Site icon Vistara News

Uttara Kannada News: ಗ್ರಾಮಸ್ಥರನ್ನು ಕಡೆಗಣಿಸಿ ಕದಂಬೋತ್ಸವಕ್ಕೆ ಆಕ್ಷೇಪ

Banavasi Kadambotsava Preliminary meeting at banavasi

ಬನವಾಸಿ: ರಾಜ್ಯವು ಬರಗಾಲದಿಂದ ತತ್ತರಿಸುತ್ತಿದ್ದು, ಜನ ಕುಡಿಯುವ ನೀರಿನ ಸಮಸ್ಯೆಯಿಂದ ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಬನವಾಸಿ (Banavasi) ಹಾಗೂ ಸುತ್ತಮುತ್ತಲಿನ ಜನರನ್ನು ಕಡೆಗಣಿಸಿ, ತರಾತುರಿಯಲ್ಲಿ ಕದಂಬೋತ್ಸವ (Kadambotsava) ನಡೆಸುತ್ತಿರುವುದು ರಾಜ್ಯ ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಗ್ರಾಮದ ಮುಖಂಡ ಮೃತ್ಯುಂಜಯ ದಾವಣಗೆರೆ (Uttara Kannada News) ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಶನಿವಾರ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕದಂಬೋತ್ಸವ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ನಿಯಮಾವಳಿ ಪ್ರಕಾರ ಡಿಸೆಂಬರ್ ಕೊನೆಯ ವಾರದಲ್ಲಿ ಕದಂಬೋತ್ಸವನ್ನು ನಡೆಸಬೇಕು. ಉತ್ಸವದ ನಿಯಮಾವಳಿಗಳನ್ನು ಗಾಳಿಗೆ ತೂರಿ ಇಂತಹ ಬೇಸಿಗೆಯಲ್ಲಿ ಕದಂಬೋತ್ಸವ ಮಾಡುತ್ತಿರುವುದು ಸರಿಯಲ್ಲ.

ಇದನ್ನೂ ಓದಿ: Bengaluru News: ವಿಜಯಪುರದಲ್ಲಿ ರಫ್ತು ಆಧಾರಿತ ಆಹಾರ ಸಂಸ್ಕರಣ ಘಟಕ, ಸಚಿವ ಎಂ.ಬಿ.ಪಾಟೀಲ್ ಮಹತ್ವದ ಸಭೆ

ಅಲ್ಲದೇ ಅತ್ಯುನ್ನತ ಪಂಪ ಪ್ರಶಸ್ತಿಯನ್ನು ಕದಂಬೋತ್ಸವದಲ್ಲಿ ಪ್ರದಾನ ಮಾಡದೇ ಯಾವುದೋ ಕಲಾಮಂದಿರದಲ್ಲಿ ನೀಡಿರುವುದು ಬನವಾಸಿಗರಿಗೆ ಮಾಡಿದ ಅಗೌರವವಾಗಿದೆ ಎಂದು ಆರೋಪಿಸಿದ ಅವರು, ಜನರ ಉತ್ಸವ ಆಗಬೇಕಾಗಿರುವ ಕದಂಬೋತ್ಸವ ಅಧಿಕಾರಿಗಳ ಉತ್ಸವವಾಗಿ ಮಾರ್ಪಾಡಾಗಿರುವುದು ಬೇಸರ ತಂದಿದೆ ಎಂದು ಆರೋಪಿಸಿದ ಅವರು, ಬನವಾಸಿಗರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಈ ರೀತಿಯಲ್ಲಿ ಕದಂಬೋತ್ಸವ ಆಚರಿಸುತ್ತಿರುವುದು ರಾಜ್ಯ ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದರು.

ಇದನ್ನೂ ಓದಿ: ಮ್ಯಾಟ್ರಿಮೋನಿ ಸೇರಿ ಹಲವು ಆ್ಯಪ್‌ಗಳಿಗೆ ಗೂಗಲ್‌ ಕೊಕ್;‌ ಕೇಂದ್ರದ ಮುಂದಿನ ನಡೆ ಏನು?

