Site icon Vistara News

ಬೆಂಗಳೆ ಓಣಿಕೆರೆ ನೆಹರೂ ಪ್ರೌಢ ಶಾಲೆಯಲ್ಲಿ ಪ್ರಬಂಧ ಸ್ಪರ್ಧೆ; ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

ಪ್ರಬಂಧ ಸ್ಪರ್ಧೆ

ಶಿರಸಿ: ಇಲ್ಲಿಯ ಪ್ರಜ್ವಲ ಟ್ರಸ್ಟ್ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ತಾಲೂಕಿನ ಬೆಂಗಳೆ ಓಣಿಕೆರೆ ನೆಹರೂ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಯುವ ಪೀಳಿಗೆಗೆ ಅನುಕೂಲವಾಗುವಂತೆ ದೇಶ ಸೇವೆಯ ನಾನಾ ಮಜಲುಗಳ ಬಗ್ಗೆ ವಿಸ್ತಾರವಾಗಿ ತಿಳುವಳಿಕೆ ನೀಡುವ ಉದ್ದೇಶದಿಂದ ʼಅಗ್ನಿಪಥ್ʼ ವಿಷಯದ ಬಗ್ಗೆ ಶಾಲೆಯ 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು.

ಇದನ್ನೂ ಓದಿ | Azadi Ka Amrit Mahotsav | ಬ್ರಿಟಿಷರ ವಿರುದ್ಧ ಸಿಂಹಗರ್ಜನೆ‌ ಮಾಡಿದ್ದ ಮುಂಡರಗಿ ಭೀಮರಾಯ!

ಕಾರ್ಯಕ್ರಮದ ನಿರ್ಣಾಯಕರಾದ ಮಾಜಿ ಸೈನಿಕ ವಿನಾಯಕ ಧೀರನ್ ಅವರು ʼಅಗ್ನಿಪಥ್ʼ ಯೋಜನೆ ಹಾಗೂ ದೇಶ ಸೇವೆಯ ಹಲವಾರು ಮಜಲುಗಳ ಬಗ್ಗೆ ಸವಿಸ್ತಾರ ಮಾಹಿತಿಯನ್ನು ನೀಡಿದರು. ಅಲ್ಲದೆ ಸಾಧಕ ಬಾಧಕಗಳ ಬಗ್ಗೆ ಸಂವಾದವನ್ನೂ ಏರ್ಪಡಿಸಲಾಗಿತ್ತು. ಬಹುಮಾನದ ಪ್ರಾಯೋಜಕತ್ವವನ್ನು ಲಕ್ಷ್ಮಿಚಾರಿಟಬಲ್‌ ಟ್ರಸ್ಟ್‌ನ ಮಂಗಲಾ ನಾಯ್ಕ ಅವರು ವಹಿಸಿದ್ದರು.

9ನೇ ತರಗತಿಯ ವಿದ್ಯಾರ್ಥಿಗಳಾದ ಕುಮಾರಿ ಅನನ್ಯ ಪಟಗಾರ ಪ್ರಥಮ, ಕುಮಾರ ಸಚಿನ್ ಕೆರಿಯಾ ಗೌಡ ದ್ವಿತೀಯ, ಗಣೇಶ ರಾಮಚಂದ್ರ ಕಬ್ಬೇರ ತೃತೀಯ ಸ್ಥಾನವವನ್ನು ಪಡೆದಿದ್ದಾರೆ. 10ನೇ ತರಗತಿಯ ವಿದ್ಯಾರ್ಥಿಗಳಾದ ದಿವ್ಯಾ ಮಂಜುನಾಥ ಗದ್ವಾಲ, ಚೈತ್ರಾ ಆರ್. ಕಬ್ಬೇರ, ರಜತ್ ಆರ್. ನಾಯ್ಕ, ಕುಮಾರೇಶ್ವರ ಅ.ನಾಯ್ಕ, ವೈಷ್ಣವಿ ಶೂಲ್ಯ ಮಡಿವಾಳ ಸಮಾಧಾನಕರ ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಸನ್ನ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶ ಸೇವೆ ಸಲ್ಲಿಸಬೇಕೆಂಬ ಆಸೆಯುಳ್ಳವರಿಗೆ ಅಗ್ನಿಪಥ್ ಒಂದು ಮಹತ್ವದ ಯೋಜನೆಯಾಗಿದ್ದು, ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಟ್ರಸ್ಟಿನ ಗೌರವ ಸದಸ್ಯ ವೆಂಕಟೇಶ ಹೆಗಡೆ ಬೆಂಗಳೆ ಸ್ವಾಗತಿಸಿದರು. ಅಧ್ಯಕ್ಷೆ ಬಿಂದು ಹೆಗಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಟ್ರಸ್ಟ್ ಪದಾಧಿಕಾರಿಗಳಾದ ರಘುನಾಯ್ಕ ವಂದನಾರ್ಪಣೆ ಮಾಡಿದರು. ಕಾರ್ಯದರ್ಶಿ ಸುಮಾ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ಕಾವ್ಯಾ ಸಂಗಡಿಗರು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ಎಚ್‌.ರಾಜಪ್ಪ ಹಾಗೂ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಹಾಗೂ ಮಕ್ಕಳು ಪಾಲ್ಗೊಂಡಿದ್ದರು.

ಇದನ್ನೂ ಓದಿ | Amrit mahotsav | ಕೊಲ್ಹಾಪುರದಲ್ಲಿ ಕ್ರಾಂತಿಯ ಕಿಡಿ ಹೊತ್ತಿಸಿದ ಚೀಮಾ ಸಾಹೇಬ್

Exit mobile version