Site icon Vistara News

Uttara Kannada News: ಅಳಿವಿನಂಚಿನಲ್ಲಿರುವ ಹಾರ್ನ್‌ಬಿಲ್ ಪಕ್ಷಿ ಪ್ರಬೇಧವನ್ನು ಸಂರಕ್ಷಿಸುವುದು ಎಲ್ಲರ ಕರ್ತವ್ಯ; ಸ್ಮಿತಾ ಬಿಜ್ಜೂರ್

Hornbill Festival-2024 Programme in Dandeli

ಕಾರವಾರ: ಅಳಿವಿನಂಚಿನಲ್ಲಿರುವ ಹಾರ್ನ್‌ಬಿಲ್‌ (ಮಂಗಟ್ಟೆ) ಪಕ್ಷಿಗಳ ಪ್ರಭೇದವನ್ನು ಸಂರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಪ್ರಚಾರ ಮತ್ತು ಐಸಿಟಿ ವಿಭಾಗದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತಾ ಬಿಜ್ಜೂರ್ (Uttara Kannada News) ಹೇಳಿದರು.

ಅರಣ್ಯ ಇಲಾಖೆ ಕೆನರಾ ವೃತ್ತ ಶಿರಸಿ, ಹಳಿಯಾಳ ಅರಣ್ಯ ವಿಭಾಗ ವತಿಯಿಂದ ಶನಿವಾರ ದಾಂಡೇಲಿಯ ಸರ್ಕಾರಿ ಮರಮುಟ್ಟುಗಳ ಕೋಠಿ ಆವರಣದಲ್ಲಿರುವ ಹಾರ್ನ್‌ಬಿಲ್‌ ಭವನದಲ್ಲಿ ನಡೆದ ಹಾರ್ನ್‌ಬಿಲ್ ಹಬ್ಬ-2024 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಹಾರ್ನ್‌ಬಿಲ್‌ನ 9 ಪ್ರಭೇದಗಳಿದ್ದು, ಅದರಲ್ಲಿ 4 ಪ್ರಭೇದಗಳು ದಾಂಡೇಲಿಯಲ್ಲಿರುವುದು ವಿಶೇಷ. ಈ ಮಂಗಟ್ಟೆ ಪಕ್ಷಿಯು ಅಳಿವಿನಂಚಿನಲ್ಲಿರುವುದರಿಂದ ಈ ಪ್ರಭೇದದ ಸಂರಕ್ಷಣೆಯ ಜೊತೆಗೆ ವಿವಿಧ ಪಕ್ಷಿ ಸಂಕುಲವನ್ನು ಸಂರಕ್ಷಿಸಲು ಅರಣ್ಯ ಇಲಾಖೆ ವತಿಯಿಂದ ಅನೇಕ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದರು.

ಮಂಗಟ್ಟೆ ಪಕ್ಷಿಯ ಸಂರಕ್ಷಣೆಗಾಗಿ ದಾಂಡೇಲಿಯ ಸುತ್ತಮುತ್ತ 50 ಕಿ.ಮೀ ಪ್ರದೇಶವನ್ನು ಸಂರಕ್ಷಿತ ಅರಣ್ಯ ಪ್ರದೇಶ ಎಂದು ಗುರುತಿಸಲಾಗಿದೆ. ಈ ಪಕ್ಷಿಯು ಅರಣ್ಯ ವೃದ್ಧಿಸುವಲ್ಲಿ ಸಹಕಾರಿಯಾಗಿರುವುದರಿಂದ ಹಾರ್ನಬಿಲ್ ಪಕ್ಷಿಯನ್ನು ಅರಣ್ಯದ ರೈತ ಎಂದು ಕರೆಯಲಾಗತ್ತದೆ. ಜನಸಂಖ್ಯೆ ಹೆಚ್ಚಳದಿಂದ ಕಾಡು ನಾಶವಾಗುತ್ತಿದೆ. ಇದರಿಂದ ವನ್ಯಜೀವಿಗಳ ಸಂತತಿ ನಶಿಸುತ್ತಿದ್ದು, ಅರಣ್ಯ ಸಂರಕ್ಷಣೆ ಜತೆಗೆ ವನ್ಯ ಜೀವಿಗಳ ಸಂರಕ್ಷಣೆಯನ್ನೂ ಮಾಡಬೇಕಾಗಿದೆ ಎಂದರು.

