Site icon Vistara News

Shivamogga News: ಹೊಂಬುಜದಲ್ಲಿ ವಿಜೃಂಭಣೆಯಿಂದ ಜರುಗಿದ ಮಹಾವೀರ ತೀರ್ಥಂಕರರ ಜನ್ಮ ಜಯಂತಿ

#image_title

ರಿಪ್ಪನ್‌ಪೇಟೆ: ʼಅಹಿಂಸೆಯಿಂದಲೇ ವಿಶ್ವಶಾಂತಿʼ ಸಂದೇಶದ ಮೂಲಕ ಸಕಲ ಜೀವಿಗಳಿಗೂ ಶಾಂತಿ ಬಯಸಿದ ಭ. ಮಹಾವೀರ ತೀರ್ಥಂಕರರ ಜನ್ಮ ಜಯಂತಿಯನ್ನು ದಕ್ಷಿಣ ಭಾರತದ ಜೈನರ ಪವಿತ್ರ ಯಾತ್ರಾ ಸ್ಥಳವಾದ ಶ್ರೀಕ್ಷೇತ್ರ ಹೊಂಬುಜದಲ್ಲಿ ಮಂಗಳವಾರ ನಡೆಸಲಾಯಿತು. ಜಗದ್ಗುರು ಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ (Shivamogga News) ನೆರವೇರಿತು.

ಬೆಳಗ್ಗೆ 8 ಗಂಟೆಗೆ ಮಹಾವೀರ ಸ್ವಾಮಿಗೆ ಅಭಿಷೇಕವನ್ನೂ ಮಾಡಲಾಯಿತು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮಿಗಳು, “ಮನುಷ್ಯನು ಕೃತಕವಾಗಿ ಮಾಡುವ ಹಿಂಸೆಗಿಂತ ಮಾನಸಿಕವಾಗಿ ಮಾಡುವ ಹಿಂಸೆಯೇ ಮಹಾಪಾಪವೆಂದು ಮಹಾವೀರರು ಹೇಳಿದ್ದಾರೆ. ಪ್ರತಿಯೊಂದು ಜೀವಿಯು ಬದುಕುವ ಹಕ್ಕನ್ನು ಹೊಂದಿದ್ದು ಕರುಣೆಯಿಂದ ಜೀವಿಗಳನ್ನು ನೋಡಬೇಕು” ಎಂದು ಉಪದೇಶಿಸಿದರು.

ಇದನ್ನೂ ಓದಿ: ರಿಪ್ಪನ್‌ಪೇಟೆಯ ಮೃತ ಯೋಧ ಸಂದೀಪನ ಪಾರ್ಥಿವ ಶರೀರದ ಮೆರವಣಿಗೆ; ಸಾವಿರಾರು ಜನ ಭಾಗಿ

“ಮನುಷ್ಯನ ಚಿಂತೆಗಳಿಗೆ ಅಂತ್ಯವಿಲ್ಲ. ಪ್ರತಿಕ್ಷಣ ಒಂದಿಲ್ಲೊಂದು ಸಮಸ್ಯೆಯ ಪರಿಹಾರದ ಬಗ್ಗೆ ಚಿಂತಿಸುತ್ತಾ ಇರುತ್ತಾನೆ. ಶಾಶ್ವತ ಪರಿಹಾರವನ್ನು ಬಯಸುತ್ತಾನೆ. ಮಹಾವೀರರು ಈ ಬಗ್ಗೆ ಅನೇಕಾಂತವಾದವೆಂಬ ವೈಚಾರಿಕ ಪದ್ಧತಿಯನ್ನು ಪರಿಚಯಿಸಿದರು. ಮನುಷ್ಯನು ಚಿಂತಿಸುವ ಕ್ರಮದಲ್ಲೇ ಚಿಂತೆಯ ಪರಿಹಾರವಿದೆ. ಸಮಸ್ಯೆಯ ಒಂದು ಮುಖವನ್ನು ಗ್ರಹಿಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಸಮಸ್ಯೆಯ ಸಮಗ್ರ ಚಿಂತನೆ ಮಾಡಿದಾಗ ಒಂದು ಪರಿಹಾರ ಸಿಗುತ್ತದೆ” ಎಂದು ಹೇಳಿದರು.

