Site icon Vistara News

Child Death : ಆಟವಾಡುತ್ತಾ ನೀರಿನ ತೊಟ್ಟಿಗೆ ಬಿದ್ದ 3 ವರ್ಷದ ಮಗು ಸಾವು

Girl Drowned in sirasi

ಶಿರಸಿ: ಆಟವಾಡುತ್ತಾ ಮಗುವೊಂದು ಅಚಾನಕ್‌ ಆಗಿ ನೀರಿನ ತೊಟ್ಟಿಗೆ ಬಿದ್ದು (Child Death) ಮೃತಪಟ್ಟಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಲಕ್ಕೊಳ್ಳಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.

ಇಟ್ಟಿಗೆ ಭಟ್ಟಿಯ ನೀರಿನ ತೊಟ್ಟಿಗೆ ಬಿದ್ದು ಮೂರು ವರ್ಷದ ಮಾನ್ವಿತಾ ಮೃತಪಟ್ಟ ದುರ್ದೈವಿ. ಮಾನ್ವಿತಾ ತಾಯಿ ರೂಪಾ ಇಟ್ಟಿಗೆ ಭಟ್ಟಿಯಲ್ಲಿ ಕೆಲಸಗಾರರಾಗಿದ್ದರು. ಮಾನ್ವಿತಾಳಿಗೆ ಜ್ವರ ಇದ್ದ ಕಾರಣಕ್ಕೆ ರೂಪಾ ಮಗಳನ್ನು ಜತೆಗೆ ಕರೆದುಕೊಂಡು ಕೆಲಸಕ್ಕೆ ಬಂದಿದ್ದರು.

ಮಾನ್ವಿತಾಳಿಗೆ ಔಷಧಿ ಕೊಟ್ಟು ಅಲ್ಲೆ ಇದ್ದ ಅಜ್ಜನ ಬಳಿ ಆಟವಾಡಲು ಬಿಟ್ಟು, ರೂಪಾ ತಮ್ಮ ಕೆಲಸಕ್ಕೆ ಮುಂದಾಗಿದ್ದಾರೆ. ಈ ವೇಳೆ ಆಟವಾಡುತ್ತಾ ನೀರಿನ ತೊಟ್ಟಿ ಬಳಿ ಬಂದು ಅಚಾನಕ್‌ ಆಗಿ ಮಾನ್ವಿತಾ ಬಿದ್ದಿದ್ದಾಳೆ. ನೀರಿನಲ್ಲಿ ಮುಳುಗಿ ಮಾನ್ವಿತಾ ಮೃತಪಟ್ಟಿದ್ದಾಳೆ. ತುಂಬಾ ಸಮಯದವರೆಗೆ ಮಗು ಕಾಣದಿದ್ದಾಗ ಅನುಮಾನಗೊಂಡು ತೊಟ್ಟಿಯಲ್ಲಿ ನೋಡಿದಾಗ ಮೃತದೇಹ ಪತ್ತೆಯಾಗಿದೆ.

ಇಟ್ಟಿಗೆ ಭಟ್ಟಿಗಳಲ್ಲಿ ಯಮರೂಪಿ ನೀರಿನ ತೊಟ್ಟಿಗಳು ಇದ್ದರೂ ಅಧಿಕಾರಿಗಳು ಕಂಡು ಕಾಣದಂತಿದ್ದಾರೆ. ತಾಲೂಕಿನಲ್ಲಿ ಮತ್ತೆ ಹೆಜ್ಜೆಗೊಂದರಂತೆ ಅನಧಿಕೃತ ಇಟ್ಟಿಗೆ ಭಟ್ಟಿಗಳು ಹುಟ್ಟಿಕೊಂಡಿವೆ. ಸ್ಥಳಕ್ಕೆ ಬಂದಿದ್ದ ಮುಂಡಗೋಡ ತಹಸೀಲ್ದಾರ್ ಶಂಕರ್ ಗೌಡಿ ವಿರುದ್ಧ ಸಾರ್ವಜನಿಕರು ಕಿಡಿಕಾರಿದರು. ಕೂಡಲೇ ಅನಧಿಕೃತ ಇಟ್ಟಿಗೆ ಭಟ್ಟಿಗಳನ್ನು ಮುಚ್ಚಿಸಬೇಕೆಂದು ಮನವಿ ಮಾಡಿದರು.

ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

ಇದನ್ನೂ ಓದಿ: Road Accident : ಓಂಶಕ್ತಿಗೆ ತೆರಳುತ್ತಿದ್ದ ಬಸ್‌ ಪಲ್ಟಿ; ಮಾಲಾಧಾರಿಗಳು ಗಂಭೀರ

ಆಟವಾಡುತ್ತಾ ಸಂಪ್‌ಗೆ ಬಿದ್ದ 5 ವರ್ಷದ ಬಾಲಕಿ ಸಾವು

ಮಕ್ಕಳ ವಿಚಾರದಲ್ಲಿ ಪೋಷಕರು ಎಷ್ಟೇ ಎಚ್ಚರವಾಗಿದ್ದರೂ ಸಾಲದು. ಮಕ್ಕಳನ್ನು ಆಟವಾಡಲು ಬಿಟ್ಟಾಗ (Child death) ಅವರ ಮೇಲೆ ಒಂದು ಕಣ್ಣು ಇಟ್ಟಿರಬೇಕು. ಇಲ್ಲದಿದ್ದರೆ ಅವಘಡಗಳು ಸಂಭವಿಸುತ್ತವೆ. ಸದ್ಯ ಆಟವಾಡುತ್ತಿದ್ದಾಗ ನೀರಿನ ಸಂಪ್‌ಗೆ ಬಿದ್ದು (Drowned in water) ಬಾಲಕಿಯೊಬ್ಬಳು ಮೃತಪಟ್ಟ ದಾರುಣ ಘಟನೆ ಬೆಂಗಳೂರಿನ ಬಾಗಲಗುಂಟೆಯಲ್ಲೂ ನಡೆದಿದೆ. ಆಯಿದಾ (5) ಮೃತ ಬಾಲಕಿ. ಬಾಡಿಗೆದಾರರು ನೀರಿನ ಸಂಪ್‌ನ ಕ್ಯಾಪ್ ಓಪನ್ ಮಾಡಿ ಒಳ ಹೋಗಿದ್ದರು. ಇದೇ ವೇಳೆ ಆಯಿದಾ ತಾಯಿ ಆಟವಾಡಲು ಬಿಟ್ಟು ಮನೆಯೊಳಗೆ ಹೋಗಿದ್ದಾಳೆ.

ಮನೆ ಮುಂದೆ ಆಟವಾಡುತ್ತಿದ್ದಾಗ ಆಯಿದಾ ಆಯತಪ್ಪಿ ಸಂಪ್‌ನಲ್ಲಿ ಬಿದ್ದಿದ್ದಾಳೆ. ಸಂಪ್‌ನಲ್ಲಿ ನೀರು ತುಂಬಿ ಇದ್ದಿದ್ದರಿಂದ ಆಯಿದಾ ಉಸಿರುಗಟ್ಟಿ ಮೃತಪಟ್ಟಿದ್ದಾಳೆ. ತುಂಬಾ ಸಮಯದವರೆಗೆ ಬಾಲಕಿ ಕಾಣದಿದ್ದಾಗ ಅನುಮಾನಗೊಂಡು ಸಂಪ್‌ನಲ್ಲಿ ನೋಡಿದಾಗ ಮೃತದೇಹ ಪತ್ತೆಯಾಗಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ.

ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ

ರಾಮನಗರದ ರೈಲ್ವೆ ನಿಲ್ದಾಣ ಸಮೀಪ ರೈಲಿನ ಹಳಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಯುವಕ ಗುರುತು ಪತ್ತೆಯಾಗಿಲ್ಲ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಾಮನಗರ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version