Site icon Vistara News

Vijayapura News: ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಮಕ್ಕಳ ಸಾವು

Krishi Honda

ವಿಜಯಪುರ: ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅಡವಿ ಸಂಗಾಪೂರ ಗ್ರಾಮದಲ್ಲಿ (Vijayapura News) ನಡೆದಿದೆ. ಪ್ರಮೋದ್ ಬಿಲೂರ(12), ಸಂತೋಷ ಬಿಲೂರ ಮೃತರು. ಕೃಷಿ ಹೊಂಡದಲ್ಲಿ ಬಿದ್ದಿರುವ ತೆಂಗಿನಕಾಯಿ ತೆಗೆಯಲು ಹೋದಾಗ ಮಕ್ಕಳು ನೀರಿನಲ್ಲಿ ಮುಳುಗಿದ್ದಾರೆ. ಘಟನಾ ಸ್ಥಳಕ್ಕೆ ಬಬಲೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯುವತಿಯರನ್ನು ಚುಡಾಯಿಸುತ್ತಿದ್ದ ಮೂವರು ಯುವಕರ ಬಂಧನ

ಧಾರವಾಡ: ಯುವತಿಯರನ್ನು ಚುಡಾಯಿಸುತ್ತಿದ್ದ ಮೂವರು ಯುವಕರನ್ನು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್ ಗಿಟ್ಟಿಸಿಕೊಳ್ಳಲು ಯುವತಿಯರನ್ನು ಚುಡಾಯಿಸುತ್ತಿದ್ದ ಗ್ಯಾಂಗ್ ಅನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ನಗರದ ಅಹ್ಮದ್, ಜುನೈದ್ ಸೌದಾಗರ್, ಮನ್ಸೂರ್ ಶಿರಹಟ್ಟಿ ಎಂಬುವವರನ್ನು ಧಾರವಾಡ ಶಹರ ಠಾಣೆ ಪೊಲೀಸರು ಬಂಧಿಸಿ, ಬೈಕ್ ವಶಕ್ಕೆ ಪಡೆದಿದ್ದಾರೆ.

ಕಾಲೇಜು ಯುವತಿಯರು ರಸ್ತೆ ಬದಿ ಹೋಗುತ್ತಿದ್ದಾಗ ಬೈಕ್‌ನಲ್ಲಿ ಏಕಾಏಕಿ ಬಂದು ಜೋರಾಗಿ ಕಿರುಚುವ ಮೂಲಕ ಪುಂಡರು ಕಿರಿಕಿರಿ ಮಾಡುತ್ತಿದ್ದರು. ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪುಂಡರ ಗುಂಪು ಹಂಚಿಕೆ ಮಾಡುತ್ತಿತ್ತು. ಹೀಗಾಗಿ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ | Self Harming: ಪ್ರಿಯಕರ ದೂರವಾಗಿದ್ದಕ್ಕೆ ಪ್ರಾಣ ಬಿಟ್ಟ ಯುವತಿ

ಯುವಕರನ್ನು ಬಂಧಿಸಿದ ಬಳಿಕ ಬಿಫೋರ್ ಹಾಗೂ ಆಫ್ಟರ್ ಎನ್ನುವ ಶಿರ್ಷಿಕೆ ನೀಡಿ ವಿಡಿಯೊವೊಂದನ್ನು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ಟ್ವೀಟ್ ಮಾಡಿ ಪುಂಡರನ್ನು ಬಂಧಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

ಸಾರಿಗೆ ಬಸ್‌ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ; ಪ್ರಯಾಣಿಕರಿಂದ ವ್ಯಕ್ತಿಗೆ ಧರ್ಮದೇಟು

ಮಂಡ್ಯ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಗೆ ಪ್ರಯಾಣಿಕರಿಂದ ಧರ್ಮದೇಟು ಬಿದ್ದಿರುವ ಘಟನೆ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಬಳಿಕ ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.

ಕಲ್ಯಾಣಿಯಲ್ಲಿ ಮುಳುಗಿ ಯುವಕ ಸಾವು

ಶಿವಮೊಗ್ಗ: ಕಲ್ಯಾಣಿಯಲ್ಲಿ ಮುಳುಗಿ ಯುವಕ ಮೃತಪಟ್ಟಿರುವ ಘಟನೆ ಶಿಕಾರಿಪುರದ ಹುಚ್ಚರಾಯಸ್ವಾಮಿ ದೇಗುಲ ಬಳಿ ನಡೆದಿದೆ. ಪಟ್ಟಣದ ರಂಗನಾಥಪುರ ಕಾಲೋನಿಯ ಮಂಜುನಾಥ್ ಮೃತ ಯುವಕ. ಶನಿವಾರ ತಡರಾತ್ರಿ ಮನೆಯಿಂದ ಹೊರಹೋಗಿದ್ದ ಮಂಜುನಾಥ್ ಕಲ್ಯಾಣಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಯುವಕ ಕೆಲ ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಶಿಕಾರಿಪುರ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version