Site icon Vistara News

Shivamogga News: ಅಪಘಾತದಲ್ಲಿ ನಾಗರಾಜ ಗೌಡ ಮೃತ್ಯು: ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ಸಾಂತ್ವನ

ನಾಗರಾಜ ಗೌಡ ಅವರ ಮನೆಗೆ ಕಾಗೋಡು, ಕಿಮ್ಮನೆ ರತ್ನಾಕರ್‌ ಭೇಟಿ

ರಿಪ್ಪನ್‌ಪೇಟೆ: ಮಂಗಳವಾರ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ತುರುಗೋಡು ನಾಗರಾಜ ಗೌಡ (Shivamogga News) ಮನೆಗೆ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಮತ್ತು ಕಿಮ್ಮನೆ ರತ್ನಾಕರ್ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಹೊಸನಗರ ತಾಲೂಕಿನ ಕೋಡೂರು ಸಮೀಪದ ತುರುಗೋಡು ನಿವಾಸಿ, ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಮುಂಬಾರು ಸೊಸೈಟಿಯ ಅಧ್ಯಕ್ಷರಾದ ನಾಗರಾಜ ಗೌಡ (50) ಅವರು ಮಂಗಳವಾರ ಶಿಕಾರಿಪುರದಿಂದ ಕೆಲಸದ ಆಳುಗಳನ್ನು ಕರೆದುಕೊಂಡು ಗ್ರಾಮಕ್ಕೆ ವಾಪಸ್‌ ಆಗುತ್ತಿದ್ದರು. ಆಗ ಸಾಗರ ತಾಲೂಕಿನ ಗೌತಮಪುರದ ಸಮೀಪ ರಸ್ತೆ ಪಕ್ಕದ ಮರಕ್ಕೆ ಅವರ ಕಾರು ಡಿಕ್ಕಿ ಹೊಡೆದಿದೆ. ಅದರ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ನಾಗರಾಜ ಗೌಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Karnataka Election: ಕಾಗೇರಿಯನ್ನು ಸೋಲಿಸಿದ ಭೀಮಣ್ಣ ನಾಯ್ಕಗೆ ಸಚಿವ ಸ್ಥಾನ ನೀಡಿ: ಬ್ಲಾಕ್‌ ಕಾಂಗ್ರೆಸ್‌

ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದು ಒಬ್ಬನಿಗೆ ಗಂಭೀರ ಗಾಯವಾಗಿದೆ. ಅವರು ಈಗ ಸರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಗರಾಜ ಗೌಡ ಅವರಿಗೆ ಇಬ್ಬರು ಪುತ್ರಿಯರು, ಪತ್ನಿ ಇದ್ದಾರೆ.

ಈ ವೇಳೆ ಮಾತನಾಡಿದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚಂದ್ರಮೌಳಿಗೌಡ, ನಾಗರಾಜ ಗೌಡರ ಅಗಲಿಕೆ ಸಹಿಸಲು ಅಸಾಧ್ಯ. ಅವರು ಬಡವರಿಗೆ ಸಹಾಯ ಹಸ್ತ ನೀಡುವುದರಲ್ಲಿ ಎತ್ತಿದ ಕೈ. ಈ ಭಾಗದ ಜನರಿಗೆ ದೊಡ್ಡ ಆಸ್ತಿಯೇ ಆಗಿದ್ದರು. ಇವರ ಅಗಲಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ನನಗೆ ವೈಯಕ್ತಿಕವಾಗಿ ನಷ್ಟವಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.

ಇದನ್ನೂ ಓದಿ: Karnataka Election: ಕಾಂಗ್ರೆಸ್‌ನವರು ಲಿಂಗಾಯತರಿಗೆ ಯಾವ ಹುದ್ದೆ ಕೊಡ್ತಾರೆ ನೋಡೋಣ: ಬೊಮ್ಮಾಯಿಗೂ ಕುತೂಹಲ!

ಜಿಪಂ ಮಾಜಿ ಅಧ್ಯಕ್ಷ ಕಲಗೋಡ ರತ್ನಾಕರ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಮೃತರ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದರು. ಬುಧವಾರ ಮಧ್ಯಾಹ್ನ ಅಂತ್ಯಕ್ರಿಯೆಯು ಅವರ ಜಮೀನಿನಲ್ಲಿ ನೆರವೇರಿತು.

Exit mobile version