“ಈ ಪ್ರಪಂಚದಲ್ಲಿ ಸಾಮಾಜಿಕ ಅಸಮತೋಲನವೆಂಬುದು ಅನಾದಿಕಾಲದಿಂದಲೂ ಬಂದಿದೆ. ಇದರ ಪರಿಹಾರಕ್ಕಾಗಿ ಕಾಲ ಕಾಲಕ್ಕೆ ಮಹಾಪುರುಷರು ಪ್ರಾಮಾಣಿಕ ಪ್ರಯತ್ನ ಮಾಡಿರುತ್ತಾರೆ. ಮಹಾವೀರರ ಸಮಕಾಲೀನರಾದ ಗೌತಮ ಬುದ್ಧರು ಕೂಡ ಈ ಪ್ರಯತ್ನವನ್ನು ಮಾಡಿದ್ದರು. ಅದಕ್ಕಾಗಿ ಅಪರಿಗ್ರಹ ಎಂಬ ತತ್ವವನ್ನು ಮಹಾವೀರರು ಬೋಧಿಸಿದರು. ಮನುಷ್ಯನ ಆಸೆ-ಆಕಾಂಕ್ಷೆಗಳಿಗೆ ಮಿತಿಯಿಲ್ಲ. ನಿರಂತರ ಅಪೇಕ್ಷೆಯಿಂದ ಮಾನಸಿಕ ಅಸಮತೋಲನವಾಗುತ್ತದೆ. ಎಲ್ಲದಕ್ಕೂ ಮಿತಿಯಿರಬೇಕು. ತನ್ನ ಹಾಗೂ ಪರಿವಾರದ ಸುಖಿ ಜೀವನಕ್ಕಾಗಿ ಬೇಕಾಗುವಷ್ಟು ಸಂಪತ್ತನ್ನು ಹೊರತುಪಡಿಸಿ ಉಳಿದದನ್ನು ಸಮಾಜದ ವಿವಿಧ ಸೇವೆಗೆ ಬಳಸಬೇಕೆಂದು ಆದೇಶಿಸಿದರು. ಬೇಕೆನ್ನುವುದೇ ನರಕ, ಸಾಕೆನ್ನುವುದೇ ಮನುಜ ಮಾರ್ಗ. ಈ ಲೋಕದಲ್ಲಿ ಬದುಕಬೇಕೆಂದರೆ ನಾವೊಬ್ಬರೇ ಬದುಕಲು ಸಾಧ್ಯವಿಲ್ಲ. ನಮ್ಮ ಪರಿಸರದ ಸಹಕಾರ ಅಗತ್ಯ. ಪರಸ್ಪರ ಜೀವಿಗಳು ಉಪಕಾರ ಭಾವನೆಯಿಂದ ಬದುಕಬೇಕು.” ಎಂದು ಸ್ವಾಮಿಗಳು ಹೇಳಿದರು.

ಇದನ್ನೂ ಓದಿ: Ram Navami 2023: ಹೊಸನಗರ, ಚೆನ್ನಗಿರಿ, ಹೊನ್ನಾಳಿಯಲ್ಲಿ ಸಂಭ್ರಮದ ರಾಮನವಮಿ; ರಾಮನ ಹೆಸರೇ ಸ್ಫೂರ್ತಿ ಎಂದರು ರಾಘವೇಶ್ವರ ಶ್ರೀ

ಉಪದೇಶ ಮುಂದುವರಿಸಿದ ಅವರು, “ಮಹಾಪುರುಷರ ನಡೆ-ನುಡಿಗಳು ಯಾವಾಗಲೂ ಆದರ್ಶವಾಗಿರುತ್ತವೆ. ಗುಡಿ-ಗೋಪುರಗಳನ್ನು ಕಟ್ಟಿ ಪೂಜಿಸುವುದು ಅವರ ಆದರ್ಶ ಗುಣಗಳನ್ನು ಹೊಂದಲೆಂದೇ ವಿನಾ ನಮ್ಮ ಶಕ್ತಿಯ ಅನಾವರಣಕ್ಕಾಗಿ ಅಲ್ಲ. ಮಹೋತ್ಸವ ಜಯಂತಿಗಳು ಸದಾ ನಮ್ಮ ಚೈತನ್ಯ ಶಕ್ತಿಯನ್ನು ಜಾಗೃತಗೊಳಿಸಲು ನೆರವಾಗಬೇಕು ಅಲ್ಲದೇ ಆಡಂಬರವಾಗಬಾರದು. ಅವರ ಆಚರಣೆಗಳಿಂದ ನಮ್ಮಗಳ ಚಲನೆ (ಆಚರಣೆ) ಸರಿದಾರಿಗೆ ಬರಲೆಂಬುದೇ ಉದ್ದೇಶ” ಎಂದು ವಿವರಿಸಿದರು.

ನಂತರ ಮಂಗಳವಾದ್ಯಗಳೊಂದಿಗೆ ಭ|| ಮಹಾವೀರ ತೀರ್ಥಂಕರರ ಪಲ್ಲಕ್ಕಿ ಉತ್ಸವವು ಕ್ಷೇತ್ರದ ಭೋಗಾರ ಬಸದಿಯಿಂದ ರಥಬೀದಿಯ ಮೂಲಕ ಶ್ರೀಮಠಕ್ಕೆ ಮೆರವಣಿಗೆ ಬಂದು ತಲುಪಿತು. ಉತ್ಸವದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಮತ್ತು ಶ್ರೀಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಹಾಗೂ ಭಕ್ತಾದಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.

Exit mobile version