ ಮನೆಗೆಂದು ಹೊರಟವನು ಮಳೆಯ ನೆಪ ಮಾಡಿ ಮರಳಿ ಬಂದಿದ್ದಾನೆ. ಮೇಲಿನ ಮಹಡಿಗೆ ಹೋದ ಪ್ರತಿಮಾ ಅವರು ತಮ್ಮ ಕೈಲಿದ್ದ ಲಂಚ್‌ ಬಾಕ್ಸ್‌ನ್ನು ಕೆಳಗಿಟ್ಟು ಮೊದಲು ಕಬ್ಬಿಣದ ಗ್ರಿಲ್‌ ಡೋರ್‌ ಓಪನ್‌ ಮಾಡಿದ್ದಾರೆ, ಬಳಿಕ ಮರದ ಬಾಗಿಲು ತೆಗೆದಿದ್ದಾರೆ.

ಈ ಹಂತದಲ್ಲೇ ಕಿರಣ್‌ ಮೆಟ್ಟಿಲು ಹತ್ತಿಕೊಂಡು ಮೇಲೆ ಬಂದಿದ್ದಾನೆ. ಹಿಂದಿನಿಂದ ಪ್ರತಿಮಾ ಅವರ ಕುತ್ತಿಗೆಗೆ ಹಗ್ಗವನ್ನು ಬಿಗಿದು ನೇರವಾಗಿ ಒಳಗೆ ಎಳೆದುಕೊಂಡು ಹೋಗಿದ್ದಾನೆ. ಅಲ್ಲಿ ಕುತ್ತಿಗೆಯನ್ನು ಇಷ್ಟು ಗಟ್ಟಿಯಾಗಿ ಬಿಗಿದುದಲ್ಲದೆ, ಕುತ್ತಿಗೆಯನ್ನು ಚಾಕುವಿನಿಂದ ಸೀಳಿದ್ದಾನೆ. ಮತ್ತು ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ.

ಮೊದಲೇ ದಾಳಿಯ ಸುಳಿವು ನೀಡುತ್ತಿದ್ದ ಕಿರಣ್‌

ಪ್ರತಿಮಾ ಅವರು ಖಡಕ್‌ ಅಧಿಕಾರಿಯಾಗಿದ್ದು, ಸಾಕಷ್ಟು ಕಡೆ ಅಕ್ರಮ ಗಣಿಗಳಿಗೆ ದಾಳಿ ನಡೆಸಿದ್ದರು. ಆದರೆ, ಕೆಲವೊಂದು ದಾಳಿಗಳ ಮಾಹಿತಿ ಮೊದಲೇ ಅಪರಾಧಿಗಳಿಗೆ ತಿಳಿದು ಅವರೆಲ್ಲ ತಪ್ಪಿಸಿಕೊಳ್ಳುತ್ತಿದ್ದರು. ಇದರ ಹಿಂದೆ ಕಿರಣ್‌ನ ಕೈವಾಡ ಇರುವುದನ್ನು ತಿಳಿದು ಪ್ರತಿಮಾ ಅವರು ತಮ್ಮ ಕಾರಿನ ಚಾಲಕನ ಸ್ಥಾನದಿಂದ ಕಿತ್ತು ಹಾಕುವಂತೆ ಸೂಚಿಸಿದ್ದರು. ಆದರೆ, ಈ ಕನೆಕ್ಷನ್‌ ತಪ್ಪಿದ್ದರಿಂದ ಹತಾಶನಾಗಿದ್ದ ಆತ ತನ್ನನ್ನು ಮರಳಿ ಸೇರಿಸಿಕೊಳ್ಳುವಂತೆ ಕಾಲಿಗೆ ಬಿದ್ದೆಲ್ಲ ವಿನಂತಿಸಿದ್ದ! ಆದರೆ, ಪ್ರತಿಮಾ ಅವರು ಒಪ್ಪದೆ ಇದ್ದುದರಿಂದ ಈ ರೀತಿ ಸೇಡು ತೀರಿಸಿಕೊಂಡಿದ್ದಾನೆ ಎನ್ನಲಾಗಿದೆ.

ಇದು ಕಿರಣ್‌ ಮಾಡಿದ ಕೊಲೆಯೇ ಹೌದಾದರೂ ಇದರ ಹಿಂದೆ ಬೇರೆಯವರ ಕೈವಾಡವೂ ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದರ ಬಗ್ಗೆ ತನಿಖೆ ನಡೆಯಬೇಕಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version