ಇದನ್ನೂ ಓದಿ: Cricket News : 18 ವರ್ಷಗಳ ವೃತ್ತಿ ಕ್ರಿಕೆಟ್​ಗೆ ವಿದಾಯ ಹೇಳಿದ ಭಾರತ ತಂಡದ ಮಾಜಿ ಆಟಗಾರ

ಕೆನರಾ ವೃತ್ತ ಶಿರಸಿಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಮಾತನಾಡಿ, ದಾಂಡೇಲಿಯಲ್ಲಿ 2018 ರಿಂದ ಸತತವಾಗಿ ಹಾರ್ನ್‌ಬಿಲ್ ಹಬ್ಬವನ್ನು ಆಚರಿಸುತ್ತಾ ಬರಲಾಗುತ್ತಿದೆ. ದಾಂಡೇಲಿಯಲ್ಲಿ ನಾಲ್ಕು ಪ್ರಭೇದದ ಹಾರ್ನ್‌ಬಿಲ್ ಪಕ್ಷಿಗಳಿವೆ. ಅದ್ದರಿಂದ ಸರ್ಕಾರವು ಈ ಪ್ರದೇಶವನ್ನು ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿದೆ ಎಂದರು.

ಹಾರ್ನ್‌ಬಿಲ್ ಹಬ್ಬದ ಮೂಲಕ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಪ್ರವಾಸಿಗರಿಗೆ ಮಂಗಟ್ಟೆ ಪಕ್ಷಿಯ ಮಹತ್ವ, ಅದರ ವಾಸ ಸ್ಥಳ ಹಾಗೂ ಅದರ ಸಂತತಿ ಉಳಿಸುವ ನಿಟ್ಟಿನಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದರು.

ಕಳೆದ ವರ್ಷ ಶಿರಸಿಯನ್ನು ಪಕ್ಷಿ ಸಂರಕ್ಷಣಾ ಪ್ರದೇಶವೆಂದು ಘೋಷಿಸಲಾಗಿದೆ, ಅಷ್ಟೇ ಅಲ್ಲದೇ ಅತ್ತಿಬೆಲೆಯನ್ನು ಪಕ್ಷಿಯ ಸಂರಕ್ಷಣಾ ಪ್ರದೇಶವೆಂದು ಘೋಷಣೆ ಮಾಡಿರುವುದು ನಮ್ಮ ದೇಶದ ಹೆಮ್ಮೆ ಎಂದು ಹೇಳಬಹುದು. ಸರ್ಕಾರವು ಪ್ರಾಣಿ ಪಕ್ಷಿಗಳ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ವಿವಿಧ ಪ್ರದೇಶಗಳನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಣೆ ಮಾಡಿದೆ ಎಂದರು.

ಇದನ್ನೂ ಓದಿ: Elephant Attack: ಕಲ್ಲಂಗಡಿ ತಿನ್ನಲು ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ, ಕೂದಲೆಳೆ ಅಂತರದಲ್ಲಿ ಪಾರಾದ ದಂಪತಿ

ರಾಜ್ಯ ಮತ್ತು ದೇಶದ ವಿವಿಧ ರಾಜ್ಯಗಳಿಂದ ಪಕ್ಷಿ ಪ್ರಿಯರು ಆಗಮಿಸಿದ್ದು ಈಗಾಗಲೇ 120ಕ್ಕೂ ಹೆಚ್ಚು ಪಕ್ಷಿ ಪ್ರಿಯರು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಇಂದು ಮತ್ತು ನಾಳೆ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರಗೋಷ್ಠಿ ನಡೆಯಲಿದ್ದು ಅದರಲ್ಲಿ ಪಕ್ಷಿ ವಾಸ ಸ್ಥಳಗಳ ಸಂರಕ್ಷಣೆ ಬಗ್ಗೆ, ಪಕ್ಷಿಗಳ ಸಂತಾನೋತ್ಪತ್ತಿ ಹೆಚ್ಚಿಸುವ ಬಗ್ಗೆ ಮತ್ತು ಅರಣ್ಯಕ್ಕೆ ತೊಂದರೆಯಾಗದ ರೀತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸುವುದು ಹೇಗೆ ಎಂಬುವುದರ ಬಗ್ಗೆ ವಿಚಾರ ವಿನಿಮಯವಾಗಲಿದೆ ಎಂದರು.

