Site icon Vistara News

Sirsi News: ಬನವಾಸಿಯ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನಕ್ಕೆ ಡಿಜಿಟಲ್ ತಂತ್ರಜ್ಞಾನದ ಮೆರುಗು

Special Digital Technology for Saalumarada Thimmakka Park at Banavasi, Installation of Information Boards

ಭಾಸ್ಕರ್ ಆರ್. ಗೆಂಡ್ಲ, ವಿಸ್ತಾರ ನ್ಯೂಸ್

ಶಿರಸಿ( ಬನವಾಸಿ): ಕನ್ನಡದ ಪ್ರಥಮ ರಾಜಧಾನಿ ಉ.ಕ ಜಿಲ್ಲೆ ಬನವಾಸಿಯ (Banavasi) ವಿಶೇಷತೆಯನ್ನು ಇಲ್ಲಿಯ ಗಿಡಮರಗಳು ಸಾರುತ್ತಿವೆ. ಬನವಾಸಿಯ ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೀಗ (Saalumarada Thimmakka Park) ವಿಶೇಷ ಡಿಜಿಟಲ್ ತಂತ್ರಜ್ಞಾನದ (Digital Technology) ಮೆರುಗು ಬಂದಿದ್ದು, ಅರಣ್ಯ ಇಲಾಖೆ (Forest Department) ನಡೆಸಿರುವ ಈ ಹೊಸ ಪ್ರಯೋಗಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಬನವಾಸಿ ಭಾಗದಲ್ಲಿ ಸಾಕಷ್ಟು ಸಂಗತಿಗಳು ಅಡಕವಾಗಿದ್ದು, ಅವೆಲ್ಲದರ ಮಾಹಿತಿ ಇಲ್ಲಿನ ಈ ವೃಕ್ಷೋದ್ಯಾನವೊಂದಕ್ಕೆ ತೆರಳಿದರೆ ಸಿಗುತ್ತವೆ. ಉದ್ಯಾನವನದಲ್ಲಿ ಅಳವಡಿಸಿದ ಬೋರ್ಡ್ ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸಾಕು ಅನೇಕ ವಿವರ ಲಭ್ಯವಾಗುತ್ತದೆ.

ಶಿರಸಿಯ ದಾಸನಕೊಪ್ಪ ಮಾರ್ಗದಂಚಿನಲ್ಲಿ 2017ರಲ್ಲಿ ಆರಂಭವಾದ ಈ ವೃಕ್ಷೋದ್ಯಾನದ ವಾಕಿಂಗ್ ಪಥದಂಚಿನಲ್ಲಿ 14ಕ್ಕೂ ಹೆಚ್ಚು ಬೋರ್ಡ್‍ಗಳನ್ನು ಅಳವಡಿಸಲಾಗಿದೆ. ಈ ಪ್ರತಿ ಬೋರ್ಡ್‍ಗಳಲ್ಲಿ ಕದಂಬರ ರಾಜಧಾನಿಯ ವಿಶೇಷತೆಯ ವಿವರಗಳಿವೆ. ಹೀಗೆ ಪ್ರತಿ ಬೋರ್ಡ್‍ಗಳನ್ನು ಓದುತ್ತಾ ಹೋಗಲು ಸಾಧ್ಯವಾಗದಿದ್ದರೆ ಯಾವುದಾದರೂ ಒಂದು ಬೋರ್ಡ್‍ನಲ್ಲಿನ ಕ್ಯೂಆರ್ ಕೋಡ್‍ನ್ನು ಮೊಬೈಲ್‍ನಲ್ಲಿ ಸ್ಕ್ಯಾನ್ ಮಾಡಿದರೆ ಎಲ್ಲ ಬೋರ್ಡ್‍ಗಳಲ್ಲಿನ ವಿವರವೂ ಲಭ್ಯವಾಗುವುದು ವಿಶೇಷ.