ಮುಖಂಡ ಅರವಿಂದ ಶೆಟ್ಟಿ ಮಾತನಾಡಿ, ಗ್ರಾಮಸ್ಥರನ್ನು ಕಡೆಗಣಿಸಿ ನಡೆಸುತ್ತಿರುವ ಕದಂಬೋತ್ಸವ ಕಾರ್ಯಕ್ರಮಕ್ಕೆ ಬನವಾಸಿಗರ ಬೆಂಬಲವಿಲ್ಲ. ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಿರುವುದರಿಂದ ಯಾವುದೇ ಶಾಲಾ ಮಕ್ಕಳನ್ನು ಕದಂಬೋತ್ಸವದಲ್ಲಿ ಬಳಸಿಕೊಳ್ಳಬಾರದು. ಕದಂಬೋತ್ಸವದಲ್ಲಿ ಶಾಲಾ ಮಕ್ಕಳನ್ನು ಬಳಸಿದ್ದು ಕಂಡು ಬಂದಲ್ಲಿ ಕಾರ್ಯಕ್ರಮದಲ್ಲಿ ಕಪ್ಪು ಭಾವುಟ ಪ್ರದರ್ಶಿಸಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಪ್ರಮುಖರಾದ ಹಾಲೇಶ ಕೆರೊಡಿ ಮಾತನಾಡಿ, ಬನವಾಸಿಯ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಸಾರ್ವಜನಿಕವಾಗಿ ಕದಂಬೋತ್ಸವ ಕಾರ್ಯಕ್ರಮ ನಡೆಸುತ್ತ ಬಂದಿದ್ದೆವೆ. ಆದರೆ ಈಗ ಸರ್ಕಾರದಿಂದ ರಾಜ್ಯ ಮಟ್ಟದ ಉತ್ಸವವಾಗಿ ಕದಂಬೋತ್ಸವ ನೆರವೇರುತ್ತಿದೆ. ಅದರೆ ಅಭಿವೃದ್ಧಿ ಮಾತ್ರ ಕಾಣುತ್ತಿಲ್ಲ. ಬರಗಾಲ ಎದುರಾಗಿರುವುದರಿಂದ ಈ ಉತ್ಸವವನ್ನು ರದ್ದು ಮಾಡಿ ಕದಂಬೋತ್ಸವಕ್ಕೆ ನೀಡಿರುವ 2 ಕೋಟಿ ಅನುದಾನ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಾಗಿತ್ತು ಎಂದರು.

ಶಿರಸಿ ಗ್ರೇಡ್ 2 ತಹಸೀಲ್ದಾರ್‌ ಶ್ರೀಕೃಷ್ಣ ಕಾಮಕರ್ ಮಾತನಾಡಿ, ಕದಂಬೋತ್ಸವದ ನಡೆಸಲು ತಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ. ಪೂರ್ವ ಸಿದ್ದತೆಯಲ್ಲಿ ಕೆಲವೊಂದು ಲೋಪಗಳಾಗಿವೆ. ಸರ್ಕಾರದ ಆದೇಶವನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಲಾಗುವುದು. ಕದಂಬೋತ್ಸವ ಯಶಸ್ವಿಗೆ ಎಲ್ಲರೂ ಕೈಜೋಡಿಸೋಣ ಎಂದರು.

ಇದನ್ನೂ ಓದಿ: Anant Ambani: ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ಗೆ ಬಾಲಿವುಡ್‌ ಸೆಲೆಬ್ರಿಟಿಗಳು ಪೋಸ್‌ ಕೊಟ್ಟಿದ್ದು ಹೀಗೆ!

ಈ ವೇಳೆ ಗ್ರೇಡ್ 2 ತಹಸೀಲ್ದಾರ್‌ ರಮೇಶ ಹೆಗಡೆ, ಗ್ರಾಪಂ ಅಧ್ಯಕ್ಷೆ ಬೀಬಿ ಆಯಿಷಾ ಖಾನ್, ಉಪಾಧ್ಯಕ್ಷ ಸಿದ್ದವೀರೇಶ ನೆರಗಲ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹನುಮಂತ ಛಲವಾದಿ, ಕಂದಾಯ ನಿರೀಕ್ಷಕಿ ಮಂಜುಳಾ ನಾಯ್ಕ್, ಪ್ರಮುಖರಾದ ಸಿದ್ದಲಿಂಗಪ್ಪ ಉಗ್ರಾಣದ, ಪ್ರಕಾಶ ಬಂಗ್ಲೆ, ಗಣೇಶ ಸಣ್ಣಲಿಂಗಣ್ಣನ್ನವರ, ಚನ್ನಬಸಪ್ಪ ಕಂತ್ರಾಜಿ, ಉದಯಕುಮಾರ ಕಾನಳ್ಳಿ, ಅರವಿಂದ ಬಳೆಗಾರ, ಸಿದ್ಧಲಿಂಗೇಶ ನೆರಗಲ್, ವಿನಯ ಗೌಡ ಹಾಗೂ ಗ್ರಾಪಂ ಸದಸ್ಯರು, ಸಾರ್ವಜನಿಕರು ಇದ್ದರು.

Exit mobile version