ಇದೇ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಮುರ್ಡೇಶ್ವರದ ನೇತ್ರಾಣಿ, ಮಲೆನಾಡು, ಕರಾವಳಿ ಪ್ರದೇಶ, ಬಯಲುಸೀಮೆ, ಅತ್ತಿಬೆಲೆ ಪಕ್ಷಿಧಾಮ ಒಳಗೊಂಡಂತೆ ರಾಜ್ಯ ಹಾಗೂ ಅಂತರರಾಜ್ಯ ಪಕ್ಷಿ ತಜ್ಞರ ಮೂಲಕ ಪಕ್ಷಿಗಳ ಗಣತಿ ಮಾಡಲಾಗಿದ್ದು, ಅದರಲ್ಲಿ ವಿವಿಧ ಪ್ರಬೇಧದ 296 ಪಕ್ಷಿಗಳ ಸಂತತಿ ಜಿಲ್ಲೆಯಲ್ಲಿರುವುದು ಕಂಡುಬಂದಿದೆ ಎಂದರು.

ಹಳಿಯಾಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ್ ಕುಮಾರ್ ಕೆ.ಸಿ. ಪ್ರಾಸ್ತಾವಿಕವಾಗಿ ಮಾತನಾಡಿ, ದಾಂಡೇಲಿ ಪ್ರಾಕೃತಿಕ ಶ್ರೇಣಿಯ ಪ್ರತೀಕವಾಗಿರುವ ಮುಕುಟ ಪ್ರಾಯ ಪಕ್ಷಿಯೇ ಹಾರ್ನ್‌ಬಿಲ್‌ ಪಕ್ಷಿ. ಪ್ರತಿವರ್ಷ ಕರ್ನಾಟಕ ಅರಣ್ಯ ಇಲಾಖೆ ಹಳಿಯಾಳ ಪ್ರಾದೇಶಿಕ ಅರಣ್ಯ ವಿಭಾಗವು ಈ ಪಕ್ಷಿಯ ಮಹತ್ವವನ್ನು ಹಾಗೂ ಪ್ರಾತಿನಿಧ್ಯವನ್ನು ಪ್ರಚುರಪಡಿಸಲು ಹಾರ್ನ್‌ಬಿಲ್‌ ಹಬ್ಬವನ್ನು ವಿದ್ಯುಕ್ತವಾಗಿ ಆಚರಿಸುತ್ತದೆ. ದಾಂಡೇಲಿ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಒಟ್ಟು ನಾಲ್ಕು ಬಗೆಯ ಹಾರ್ನಬಿಲ್ ಪಕ್ಷಿಗಳಿದ್ದು ಅವುಗಳ ಹೆಸರು ಮಲಬಾರ್ ಗ್ರೇ ಹಾರ್ನ್‌ಬಿಲ್‌, ಮಲಬಾರ್ ಪೈಡ್ ಹಾರ್ನಬಿಲ್, ಗ್ರೇಟ್ ಹಾರ್ನ್‌ಬಿಲ್‌, ಇಂಡಿಯನ್ ಗ್ರೇ ಹಾರ್ನ್‌ಬಿಲ್‌. ಇವುಗಳ ಸ್ವರ್ಗ ತಾಣವೇ ದಾಂಡೇಲಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ವಿಶೇಷ ಸಾಧನೆಗೈದ ಉಪ ವಲಯ ಅರಣ್ಯಾಧಿಕಾರಿಗಳಾದ ಸಂತೋಷ ಗಲಾಸ್, ಆನಂದ ಬಸವನಾಳ, ಗಸ್ತು ಅರಣ್ಯ ಪಾಲಕ ಶಂಕರಾನಂದ ಜಡ್ಡಿಮಾನಿ, ಚಂದ್ರಕಾಂತ ಹುಂದ್ಲೇಕರ್ ಅವರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ: Yashasvi Jaiswal : ಶತಕ ಬಾರಿಸಿದ ಬಳಿಕ ಜೈಸ್ವಾಲ್​ ನಿವೃತ್ತಿ ಪಡೆದಿದ್ದು ಯಾಕೆ?

ಕಾರ್ಯಕ್ರಮದಲ್ಲಿ ಬೆಳಗಾವಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ, ಧಾರವಾಡ ಮುಖ್ಯ ಆರಣ್ಯ ಸಂರಕ್ಷಣಾಧಿಕಾರಿ ಯತೀಶ್ ಕುಮಾರ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ರವಿಶಂಕರ ಸಿ, ಜಿ.ಪಿ.ಹರ್ಷಬಾನು, ಯೋಗೀಶ ಸಿ.ಕೆ ಹಾಗೂ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಶಿಂಧೆ ನಿಲೇಶ ದೆವಬಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version