Site icon Vistara News

Dr Vijay Sankeshwar Media School: ಭವಿಷ್ಯ ರೂಪಿಸುವ ಪತ್ರಿಕೆಗಳಿಗೆ ಭವಿಷ್ಯವಿದೆ: ಹರಿಪ್ರಕಾಶ್‌ ಕೋಣೆಮನೆ

Hariprakash Konemane

ಯಲ್ಲಾಪುರ: ಪತ್ರಿಕೆಗಳಿಗೆ ಭವಿಷ್ಯ ಇಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ, ಅದು ಸುಳ್ಳು. ಭವಿಷ್ಯವನ್ನು ರೂಪಿಸುವ ಪತ್ರಿಕೆಗಳಿಗೆ ಭವಿಷ್ಯ ಇದೆ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ್‌ ಕೋಣೆಮನೆ ಹೇಳಿದರು.

ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ (Dr Vijay Sankeshwar Media School) ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಈಗ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳ ಸ್ಪರ್ಧೆ ಇದೆ. ಕೇವಲ ಆಗಿಹೋದ ಘಟನೆಗಳನ್ನು ವರದಿ ಮಾಡಿದರೆ ಪತ್ರಿಕೆಗಳು ಉಳಿಯಲು ಸಾಧ್ಯವಿಲ್ಲ. ನಾಳಿನ ಆಲೋಚನೆಗಳಿಗೆ, ಆಗುಹೋಗುಗಳಿಗೆ ಓದುಗರ ಮನಸ್ಸನ್ನು ಅಣಿಗೊಳಿಸುವ, ತೆರೆದಿಡುವ ಕೆಲಸ ಆಗಬೇಕು. ಆಗ ಓದುಗರು ಪತ್ರಿಕೆಯನ್ನು ತಾವಾಗಿ ಕೇಳಿ ಪಡೆಯುವ ವಾತಾವರಣ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ | Raja Marga Column : ಗೆದ್ದವರ ಕಥೆಗಿಂತಲೂ ಸೋತವರ ಕಥೆಗಳೇ ಹೆಚ್ಚು ಕುತೂಹಲಕಾರಿ!

ಪತ್ರಿಕೋದ್ಯಮ ಒಂದು ಜವಾಬ್ದಾರಿಯುತ ಕೆಲಸ. ಪತ್ರಕರ್ತರಿಗೆ ಜೀವನದ ಕಷ್ಟಸುಖಗಳ ಅನುಭವ ಇರಬೇಕು. ಆಗ ಉತ್ತಮ ರೀತಿಯಲ್ಲಿ ವೃತ್ತಿ ನಿಭಾಯಿಸಬಹುದು. ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಮೂಲಕ ಉತ್ತಮ, ವೃತ್ತಿಪರ ಪತ್ರಕರ್ತರನ್ನು ರೂಪಿಸುವ ಉದ್ದೇಶ ಹೊಂದಲಾಗಿದೆ ಎಂದರು.

ವಿಶ್ರಾಂತ ಪ್ರಾಚಾರ್ಯ ಬೀರಣ್ಣ ನಾಯಕ ಮೊಗಟಾ ಮಾತನಾಡಿ, ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಸಕಲ ಸೌಲಭ್ಯ ಹೊಂದಿದ್ದು, ಮಾದರಿಯಾಗಿದೆ. ಇಲ್ಲಿ ಉತ್ತಮ ಪತ್ರಕರ್ತರು ರೂಪಿತವಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮೀಡಿಯಾ ಸ್ಕೂಲ್ ಪ್ರಾಂಶುಪಾಲ ನಾಗರಾಜ ಇಳೆಗುಂಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮೀಡಿಯಾ ಸ್ಕೂಲ್‌ನಲ್ಲಿ ನೀಡಲಾಗುವ ವೈವಿಧ್ಯಮಯ ಕಲಿಕೆಯ ಚಿಂತನೆಗಳನ್ನು ತೆರೆದಿಟ್ಟರು.

ಇದನ್ನೂ ಓದಿ | Raja Marga Column : ತಲೆಗೆ ಹುಳ ಬಿಟ್ಕೊಬೇಡಿ, ಕ್ಲಿಯರ್‌ ಮೈಂಡ್‌ ಇದ್ರೆ ಮಾತ್ರ ಗೆಲ್ತೀರಿ!

ಪತ್ರಿಕೋದ್ಯಮ ಉಪನ್ಯಾಸಕರಾದ ವಿನಯ ಹೆಗಡೆ, ಸ್ಫೂರ್ತಿ ಹೆಗಡೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ನಾಗರಾಜ ಪಟಗಾರ, ಕವಿತಾ ರಾಜನಾಳ ಮತ್ತು ಮೇಘನಾ ಆಚಾರಿ ಅನಿಸಿಕೆ ವ್ಯಕ್ತಪಡಿಸಿದರು. ವಿನಯ ನಾಯ್ಕ ಸ್ವಾಗತಿಸಿದರು. ಸೌಂದರ್ಯ ನಾಯ್ಕ ನಿರ್ವಹಿಸಿದರು. ವಾಣಿ ಭಟ್ ವಂದಿಸಿದರು.

Exit mobile version