Site icon Vistara News

Koratagere News: ಬಾಣಂತಿಯರನ್ನು ಮನೆಯಿಂದ ಹೊರಗಿಡಕೂಡದು: ಮಹಿಳಾ ಆಯೋಗದ ಅಧ್ಯಕ್ಷೆ ವಾರ್ನಿಂಗ್‌

Womens Commission Chairperson Nagalakshmi Chaudhary visited Bisadihatti village

ಕೊರಟಗೆರೆ: ಬಾಣಂತಿಯರನ್ನು ಮನೆಯಿಂದ ಹೊರಗಡೆ ಇಡುವ ಕೆಟ್ಟ ಆಚರಣೆಯನ್ನು ಯಾವುದೇ ಕಾರಣಕ್ಕೂ ಮುಂದುವರಿಸಿಕೊಂಡು ಹೋಗದೆ ತಮ್ಮ ಮನೆಗಳಲ್ಲಿ ಬಾಣಂತಿ ಹಾಗೂ ಮಕ್ಕಳನ್ನು ಸುರಕ್ಷಿತವಾಗಿ ಆರೋಗ್ಯವಾಗಿರುವಂತೆ ನೋಡಿಕೊಳ್ಳಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ (Koratagere News) ತಿಳಿಸಿದರು.

ತಾಲೂಕಿನ ತೋವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಸಾಡಿಹಟ್ಟಿ ಗ್ರಾಮದ ಕೃಷ್ಣ ಕುಟೀರದಲ್ಲಿದ್ದ ಬಾಣಂತಿ ಮತ್ತು ಮಕ್ಕಳನ್ನು ಮನೆಗೆ ಸೇರಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಮೂಲಸೌಕರ್ಯಗಳನ್ನು ಒದಗಿಸುವುದು ತಮ್ಮ ಮೊದಲ ಆದ್ಯತೆಯಾಗಿದೆ. ಹೆಣ್ಣು ಮಕ್ಕಳು ವಿದ್ಯಾವಂತರಾಗಿ. ಆರೋಗ್ಯವಂತರಾಗಿ ಸಮಾಜದಲ್ಲಿ ಸಂತೋಷದಿಂದ ಬದುಕಬೇಕು ಎಂಬುದೇ ಆಯೋಗದ ಆಶಯವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Tourism Policy: ಹೊಸ ಪ್ರವಾಸೋದ್ಯಮ ನೀತಿ; ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮಾಸ್ಟರ್‌ ಪ್ಲ್ಯಾನ್‌ ರೂಪಿಸಲು ಸಿಎಂ ಸೂಚನೆ

ಒಂದು ತಿಂಗಳ ಹಿಂದಷ್ಟೇ ಈ ಗ್ರಾಮಕ್ಕೆ ಭೇಟಿ ನೀಡಿ ಕೃಷ್ಣ ಕುಟೀರದಲ್ಲಿದ್ದ ಬಾಣಂತಿ ಮತ್ತು ಮಕ್ಕಳ ಆರೋಗ್ಯವನ್ನು ವಿಚಾರಿಸಿ ಮರಳಿ ಅವರ ಮನೆಗೆ ಸೇರಿಸಲು ಅವರ ಕುಟುಂಬ ಮತ್ತು ಗ್ರಾಮಸ್ಥರ ಮನವೊಲಿಸಲಾಗಿತ್ತು. ಆದರೆ ಅವರ ಮನೆಗಳು ಮಳೆ ಬಂದರೆ ಸೋರುವ ಸ್ಥಿತಿಯಲ್ಲಿ ಇದ್ದುದರಿಂದ ಬಾಣಂತಿ ಮತ್ತು ಮಕ್ಕಳನ್ನು ಮನೆಗೆ ಸೇರಿಸಲು ಸಾಧ್ಯವಾಗಿರಲಿಲ್ಲ. ತಾಲೂಕು ಪಂಚಾಯಿತಿ, ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿ ಅವರೊಂದಿಗೆ ಚರ್ಚಿಸಿ ಗ್ರಾಮಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯ ಮಾಡುತ್ತಿದ್ದು ಬಾಣಂತಿಯರ ಮನೆಗೆ ಬೇಕಾದ ಸೌಕರ್ಯಗಳನ್ನು ಈಗಾಗಲೇ ಒದಗಿಸಲಾಗಿದೆ. ಕೃಷ್ಣ ಕುಟೀರದಲ್ಲಿದ್ದ ಬಾಣಂತಿಯರಾದ ಶಿವಮ್ಮ, ರಕ್ಷಿತಾ ಮತ್ತು ಶಾರದಾ ಅವರನ್ನು ಅವರ ಮನೆಗಳಿಗೆ ಸೇರಿಸಲಾಯಿತು ಎಂದು ಹೇಳಿದರು.

ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಅವರನ್ನು ಶಾಲೆಗೆ ಕಳಿಸುವಂತೆ ಗ್ರಾಮಸ್ಥರಿಗೆ ಅರಿವು ಮೂಡಿಸಿದರು. ಶಾಲಾ ಮಕ್ಕಳು ಪ್ರತಿನಿತ್ಯ ಓಡಾಡಲು ಸಾರಿಗೆ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.

ಇನ್ನು ಮುಂದೆ ಯಾರೂ ಸಹ ತಮ್ಮ ಮಕ್ಕಳು, ಬಾಣಂತಿಯರನ್ನು ಕೃಷ್ಣ ಕುಟೀರದಲ್ಲಿ ಬಿಡದಂತೆ ಮನವಿ ಮಾಡಿ, ಅದಕ್ಕೆ ಬೀಗ ಹಾಕಿ ಕೃಷ್ಣ ಕುಟೀರವನ್ನು ಗ್ರಂಥಾಲಯ ಮಾಡುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿ ನಾರಾಯಣ್ ಅವರಿಗೆ ಕೃಷ್ಣ ಕುಟೀರದ ಬೀಗದ ಕೈ ಅನ್ನು ಹಸ್ತಾಂತರಿಸಿದರು.

ಇದನ್ನೂ ಓದಿ: Ineligible BPL card: ಅನರ್ಹ ಬಿಪಿಎಲ್‌ ಕಾರ್ಡ್ ರದ್ದು; 20 ಲಕ್ಷಕ್ಕೂ ಅಧಿಕ ಪಡಿತರದಾರರಿಗೆ ಶಾಕ್, ಯಾರ ಕಾರ್ಡ್‌ ರದ್ದಾಗುತ್ತೆ?

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿ ಪವಿತ್ರ, ತಹಸೀಲ್ದಾರ್ ಮಂಜುನಾಥ್, ತಾ.ಪಂ. ಕಾರ್ಯನಿರ್ವಹಣಾ ಅಧಿಕಾರಿ ಅಪೂರ್ವ, ತೋವಿನಕೆರೆ ಗ್ರಾ.ಪಂ ಅಧ್ಯಕ್ಷೆ ಗಿರಿಜಮ್ಮ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version