Site icon Vistara News

Vistara News Launch | ನಿಖರ ಸುದ್ದಿಗಳ ಪ್ರಸಾರಕ್ಕೆ ವಿಸ್ತಾರ ಗಮನಹರಿಸಲಿ: ಶಾಸಕ ಎಚ್.ಹಾಲಪ್ಪ ಹರತಾಳು

Vistara News Launch

ರಿಪ್ಪನ್‌ಪೇಟೆ: ಪಟ್ಟಣದ ಆಶ್ರಿತ ಸಭಾಭವನದಲ್ಲಿ ವಿಸ್ತಾರ ವಾಹಿನಿ ಕನ್ನಡ ಸಂಭ್ರಮ(Vistara News Launch) ಕಾರ್ಯಕ್ರಮ ಸಡಗರ ಸಂಭ್ರಮದಿಂದ ಭಾನುವಾರ ನೆರವೇರಿತು. ವಿಸ್ತಾರ ನ್ಯೂಸ್‌ ಚಾನೆಲ್‌ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಶಾಸಕ ಎಚ್.ಹಾಲಪ್ಪ ಹರತಾಳು ಉದ್ಘಾಟಿಸಿದರು.

ನಂತರ ಶಾಸಕ ಎಚ್.ಹಾಲಪ್ಪ ಹರತಾಳು ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಮಾಧ್ಯಮ ರಂಗಕ್ಕೆ ತನ್ನದೇ ಆದ ವಿಶೇಷ ಮಹತ್ವವಿದೆ. ಈಗಿನ ಕಾಲಘಟ್ಟದಲ್ಲಿ ಮಾಧ್ಯಮಗಳು ನಿಖರ ಸುದ್ದಿ ಪ್ರಸಾರ ಮಾಡುವ ಕಾರ್ಯವನ್ನು ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ವಿಸ್ತಾರ ಚಾನೆಲ್ ಗಮನ ಹರಿಸಿ ಒಳ್ಳೆಯ ಸುದ್ದಿ ಮಾಧ್ಯಮವಾಗಿ ಹೊರಬರಲಿ ಎಂದು ಆಶಿಸಿದರು.

ಬದಲಾದ ದಿನಮಾನಗಳಲ್ಲಿ ಎಲ್ಲವೂ ಕಲುಷಿತಗೊಂಡಿದೆ ಎನ್ನುವ ಚರ್ಚೆ ಇದೆ. ಇಂತಹ ಸವಾಲುಗಳ ನಡುವೆಯೂ ವಿಸ್ತಾರ ವಾಹಿನಿ ಲೋಕಾರ್ಪಣೆಗೊಂಡಿರುವುದು ನನಗೆ ವೈಯಕ್ತಿಕವಾಗಿ ಅತೀವ ಸಂತಸ ತಂದಿದೆ. ಹಲವಾರು ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ತಮ್ಮ ಕೌಶಲ್ಯ ಹಾಗೂ ಪ್ರತಿಭೆಯಿಂದ ಹಲವಾರು ಸಮಸ್ಯೆಗಳನ್ನು ಎದುರಿಸಿ ಸಂಸ್ಥೆಗಳನ್ನು ಉತ್ತುಂಗಕ್ಕೆ ಏರಿಸಿದ್ದ ಹರಿಪ್ರಕಾಶ್ ಕೋಣೆಮನೆ ನೇತೃತ್ವದ ವಿಸ್ತಾರ ನ್ಯೂಸ್ ರಾಜ್ಯದ ನಂಬರ್ 1 ಚಾನೆಲ್ ಆಗಲಿ ಎಂದು ಹಾರೈಸಿದರು.