ಇದನ್ನೂ ಓದಿ: Money Guide : ಗೃಹ ಸಾಲದ ಬಡ್ಡಿ ಲೆಕ್ಕಾಚಾರ ಮಾಡೋದು ಹೇಗೆ? ಇಲ್ಲಿದೆ ಸರಳ ವಿವರಣೆ

ಇದರಿಂದ ಮಾಹಿತಿ ಬರೆದುಕೊಳ್ಳುವ ಅವಶ್ಯಕತೆ ಇಲ್ಲದಾಗುತ್ತದೆ. ವೆಬ್ ಪೇಜ್‍ಗಳಲ್ಲಿ ನೋಡಬೇಕಿಲ್ಲ. ಎಲ್ಲ ಮಾಹಿತಿ ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ಮೊಬೈಲ್‍ನಲ್ಲಿ ದೊರೆಯುತ್ತದೆ. ಈ ಎಲ್ಲ ಕಾರಣದಿಂದ ಬನವಾಸಿ ವೀಕ್ಷಣೆಗೆ ನಾಡಿನ ವಿವಿಧೆಡೆಯಿಂದ ಬರುವ ಪ್ರವಾಸಿಗರು ಈ ಉದ್ಯಾನವನಕ್ಕೆ ಬಂದು ವೀಕ್ಷಿಸುತ್ತಾರೆ. ಅಲ್ಲದೇ ಪ್ರತಿನಿತ್ಯ ಬೆಳಗ್ಗೆ ಸಂಜೆ ಸುತ್ತಮುತ್ತಲಿನವರ ವಾಕಿಂಗ್ ಪಥವೂ ಇದಾಗಿದೆ.

ಉದ್ಯಾನವನದ ವಿಶೇಷತೆ ಏನು?

ಸುಮಾರು 18 ಎಕರೆ ಪ್ರದೇಶ ವ್ಯಾಪ್ತಿ ಹೊಂದಿರುವ ಈ ವೃಕ್ಷೋದ್ಯಾನದ ವಾಕಿಂಗ್ ಪಥದಂಚಿನಲ್ಲಿರುವ 25 ಜಾತಿಯ ಗಿಡಗಳಿಗೆ ಅವುಗಳ ಹೆಸರು, ವಿಶೇಷತೆ, ವೈಜ್ಞಾನಿಕ ಹೆಸರುಗಳ ಫಲಕಗಳನ್ನು ಹಾಕಲಾಗಿದೆ. ಇಲ್ಲಿ ಮಕ್ಕಳ ಉದ್ಯಾನವನ, ಚಿಟ್ಟೆಗಳ ಉದ್ಯಾನವನ, ತೂಗುಯ್ಯಾಲೆಗಳು, ಪಾರಾಗೋಲ್‍ಗಳು, ಧ್ಯಾನಕೇಂದ್ರಗಳಿವೆ. ಕದಂಬ ಗಿಡಗಳನ್ನು ಪ್ರತ್ಯೇಕವಾಗಿ ಬೆಳೆಸಲಾಗಿದೆ. ಹಂತಹಂತವಾಗಿ ಉದ್ಯಾನವನ ವಿಸ್ತರಣೆ, ಅಭಿವೃದ್ಧಿ ಆಗುತ್ತಿದೆ ಎನ್ನುತ್ತವೆ ಅರಣ್ಯ ಇಲಾಖೆ ಮೂಲಗಳು.

ಬನವಾಸಿಯ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ.

ಇದನ್ನೂ ಓದಿ: Women’s Reservation Bill: ಮಹಿಳಾ ಮೀಸಲಾತಿ ಬಿಲ್‌ಗೆ ಸೋನಿಯಾ ಗಾಂಧಿ ಬೆಂಬಲ; ರಾಜೀವ್‌ ಗಾಂಧಿಗೆ ಕ್ರೆಡಿಟ್‌

ಬೋರ್ಡ್‍ಗಳಲ್ಲಿ ಏನಿದೆ?

