Site icon Vistara News

Uttara Kannada News: ಸರ್ಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಲುಪಿಸಿ: ಕೆ.ಜಯಪ್ರಕಾಶ್ ಹೆಗಡೆ

Meeting by Backward Classes Commission Chairman K Jayaprakash Hegde

ಕಾರವಾರ: ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು (Government schemes) ಸಂಬಂಧಪಟ್ಟ ಇಲಾಖೆಗಳು ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರಪಡಿಸಿ ಜನರಿಗೆ ಯೋಜನೆಗಳ ಮಾಹಿತಿ (Information) ತಲುಪಿಸಬೇಕು, ಸರ್ಕಾರ ನಿಗದಿಪಡಿಸಿರುವ ಅಂಕಿ ಅಂಶಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿನ ಅರ್ಜಿಗಳು ಸ್ವೀಕೃತವಾಗುವ ರೀತಿಯಲ್ಲಿ ಕ್ರಮವಹಿಸಬೇಕು ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗಡೆ ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ್ ಕಾರ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ವಿವಿಧ ಇಲಾಖೆಗಳು ಕೈಗೊಂಡ ಕಾರ್ಯಚಟುವಟಿಕೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಮಾಹಿತಿಯನ್ನು ಪಡೆದುಕೊಂಡರು.

ಇದನ್ನೂ ಓದಿ: Scheme vs Scam: ಜನಪರ ಸ್ಕೀಂ ಕೊಟ್ಟಿದ್ದು ಬಿಜೆಪಿ; ಸ್ಕ್ಯಾಮ್ ಕೊಟ್ಟಿದ್ದು ಕಾಂಗ್ರೆಸ್: ಸಿ.ಟಿ.ರವಿ ವಾಗ್ದಾಳಿ

ಜಿಲ್ಲೆಯಲ್ಲಿ ಮೊಗೇರ ಸಮುದಾಯದವರಿಗೆ ಪ್ರವರ್ಗ 1 ಜಾತಿ ಪ್ರಮಾಣ ಪತ್ರ ನೀಡಬೇಕೋ ಅಥವಾ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕೋ ಎಂಬುವುದು ಅಧಿಕಾರಿಗಳಲ್ಲಿ ಸಾಕಷ್ಟು ಗೊಂದಲಗಳಿದ್ದು, ಮೈಸೂರು ವಿಭಾಗಾಧಿಕಾರಿಗಳ ನೇತೃತ್ವದ ತಂಡ ಮೊಗೇರ ಸಮಾಜಕ್ಕೆ ಹಂಚಿಕೆ ಮಾಡಬೇಕಾದ ಜಾತಿ ಪ್ರಮಾಣ ಪತ್ರದ ಕುರಿತು ಅಂತಿಮ ವರದಿಯನ್ನು ಈವರೆಗೂ ಸರ್ಕಾರಕ್ಕೆ ಸಲ್ಲಿಸಿರುವುದಿಲ್ಲ. ಹೀಗಾಗಿ ಅಧಿಕಾರಿಗಳು ಕಾಲ ಕಾಲಕ್ಕೆ ನ್ಯಾಯಾಲಯ ನೀಡುವ ಆದೇಶಗಳನ್ನು ಪರಿಶೀಲಿಸಿ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದರು.

ಹಾಗೆಯೇ ಕಲ್ಲು ವಡ್ಡರ ಮತ್ತು ಮಣ್ಣು ವಡ್ಡರ ಜಾತಿಗೆ ಸೇರಿದ ಸಮುದಾಯದವರಿಗೂ ಕೂಡ ಸಮರ್ಪಕವಾಗಿ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಕಲ್ಲು ವಡ್ಡರ ಮತ್ತು ಮಣ್ಣು ವಡ್ಡರ ಸಮುದಾಯದ ಜನರಿಗೆ ಅವರ ಪೂರ್ವಜರಿಗೆ ನೀಡಿರುವ ಪ್ರಮಾಣ ಪತ್ರ ಆಧರಿಸಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ: Health News: ನಗರದಲ್ಲೂ ಗ್ರಾಮೀಣ ವೈದ್ಯರ ಸೇವೆ ಬಳಸಿಕೊಳ್ಳಲು ಕಾಯ್ದೆಗೆ ತಿದ್ದುಪಡಿ: ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌

ಬಳಿಕ ದೇವರಾಜ ಅರಸ್ ಅಭಿವೃದ್ಧಿ ನಿಗಮದ ಕುರಿತು ಮಾಹಿತಿ ಪಡೆದ ಅಧ್ಯಕ್ಷರು ಪ್ರಸಕ್ತ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಮಂಜೂರಾದ ಬೋರೆವೆಲ್‌ಗಳು ಸರಿಯಾಗಿ ಜನರಿಗೆ ತಲುಪುವಂತಾಗಬೇಕು. ಜನರಿಗೆ ಈ ಬಗ್ಗೆ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸರ್ಕಾರ ನಿಗದಿ ಪಡಿಸಿರುವಷ್ಟು ಗುರಿಯನ್ನು ಸಾಧಿಸಬೇಕು. ಫಲನುಭವಿಗಳಿಗೆ ಬೋರೆವೆಲ್ ಹಂಚಿಕೆಯಾದಾಗ ಬೋರೆವೆಲ್ ಗಳು ಯಶಸ್ವಿಯಾಗಿರುವ ಬಗ್ಗೆ ಛಾಯಾಚಿತ್ರದೊಂದಿಗೆ ವರದಿ ನೀಡಬೇಕು ಎಂದರು,