ನಿಟ್ಟೂರು ಮಠದ ಶ್ರೀ ರೇಣುಕಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಈ ಜಗತ್ತಿನಲ್ಲಿ ದೃಶ್ಯ ಮಾಧ್ಯಮಗಳು ಬಹಳ ಸುಲಭವಾಗಿ ಜನರನ್ನು ತಲುಪುತ್ತಿವೆ. ಸಮಾಜದ ತಪ್ಪುಗಳನ್ನು ತಿದ್ದಿ ತೀಡುವ ಕೆಲಸ ಮಾಡುತ್ತಿವೆ. ಸಮಾಜದ ಸರ್ವತೋಮುಖ ಪ್ರಗತಿಗೆ ಶ್ರಮಿಸಬೇಕು. ಸಮಾಜದ ಮೂಲಭೂತ ಸೌಕರ್ಯಗಳ ಕುಂದುಕೊರತೆಗಳ ಬಗ್ಗೆ ಗಮನಹರಿಸುವ ಕೆಲಸ ವಿಸ್ತಾರ ಸುದ್ದಿ ಮಾಧ್ಯಮ ಮಾಡಲಿ. ಹಾಗೆಯೇ ವಿಸ್ತಾರ ನ್ಯೂಸ್ ವಿಸ್ತಾರವಾಗಿ ಬೆಳೆಯಲಿ ಎಂದರು.

ಬದಲಾದ ದಿನಮಾನಗಳಲ್ಲಿ ಹೆಚ್ಚು ವಾಹಿನಿಗಳು ನಮ್ಮ ನಡುವೆ ಇದೆ. ಯಾವ ವಾಹಿನಿ ಜನರಿಗೆ ಬೇಕಾದ ಸುದ್ದಿಗಳನ್ನು ಕೊಡುತ್ತಾ ಬರುತ್ತದೆಯೋ ಅಂತಹ ವಾಹಿನಿಗಳು ಹೆಚ್ಚು ಕಾಲ ಬದುಕುತ್ತದೆ. ವಿಸ್ತಾರ ವಾಹಿನಿ ಜನರ ನಡುವೆ ಇದ್ದು ಜನಪರವಾಗಿ ಯೋಚಿಸಲಿ ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಕೆ ರಾವ್, ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಬಿಜೆಪಿ ತಾಲೂಕು ಅಧ್ಯಕ್ಷ ಗಣಪತಿ ಬೆಳಗೋಡು, ಆಮ್ ಆದ್ಮಿ ಪಕ್ಷದ ತಾಲೂಕು ಅಧ್ಯಕ್ಷ ಗಣೇಶ ಸೂಗೋಡು, ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಬಿ.ಲಕ್ಷಣ ಗೌಡ, ತಾಲೂಕು ಕಸಾಪ ಅಧ್ಯಕ್ಷ ತ.ಮ. ನರಸಿಂಹ, ರೋಟರಿ ಅಧ್ಯಕ್ಷೆ ಪ್ರಮೀಳಾ ಎಲ್ ಗೌಡ, ಯುವ ಉದ್ಯಮಿ ಸಂತೋಷ್ ಹಾಜರಿದ್ದರು.

ವಿಸ್ತಾರ ಬ್ಯೂರೋ ಮುಖ್ಯಸ್ಥ ವಿವೇಕ್ ಮಹಾಲೆ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಕಾವ್ಯ ನಿರೂಪಿಸಿದರು. ವಿಸ್ತಾರ ನ್ಯೂಸ್ ವರದಿಗಾರರಾದ ಸೆಬಾಸ್ಟಿಯನ್ ಮ್ಯಾಥ್ಯೂಸ್‌, ಪುರುಷೋತ್ತಮ್ ಶ್ಯಾನುಭೋಗ್ ನಿಟ್ಟೂರು ಸ್ವಾಗತಿಸಿ, ವಂದಿಸಿದರು.

ಇದನ್ನೂ ಓದಿ | Vistara News Launch | ವಿಸ್ತಾರ ನ್ಯೂಸ್‌ ಜನರ ಧ್ವನಿಯಾಗಿ ಕೆಲಸ ಮಾಡಲಿ: ಅಭಿನವ ಚನ್ನಬಸವ ಸ್ವಾಮೀಜಿ

Exit mobile version