ಕದಂಬರ ರಾಜ್ಯದ ಸ್ಥಾಪಕ ಮಯೂರವರ್ಮ ಕ್ರಿ.ಶ 325-346 ಅವಧಿಯಲ್ಲಿ ಬನವಾಸಿಯನ್ನು ರಾಜಧಾನಿಯಾಗಿಸಿಕೊಂಡಿದ್ದನು. ಬೌದ್ಧ ಧರ್ಮ ಪ್ರಸಾರಕ್ಕೆ ಅಶೋಕ ಚಕ್ರವರ್ತಿ ಕಳುಹಿಸಿದ ಬೌದ್ಧ ಬಿಕ್ಷು ರಖ್ಖಿತನು ಬನವಾಸಿ ಪ್ರಾಂತ್ಯಕ್ಕೆ ಬಂದಿರುವುದು, ಸಿಂಹಳದ ಬೌದ್ಧ ಬಿಕ್ಷುಗಳೂ ಸಹ ಧರ್ಮ ಪ್ರಸಾರಕ್ಕೆ ಬಂದಿರುವ ಮಾಹಿತಿ ಫಲಕ ಹಾಕಲಾಗಿದೆ. ಇದರ ಜತೆಯಲ್ಲಿ ಬನವಾಸಿ ವೈಶಿಷ್ಟ್ಯತೆ, ಬನವಾಸಿ ಕೋಟೆ, ಬನವಾಸಿ ಮಧುಕೇಶ್ವರ ದೇವಾಲಯ, ಮಧುಕೇಶ್ವರ ದೇವಸ್ಥಾನದ ವಾಸ್ತುಶಿಲ್ಪ, ಕದಂಬೋತ್ಸವ, ಕದಂಬ ಮರದ ಬಗೆಗಿನ ವಿವರವನ್ನು ಚಿತ್ರಸಹಿತ ದೊಡ್ಡದಾದ ಬೋರ್ಡ್‍ಗಳನ್ನು ಹಾಕಿರುವುದು ವಿಶೇಷ. ಈ ಎಲ್ಲ ಬೋರ್ಡ್‍ಗಳಲ್ಲೂ ಕ್ಯೂಆರ್ ಕೋಡ್ ಅಳವಡಿಸಲಾಗಿದೆ.

ಬನವಾಸಿಯ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನದಲ್ಲಿನ ಮಾಹಿತಿಯ ಫಲಕ.

ಇದನ್ನೂ ಓದಿ: Viral News: ಶಾಲೆ ತೊರೆದು 37 ವರ್ಷಗಳ ಬಳಿಕ ಪಿಯುಸಿ ಪರೀಕ್ಷೆ ಬರೆದ ಆಟೋ ಡ್ರೈವರ್‌!

ಕದಂಬರ ರಾಜಧಾನಿಯಲ್ಲಿ ಕದಂಬ ವಿಶೇಷತೆಯನ್ನು ಒಳಗೊಂಡಿರುವ ಉದ್ಯಾನವನ ಮಾಡಬೇಕು ಎಂಬುದು ಸಿಸಿಎಫ್ ವಸಂತ ರೆಡ್ಡಿ ಅವರ ಸೂಚನೆಯಾಗಿತ್ತು. ಹೀಗಾಗಿಯೇ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನದಲ್ಲಿ ಕದಂಬರ ನಡಿಗೆ ಎಂದು ಹೆಸರಿಟ್ಟು ವಾಕ್‍ಪಥ ನಿರ್ಮಿಸಿದ್ದೇವೆ. ಅಂಚಿನಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಈ ಬೋರ್ಡ್‍ಗಳನ್ನು ಅಳವಡಿಸಲಾಗಿದೆ. ಕದಂಬ ನಡಿಗೆ ಉದ್ಘಾಟನೆ ಇನ್ನಷ್ಟೇ ಆಗಬೇಕಿದೆ ಎಂದು ವಲಯ ಅರಣ್ಯಾಧಿಕಾರಿ ವರದರಂಗನಾಥ್. ಜಿ.ಎಚ್. ಮಾಹಿತಿ ನೀಡಿದ್ದಾರೆ.

Exit mobile version