ಬಳಿಕ ಹಿಂದುಳಿದ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸತೀಶ್, ಅಯೋಗದ ಅಧ್ಯಕ್ಷರಿಗೆ ಇಲಾಖೆಯ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಒಟ್ಟು 101 ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಬಾಲಕ ಹಾಗೂ ಬಾಲಕಿಯರ ವಿದ್ಯಾರ್ಥಿ ನಿಲಯಗಳಿದ್ದು ಇವುಗಳಲ್ಲಿ 65 ಸ್ವಂತ ಕಟ್ಟಡ, 26 ಬಾಡಿಗೆ ಕಟ್ಟಡ, 10 ಉಚಿತ ಕಟ್ಟಡ ಇರುವುದರ ಬಗ್ಗೆ ಮಾಹಿತಿ ನೀಡಿದರು. 2022-23 ಎಸ್ಎಸ್ಎಲ್‌ಸಿಯಲ್ಲಿ 88.96% ರಷ್ಟು ಹಾಗೂ ಪಿಯುಸಿಯಲ್ಲಿ 89.71%ರಷ್ಟು ಫಲಿತಾಂಶ ಸಾಧನೆ ಮಾಡಿದೆ. ಹಾಗೆಯೇ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಸಿಂಧುತ್ವ ಪ್ರಮಾಣ ಪತ್ರ ಹಂಚಿಕೆ ಬಗ್ಗೆ ಮಾಹಿತಿ ನೀಡಿ ಜಿಲ್ಲೆಯಲ್ಲಿ ಒಟ್ಟು 149 ಅರ್ಜಿಗಳು ಸ್ವೀಕೃತವಾಗಿದ್ದು ಅದರಲ್ಲಿ 138 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಮತ್ತು 4 ಅರ್ಜಿಗಳನ್ನು ವಿವಿಧ ಕಾರಣಗಳಿಂದ ತಿರಸ್ಕೃತಗೊಳಿಸಲಾಗಿದೆ. 7 ಅರ್ಜಿಗಳು ಬಾಕಿ ಇದ್ದು ಶೀಘ್ರದಲ್ಲಿ ಅವುಗಳನ್ನು ವಿಲೇವಾರಿ ಮಾಡಲಾಗುವುದು ಎಂದರು.

ಹಾಗೆಯೇ ಜಿಲ್ಲೆಯಲ್ಲಿ 1 ರಿಂದ 10 ನೇ ತರಗತಿಯ ಅಲೆಮಾರಿ ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿ ಮಾಹೇವಾರು 200 ರೂ. ಗಳನ್ನು 10 ತಿಂಗಳ ಅವಧಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದರು.

ಗ್ರಾಮೀಣ ಭಾಗದ ಹಾಗೂ ವ್ಯಾಸಂಗ ಕಾಲೇಜಿನಿಂದ ಕನಿಷ್ಟ 5 ಕಿ.ಮೀ. ದೂರ ವಾಸವಾಗಿರುವ ಮೆಟ್ರಿಕ್ ನಂತರದ ವಿವಿಧ ಕೋರ್ಸುಗಳಲ್ಲಿ ಸರ್ಕಾರಿ/ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಲಯದ ಸೌಲಭ್ಯ ಸಿಗದೇ ಇರುವ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ, ಊಟ ಮತ್ತು ವಸತಿ ಸಹಾಯ ಯೋಜನೆಯಡಿ ಮಾಸಿಕ ರೂ. 1500/- ರಂತೆ ಶೈಕ್ಷಣಿಕ ಅವಧಿಯ 10 ತಿಂಗಳಿಗೆ ರೂ. 15,000/- ಸಹಾಯಧನವನ್ನು ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಆನ್‌ಲೈನ್‌ ಮೂಲಕ ಜಮಾ ಮಾಡಲಾಗುತ್ತಿದೆ ಎಂದರು.
ಬಾಲಕಿಯರು ತಮ್ಮನ್ನು ತಾವು ಸ್ವಯಂ ರಕ್ಷಣೆ ಮಾಡಿಕೊಳ್ಳುವ ಹಾಗೂ ದೌರ್ಜನ್ಯ ಮತ್ತು ಶೋಷಣೆಗಳ ವಿರುದ್ದ ಹೊರಾಡಲು ವಿದ್ಯಾರ್ಥಿಗಳಿಗೆ ಒಬವ್ವ ಆತ್ಮರಕ್ಷಣೆ ಕರಾಟೆ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.

ಇದನ್ನೂ ಓದಿ: Kadaba News: ಚಿನ್ನದ ಅಂಗಡಿ ಉದ್ಘಾಟನೆ ದಿನವೇ ಶವವಾಗಿ ಪತ್ತೆಯಾದ ಯುವಕ

ಸಭೆಯ ನಂತರ ವಿವಿಧ ಸಮುದಾಯಗಳಿಂದ ಅಹವಾಲು ಸ್ವೀಕರಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಅರುಣಕುಮಾರ್, ಶಾರದಾ ನಾಯಕ, ಕಲ್ಯಾಣಕುಮಾರ್, ರಾಜಶೇಖರ್, ಎಲ್ಲ ತಾಲೂಕಿನ ತಹಸೀಲ್ದಾರರು ಹಾಗೂ ಜಿಲ್ಲಾ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version