Site icon Vistara News

Sirsi News | ಬಸ್ಸಲ್ಲೇ ಬಿಟ್ಟಿದ್ದ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಾರಸುದಾರರ ಕೈಸೇರಿತು; ಪ್ರಾಮಾಣಿಕತೆ ಮೆರೆದ ಚಾಲಕ, ನಿರ್ವಾಹಕ

Gold returned ‌ KSRTC Bus

ಶಿರಸಿ: ಬಸ್‌ನಲ್ಲಿ ಬಿಟ್ಟು ಹೋಗಿದ್ದ 8 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣವನ್ನು ಮರಳಿ ಪ್ರಯಾಣಿಕರಿಗೆ ನೀಡಿ ಚಾಲಕ ಮತ್ತು ನಿರ್ವಾಹಕರು ಪ್ರಾಮಾಣಿಕತೆ ಮೆರೆದಿದ್ದಾರೆ.

ಶಿರಸಿ-ಹಾನಗಲ್ ಮಾರ್ಗವಾಗಿ ಸಂಚರಿಸುವ ಕೆಎಸ್‍ಆರ್‌ಟಿಸಿ ಬಸ್ಸಿನಲ್ಲಿ ಇಸಳೂರಿನಿಂದ ಕವಿತಾ ಹಾಗೂ ಅವರ ಪುತ್ರ ಹತ್ತಿದ್ದಾರೆ. ಆದರೆ, ಬ್ಯಾಗ್‌ನಲ್ಲಿ ಇದ್ದ ಚಿನ್ನಾಭರಣವನ್ನು ಬಿಟ್ಟು ಶಿರಸಿಯಲ್ಲಿ‌ ಇಳಿದಿದ್ದರು. ಆ ಬಳಿಕ ಬಸ್‌ ಶಿರಸಿ ಡಿಪೋಕ್ಕೆ ಬಂದಿತ್ತು. ಆಗ ಬಸ್‌ನಲ್ಲಿದ್ದ ಬ್ಯಾಗ್‌ ಅನ್ನು ನಿರ್ವಾಹಕ ಸೇವಾ ನಾಯ್ಕ ರಾಥೋಡ್, ಚಾಲಕ ವಿನೋದ ನಾಯ್ಕ ಗಮನಿಸಿದ್ದಾರೆ. ಬ್ಯಾಗ್ ಅನ್ನು ಪರಿಶೀಲನೆ ನಡೆಸಿದಾಗ ಚಿನ್ನಾಭರಣ ಇರುವುದು ಗೊತ್ತಾಗಿದೆ.

ಅದನ್ನು ಕವಿತಾ ಅವರಿಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ನಿರ್ವಾಹಕ ಹಾಗೂ ಚಾಲಕನ ಈ ಕಾರ್ಯಕ್ಕೆ ಡಿಪೋ ಡಿಸಿ ಶ್ರೀನಿವಾಸ್ ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | ಬೆಳಗಾವಿ ಅಧಿವೇಶನ | ಅಮಿತ್‌ ಶಾ ಆಮೇಲ್‌ ಬನ್ರಿ ಅಂತ ಹೇಳ್ಬೇಕಿತ್ತು? ಆ ದಮ್‌ ಇಲ್ಲ ಇವ್ರಿಗೆ: ಸದನ ಮೊಟಕಿಗೆ ಸಿದ್ದರಾಮಯ್ಯ ಕುಟುಕು

ಘಟನೆಯ ವಿವರ
ಬಸ್ ಶಿರಸಿ ಡಿಪೋ ಬಳಿ ಬಂದಾಗ ನಿರ್ವಾಹಕ ಸೇವಾ ನಾಯ್ಕ ರಾಥೋಡ್ ಅವರು ಕವಿತಾ ಅವರು ಕುಳಿತಿದ್ದ ಸೀಟಿನಲ್ಲಿ ಬ್ಯಾಗ್ ಇರುವುದನ್ನು ಗಮನಿಸಿದ್ದಾರೆ. ಬಳಿಕ ಚಾಲಕ ವಿನೋದ ನಾಯ್ಕ್ ಅವರ ಸಹಾಯ ಪಡೆದು ಪ್ರಯಾಣಿಕರ ಪತ್ತೆ ಹಚ್ಚಲು ಮುಂದಾದರು. ಜತೆಗೆ ಈ ಚಿನ್ನವಿದ್ದ ಬ್ಯಾಗ್‌ ಅನ್ನು ಸೀಝ್‌ ಮಾಡಿ ಇಡಲಾಗಿತ್ತು.

ಆಗಲೇ ಕವಿತಾ ಅವರು ಧಾರವಾಡದಲ್ಲಿ‌ ಬೇರೆ ಬಸ್ ಹತ್ತಿದ್ದು, ಅಲ್ಲಿಯೂ ಅವರಿಗೆ ತಮ್ಮ ಬ್ಯಾಗ್ ಬಿಟ್ಟಿರುವುದು ಗಮನಕ್ಕೆ ಬಂದಿಲ್ಲ. ಬೆಳಗಾವಿ ತಲುಪಿದಾಗ ಬ್ಯಾಗ್ ಇಲ್ಲದ್ದನ್ನು ಗಮನಿಸಿದರು. ಬಳಿಕ ಧಾರವಾಡದಲ್ಲಿ ಬಸ್ ನಿಲ್ದಾಣವನ್ನು ಸಂಪರ್ಕಿಸಿ ಸಿಸಿ ಕ್ಯಾಮೆರಾವನ್ನು ಪರಿಶೀಲನೆ ನಡೆಸಲಾಗಿದೆ. ಅಲ್ಲಿ ಬ್ಯಾಗ್‌ ಇಲ್ಲದಿದ್ದರಿಂದ ಕೂಡಲೇ ಹಾನಗಲ್ ಡಿಪೋಕ್ಕೆ ಕರೆ ಮಾಡಲಾಗಿದೆ. ಆಗ ಡಿಪೋ ಡಿಸಿ ಬ್ಯಾಗ್‌ ಇರುವ ಬಗ್ಗೆ ಮಾಹಿತಿ ನೀಡಿದ್ದರಿಂದ ಕವಿತಾ ಅಲ್ಲಿಗೆ ವಾಪಸ್‌ ಬಂದಿದ್ದಾರೆ. ಅವರಿಗೆ ಡಿಪೋದಲ್ಲಿ ಸೀಝ್ ಮಾಡಿ ಇಟ್ಟಿದ್ದ 8 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣವನ್ನು ಡಿಪೋ ಡಿಸಿ ಶ್ರೀನಿವಾಸ್ ಅವರ ಸಮ್ಮುಖದಲ್ಲಿ ಮರಳಿ ಪಡೆದರು.

ಇದನ್ನೂ ಓದಿ | Viral Story | ಇಳಿದ ತಾಪಮಾನ, ಮಂಜುಗಡ್ಡೆಯಾದ ನಯಾಗರ ಜಲಪಾತ

Exit mobile version